ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಕೊಪ್ಪಳ 10: ಜಿಲ್ಲಾ ಯುವ ಕಾಂಗ್ರೆಸ್ನ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ಜರುಗಿತು. ಇದಕ್ಕೂ ಮುಂಚೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಬೈಕ್ ರಾ್ಯಲಿ ಮೂಲಕ ಪಕ್ಷದ ಕಚೇರಿವರೆಗೆ ಯುವ ಕಾಂಗ್ರೆಸ್ ಧ್ವಜ ಜಾಥಾ ಮಾಡಿದರು. ಈ ಸಂದರ್ಭದಲ್ಲಿ ಯುವ ಘಟಕ ರಾಜ್ಯ ಉಪಾಧ್ಯಕ್ಷೆ ಕುಮಾರಿ ದೀಪಿಕಾ ರಡ್ಡಿ ಮಾತನಾಡಿ, ಯುವ ಕಾಂಗ್ರೆಸ್ ಉಳಿದ ಎಲ್ಲಾ ಮುಂಚೂಣಿ ಘಟಕಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಯುವಜನರನ್ನು ಇತ್ತ ಸೆಳೆಯಬೇಕಿದೆ, ಪಕ್ಷದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸುವ ಹೊಸ ಸಂಪ್ರದಾಯ ಆರಂಭವಾಗಿದೆ, ಚುನಾವಣೆ ಮೂಲಕ ಗೆದ್ದುಬಂದಿರುವ ತಮಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಇದ್ದು, ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ತಮ್ಮ ಉಸ್ತುವಾರಿ ಇರುವ ಕೊಪ್ಪಳ ನಂಬರ್ ಒನ್ ಆಗಿ ಮೂಡಿಬರಲಿ, ಕೆಪಿಸಿಸಿ ಅಧ್ಯಕ್ಷರು ಕರೆದು ಸನ್ಮಾನ ಮಾಡುವ ಹಾಗೆ ಕೆಲಸ ಮಾಡಲಿ ಎಂದು ಹಾರೈಸಿದರು. ಕಾಂಗ್ರೆಸ್ ಜಿಲ್ಲಾ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಅವರು ಭಾಗವಹಿಸಿ ಮಾತನಾಡುತ್ತ, ಪಕ್ಷದಲ್ಲಿ ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಒಂದಿಲ್ಲೊಂದು ಅವಕಾಶ ಸಿಕ್ಕೇ ಸಿಗುತ್ತದೆ, ಜಿಲ್ಲೆಯಲ್ಲಿ ಮೂರು ಜನ ಶಾಸಕರು ಮತ್ತು ಪಕ್ಷದ ಅಧ್ಯಕ್ಷರು ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ, ಪಕ್ಷ ಅಧಿಕಾರದಲ್ಲಿದೆ ಈಗ ಜನರಿಗೆ ನಮ್ಮ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಬೇಕು ಜೊತೆಗೆ ನಿರಂತರವಾಗಿ ಸಭೆ, ತರಬೇತಿ, ಶಿಬಿರ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಳಕ ಪಕ್ಷದ ಚಟುವಟಿಕೆಗಳನ್ನು ನಿರಂತರವಾಗಿ ಮಾಡಬೇಕು, ಗ್ಯಾರಂಟಿ ಯೋಜನೆಗಳು ನಿಜಕ್ಕೂ ಬಡವರಿಗೆ ಅನುಕೂಲವಾಗಿದ್ದು, ಯುವನಿಧಿ ಕುರಿತು ಹೆಚ್ಚಿನ ಅರಿವು ಮೂಡಿಸಲು ಯುವ ಕಾಂಗ್ರೆಸ್ ಕೆಲಸ ಮಾಡಬೇಕಿದೆ ಎಂದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಇಲಾಯಿ ಸಿಕಂದರ್ ಮತ್ತು ರವಿಕುಮಾರ್ ಗದಗ ಇದ್ದರು. ಸಭೆಯ ನೇತೃತ್ವ ಮತ್ತು ಅಧ್ಯಕ್ಷತೆಯನ್ನು ಜಿಲ್ಲಾ ಯುವ ಘಟಕ ಅಧ್ಯಕ್ಷ ಲಿಂಗೇಶ ಕಲ್ಗುಡಿ ವಹಿಸಿಕೊಂಡಿದ್ದರು. ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಮತ್ತು ಮೂರನೇ ಹಂತದ ನಾಯಕತ್ವ ಬೆಳೆಸಲು ಅನೇಕ ಯೋಜನೆಗಳನ್ನು ಚರ್ಚಿಸಲಾಯಿತು. ಪ್ರತಿ ತಿಂಗಳು ಒಂದೊಂದು ತಾಲೂಕಿನಲ್ಲಿ ಜಿಲ್ಲಾ ಕಾರ್ಯಕಾರಿಣಿ ನಡೆಸಲು ಸಭೆಯಲ್ಲಿ ಚರ್ಚೆಯಾಯಿತು. ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಕಾರ್ಯಕ್ರಮ ರೂಪಿಸುವ ಬಗ್ಗೆಯೂ ತಿಳಿಸಿಕೊಡಲಾಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಇದ್ದರು.