ಬಳ್ಳಾರಿ: ಜಿಲ್ಲಾ ಆರೋಗ್ಯ ಸಂಘ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚನೆ

Bellary: GPM CEO Rahul Sharanappa Sankanur's notice in the district health association meeting


ಬಳ್ಳಾರಿ: ಜಿಲ್ಲಾ ಆರೋಗ್ಯ ಸಂಘ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚನೆ

ಬಳ್ಳಾರಿ 31 : ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳ ಅಡಿ ಪ್ರಮಾಣೀಕರಣಕ್ಕೆ ಕಡ್ಡಾಯವಾಗಿ ಒಳಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. 

ನಗರದ ಜಿಲ್ಲಾ ಪಂಚಾಯತ್‌ನ ವಿಡಿಯೋ ಸಂವಾದ ಸಭಾಂಗಣದಲ್ಲಿ ಮಂಗಳವಾರ ಏರಿ​‍್ಡಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಮಟ್ಟದಲ್ಲಿ ಸಮುದಾಯಕ್ಕೆ ನೀಡುವ ಆರೋಗ್ಯ ಸೇವೆಗಳು ಗುಣಮಟ್ಟವಾಗಿರಲು ಎಲ್ಲ ಹಂತದಲ್ಲಿ ಪ್ರಮಾಣೀಕರಿಸಬೇಕು ಎಂದು ಅವರು ಹೇಳಿದರು. 

ಜಿಲ್ಲೆಯ ಆಯುಷ್ಮಾನ ಆರೋಗ್ಯ ಮಂದಿರಗಳು (ಉಪಕೇಂದ್ರಗಳು), ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳನ್ನು ವೈದ್ಯಾಧಿಕಾರಿಗಳು ತಮ್ಮ ಮುಂದಾಳತ್ವದಲ್ಲಿ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳ ಅಡಿಯಲ್ಲಿ ಪ್ರಮಾಣೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮಹತ್ವ ಪೂರ್ಣ ಕಾರ್ಯ ಕೈಗೊಳ್ಳಬೇಕು ಎಂದರು. 

ಜಿಲ್ಲೆಯ ಸಂಡೂರು, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕು ಒಳಗೊಂಡಂತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ, ಓಷಧಿಗಳ ಲಭ್ಯತೆ, ದಾಖಲಾತಿ ನಿರ್ವಹಣೆ, ವೈದ್ಯಕೀಯ ತ್ಯಾಜ್ಯ ವಿಲೇವಾರಿ, ತಾಯಿ ಮಗುವಿನ ಆರೈಕೆ, ಕುಟುಂಬ ಕಲ್ಯಾಣ ಸೇವೆಗಳು, ಸಾಂಕ್ರಾಮಿಕ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಪ್ರಯೋಗಾಲಯ ಸೇವೆಗಳು ಸೇರಿದಂತೆ ಮಾನದಂಡಗಳ ಅನುಗುಣವಾಗಿ ಸಮರೋಪಾದಿಯಲ್ಲಿ ಕ್ರಮವಹಿಸುವ ಮೂಲಕ ಮುಂಚೂಣಿ ಜಿಲ್ಲೆಯಾಗಿ ಮಾಡಲು ನಿಗಾವಹಿಸಬೇಕು ಎಂದು ತಿಳಿಸಿದರು. 

*ಕುಷ್ಟರೋಗ:* 

ಜಿಲ್ಲೆಯಲ್ಲಿ ಕುಷ್ಟರೋಗ ಪ್ರಕರಣಗಳ ನಿರ್ಮೂಲನೆಗಾಗಿ ಸಂಡೂರು ತಾಲ್ಲೂಕಿನ ಚೋರನೂರು ಮತ್ತು ಬಂಡ್ರಿ ವ್ಯಾಪ್ತಿಯಲ್ಲಿ ಹಾಗೂ ಪ್ರಕರಣಗಳು ಕಂಡು ಬಂದ ಗ್ರಾಮಗಳಲ್ಲಿ ಹೆಚ್ಚಿನ ಜಾಗೃತಿಯನ್ನು ಮನೆ ಭೇಟಿಯ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರ ಜೊತೆಗೆ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಶ್ರಮಿಸುವಂತೆ ಸೂಚಿಸಿದರು. 

