ಸುಂದರ ಜೀವನಕ್ಕೆ ಪರಿಸರ ರಕ್ಷಣೆಯೊಂದೇ ದಾರಿ: ಪ್ರಶಾಂತ ದೇಸಾಯಿ

Environmental protection is the only way to a beautiful life: Prashant Desai

ಸುಂದರ ಜೀವನಕ್ಕೆ ಪರಿಸರ ರಕ್ಷಣೆಯೊಂದೇ ದಾರಿ: ಪ್ರಶಾಂತ ದೇಸಾಯಿ  

ಬೆಳಗಾವಿ 05: ಸರಳ ಸುಂದರ ಜೀವನಕ್ಕೆ ಪರಿಸರ ರಕ್ಷಣೆಯೊಂದೇ ದಾರಿ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಅವರು  ಹೇಳಿದರು.  ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರು ಪರಿಸರ ದಿನಾಚರಣೆಯ ಮಹತ್ವವನ್ನು ಅರಿತು ಜಾಗೃತರಾಗಬೇಕಿದೆ. ಇದಕ್ಕೆಂದು ಸಾಕಷ್ಟು ಜಾಗೃತಿ ಅಭಿಯಾನಗಳು ಹಮ್ಮಿಕೊಳ್ಳುತ್ತಲಿದ್ದರೂ ನಮ್ಮ ಮಣ್ಣು, ನೀರು, ಗಾಳಿ ಹೀಗೆ ಪರಿಸರವೇ ನಾಶವಾಗುತ್ತಿದೆ. ಗಿಡ ನೆಡುವುದರ ಮೂಲಕ ಮಣ್ಣಿನ ಸವಕಳಿ ತಪ್ಪಿಸಬಹುದಾಗಿದೆ. ಪರಿಸರದಲ್ಲಿನ ಕಲ್ಮಶಗಳನ್ನು ಹೊಡೆದೋಡಿಸಲು ಗಿಡಗಳನ್ನು ನೆಡುವದರ ಮೂಲಕ ಪ್ರತಿ ದಿನ ಪರಿಸರ ದಿನವನ್ನಾಚರಿಸೋಣ ಎಂದು ಕರೆ ನೀಡಿದರು.  ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್ ಜಿ ನೆಲವಿಗಿ ಅವರು ಮಾತನಾಡುತ್ತ ಮನೆಗೊಂದು ಗಿಡ ನೆಡುವ ಮುಖಾಂತರ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರಾಗಿದೆ. ಈ ಮೂಲಕ ನಾವೆಲ್ಲರೂ ಸ್ವಚ್ಛ ಗಾಳಿಯನ್ನು ಸೇವಿಸಲು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಆಯಾಮವನ್ನು ಕಂಡುಕೊಂಡಂತಾಗುತ್ತದೆ. ಗಿಡನೆಡುವದರ ಮೂಲಕ ಮಣ್ಣಿನ ಸವಕಳಿ, ಮಳೆ ನೀರು ನೆಲದಲ್ಲಿ ಇಂಗುವದು, ಶುದ್ದ ಆಮ್ಲಜನಕದ ಉತ್ಪತ್ತಿ ಹೀಗೆ ನಾನಾ ಲಾಭಗಳನ್ನು ಪಡೆಯಬಹುದಾಗಿದೆ. ಆದರಲ್ಲೂ  ಜಾಗತಿಕ ತಾಪಮಾನ ಹೆಚ್ಚಾಗದಂತೆ ತಡೆಯಲು ನಮ್ಮ ಕೊಡುಗೆಯನ್ನು ನೀಡದಂತಾಗುತ್ತದೆ ಎಂದು ತಿಳುವಳಿಕೆ ನೀಡಿದರು.  ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಬಿ, ಡಾ. ಶ್ರೀಕಾಂತ ಮೇತ್ರಿ, ಡಾ. ರಿಕಿ ಪಾಟೀಲ  ಎಲುಬು ಕೀಲು ವಿಭಾಗದ ವೈದ್ಯರಾದ ಡಾ. ಅಮಿತ ಪಿಂಗಟ, ಡಾ. ಸಿ ವಿ ಶೆಟ್ಟರ, ಶಸ್ತ್ರಚಿಕಿತ್ಸಕರಾದ ಡಾ. ಅಜಯ ಕಾಳೆ, ಡಾ. ಅಶೋಕ ಕೌಲಗುಡ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.  ಪ್ರಶಾಂತ ದೇಸಾಯಿ ಹಾಗೂ ಡಾ. ಆರ್ ಜಿ ನೆಲವಿಗಿ ಅವರು ಮತ್ತು ಆಸ್ಪತ್ರೆಯ ಸಮಸ್ತ ವೈದ್ಯಕೀಯ ವೈದ್ಯಕೀಯೇತರ ಸಿಬ್ಬಂದಿ ಆಸ್ಪತ್ರೆಯ ಆವರಣದಲ್ಲಿ ಸಸಿಗಳನ್ನು ನೆಡುವದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.