ಸ್ವಾಸ್ಥ್ಯ ಬದುಕಿಗೆ ಪರಿಸರ ಬೆಳೆಸಿ: ಶಂಕರಗೌಡ ಸೋಮನಾಳ

Cultivate an environment for healthy living: Shankaragowda Somanala

ಸ್ವಾಸ್ಥ್ಯ ಬದುಕಿಗೆ ಪರಿಸರ ಬೆಳೆಸಿ: ಶಂಕರಗೌಡ ಸೋಮನಾಳ 

ವಿಜಯಪುರ, 05 : ಸ್ವಾಸ್ಥ್ಯ ಬದುಕಿಗೆ ಪರಿಸರ ಬೆಳೆಸಿ ಎಂದು  ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.  ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಎನ್‌.ಎಸ್‌.ಎಸ್‌. ಕೋಶದ ವತಿಯಿಂದ ಗುರುವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಗರೀಕರಣದ ಧಾವಂತದಲ್ಲಿ ಇಂದು ಕಾಡು ನಾಶವಾಗುತ್ತಿದ್ದು, ‘ಕಾಡು ಕಡಿದು ನಾಡು ಬೆಳೆಸಿ’ ಎಂಬ ಮನೋಭಾವನೆ ಕಂಡುಬರುತ್ತದೆ. ಮುಂದಿನ ಪೀಳಿಗೆಯ ಆರೋಗ್ಯಕರ ಬದುಕಿಗೆ ಹಾಗೂ ಎಲ್ಲ ಜೀವರಾಶಿಗಳ ಸಂಕಲನದ ರಕ್ಷಣೆಗೆ ಪರಿಸರವನ್ನು ಉಳಿಸಿ ಬೆಳಸಬೇಕಾಗಿದೆ. ಪ್ರತಿ ವಿದ್ಯಾರ್ಥಿಯು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರೊ. ವಿಷ್ಣು ಶಿಂದೆ, ಪ್ರೊ. ಉದಯಕುಮಾರ ಕುಲಕರ್ಣಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.  ಎನ್‌.ಎಸ್‌.ಎಸ್‌. ಕೋಶದ ಸಂಯೋಜನಾಧಿಕಾರಿ ಪ್ರೊ. ಅಶೋಕ ಸುರಪುರ ಸ್ವಾಗತಿಸಿದರು. ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಡಾ. ನಟರಾಜ ದುರ್ಗಣ್ಣವರ ವಂದಿಸಿದರು.