*ಸಿಮಂತ ಕಾರ್ಯಕ್ರಮ ಹಮ್ಮಿಕೊಳ್ಳಿ:* 

ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಆರೈಕೆ ಕುರಿತು ಕುಟುಂಬದ ಸದಸ್ಯರಿಗೆ ಅದರಲ್ಲೂ ಚೊಚ್ಚಲು ಗರ್ಭಿಣಿ ಮತ್ತು ರಕ್ತದೊತ್ತಡ, ಮೊದಲ ಹೆರಿಗೆ ಸಿಜೇರಿಯನ್, ರಕ್ತಹೀನತೆ, ಬಹುದಿನಗಳ ನಂತರ ಗರ್ಭಿಣಿಯಾಗಿರುವುದು ಮುಂತಾದವುಗಳ ಸನ್ನಿವೇಶದಲ್ಲಿ ಕುಟುಂಬ ಸದಸ್ಯರು ವಹಿಸಬೇಕಾದ ಕಾಳಜಿ ಹಾಗೂ ತಪಾಸಣೆಗಳು, ಟಿಡಿ ಚುಚ್ಚುಮದ್ದು, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಹೆರಿಗೆ ನಂತರ ಮಕ್ಕಳಿಗೆ ನೀಡುವ 12 ಮಾರಕ ರೋಗಗಳ ಲಸಿಕೆ ಕುರಿತು ಗ್ರಾಮ ಮಟ್ಟದಲ್ಲಿ ಸಿಮಂತ ಕಾರ್ಯಕ್ರಮ ಏರಿ​‍್ಡಸಿ ಜಾಗೃತಿ ನೀಡಲು ಕ್ರಿಯಾಯೋಜನೆ ರೂಪಿಸಬೇಕು. ನಿರಂತರ ನಿಗಾವಣೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಪ್ ಆಧಾರಿತ ಸೇವೆ ಸಿದ್ದಪಡಿಸಿಕೊಳ್ಳಲು ಸೂಚಿಸಿದರು. 

*ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ; 100 ದಿನಗಳ ಅಭಿಯಾನ:* 

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇರುವ ಹಾಗೂ ಕ್ಷಯರೋಗದ ಇತರೆ ಲಕ್ಷಣಗಳ ಕುರಿತು ಮಾಹಿತಿ ನೀಡಿ ಹ್ಯಾಂಡ್‌ಹೊಲ್ಡ್‌ ಎಕ್ಸ್‌-ರೇ ಯಂತ್ರವನ್ನು ಸದುಪಯೋಗ ಪಡೆದು ಲಭ್ಯವಿರುವ ರೆಡಿಯೋಲಾಜಿಸ್ಟ್‌ ಮೂಲಕ ಎಕ್ಸ್‌-ರೆ ಪರೀಶೀಲಿಸಿ ಚಿಕಿತ್ಸೆ ನೀಡಬೇಕು. ಪ್ರತಿ ತಾಲ್ಲೂಕಿಗೆ ಒಂದರಂತೆ ಹ್ಯಾಂಡ್‌ಹೊಲ್ಡ್‌ ಎಕ್ಸ್‌-ರೇ ಯಂತ್ರವನ್ನು ಸಜ್ಜುಗೊಳಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. 

*ಗೃಹ ಆರೋಗ್ಯ:* 

ಮಹಿಳೆಯರು ಸೇರಿದಂತೆ 30 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರು ರಕ್ತದೊತ್ತಡ ಪರೀಕ್ಷೆಯನ್ನು ಕೈಗೊಳ್ಳುವ ಮೂಲಕ ಮನೆ ಮಟ್ಟದಲ್ಲಿಯೇ ಓಷಧಿ ವಿತರಿಸುವ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಗೃಹ ಆರೋಗ್ಯ ಯೋಜನೆಯನ್ನು ಯಶಸ್ವಿಗೊಳಿಸಲು ತಿಳಿಸಿದರು. 

ಜಿಲ್ಲೆಯಲ್ಲಿ ಈಗಾಗಲೇ ಗುರ್ತಿಸಲ್ಪಟ್ಟ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 14 ದಿನಗಳ ಕಾಲ ತರಬೇತಿ ಪಡೆದ ಸಿಬ್ಬಂದಿಯವರಿಂದ ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕುಗಳ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ತಯಾರಿಕೆ ಕುರಿತು ಮಾಹಿತಿ ನೀಡಿ ಕೇಂದ್ರಗಳನ್ನು ಬಲಪಡಿಸಿ ಹೆಚ್ಚು ಹೆಚ್ಚು ಮಕ್ಕಳನ್ನು ದಾಖಲಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು. 

ಸಭೆಯಲ್ಲಿ ಡೆಂಗ್ಯು ನಿಯಂತ್ರಣಕ್ಕಾಗಿ ತಂಡಗಳನ್ನು ರಚಿಸಿ ಲಾರ್ವಾ ಸಮೀಕ್ಷೆ ನಿರಂತರವಾಗಿ ಕೈಗೊಳ್ಳಲು,  ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ನೋ-ಸ್ಕಾಲ್‌ಪೆಲ್ ವ್ಯಾಸೆಕ್ಟುಮಿ ವಿಧಾನವನ್ನು ಹೆಚ್ಚು ಜನಪ್ರಿಯಗೊಳಿಸಲು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಟ್ಟ ಮಕ್ಕಳನ್ನು ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಡಿಇಐಸಿ ಕೇಂದ್ರಕ್ಕೆ ಕಳುಹಿಸಿ ಶಸ್ತ್ರಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು, ಶಾಲಾ ಮಕ್ಕಳ ಆರೋಗ್ಯ ಜಾಗೃತಿಯ ಆರೋಗ್ಯ ಸಿಂಚನದಡಿ ನಿರಂತರ ಜಾಗೃತಿ ನೀಡಲು, ಅಂಗಾಂಗ ದಾನದಡಿ ಜಾಗೃತಿ ನೀಡಿ ನೋಂದಣಿ ಹೆಚ್ಚಿಸಲು, ಮಾನಸಿಕ ರೋಗಗಳ ಜಾಗೃತಿಗಾಗಿ 14416 ಉಚಿತ ಸಹಾಯವಾಣಿ ಸಂಖ್ಯೆ ಕುರಿತಾಗಿ ಸುಧೀರ್ಘ ಚರ್ಚೆ ನಡೆಸಿ ನಿರ್ದೇಶನ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್‌.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರ ಕುಮಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಬಾಯಿ ಆರೋಗ್ಯ ದಂತ ಕಾರ್ಯಕ್ರಮದ ಡಾ.ವಿಶಾಲಾಕ್ಷಿ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಸವರಾಜ್ ದಮ್ಮೂರು, ಡಾ.ಭರತ್, ಡಾ.ಮಂಜುನಾಥ ಜವಳಿ, ಡಾ.ಅರುಣ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌.ದಾಸಪ್ಪನವರ, ಡಾ.ಸುರೇಶ, ಡಿಎನ್‌ಒ ಗೀರೀಶ್, ಡಿಪಿಎಮ್ ವೆಂಕೋಬ ನಾಯ್ಕ, ಮನೋಹರ, ಬಸವರಾಜ್ ಸೇರಿದಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಇತರೆ ಇಲಾಖೆ ಸಿಬ್ಬಂದಿ ಹಾಜರಿದ್ದರು.