ಕೆಲಸ ಹಾಗೂ ಕಾಮಗಾರಿಗಳು ಪೆಂಡಿಂಗ್ ಇರದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ
ಕೊಪ್ಪಳ 06: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಇರುವ ಅನುದಾನ ಜಿಲ್ಲೆಯಲ್ಲಿ ಸಮರ್ಕವಾಗಿ ಬಳಕೆಯಾಗಬೇಕು ಮತ್ತು ಯಾವುದೇ ಕೆಲಸ ಹಾಗೂ ಕಾಮಗಾರಿಗಳು ಪೆಂಡಿಂಗ್ ಇರದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ-2013 ರನ್ವಯ ಅನುಸೂಚಿತ ಜಾತಿಗಳು ಉಪಯೋಜನೆ, ಬುಡಕಟ್ಟು ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ, ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಿಂದಿನ ವರ್ಷದ ಯಾವುದೇ ಕೆಲಸ ಕಾಮಗಾರಿಗಳು ಬಾಕಿ ಇರದಂತೆ ನೋಡಿಕೊಳ್ಳಬೇಕು ಮತ್ತು ಒಂದು ವರ್ಷ ಮುಂಚಿತವಾಗಿ ಯೋಜನೆಗಳನ್ನು ರೂಪಿಸಬೇಕು. ಅಂದಾಗ ಆ ಕೆಲಸಗಳನ್ನು ಬೇಗನೆ ಮುಗಿಸಲು ಅನುಕೂಲವಾಗುತ್ತದೆ ಮತ್ತು ಯಾವುದೇ ಕೆಲಸಗಳಿಗೆ ವಿಳಂಬವಾಗುವುದಿಲ್ಲ. ಪರಿಶಿಷ್ಟ ಜಾತಿಯ ಕಾಲನಿಗಳಲ್ಲಿ ಶಾಲೆ. ಅಂಗನವಾಡಿ. ಗ್ರಂಥಾಲಯಗಳು. ರಸ್ತೆ. ಚರಂಡಿ. ನೀರು ಏನು ಅವಶ್ಯಕತೆ ಇದೆ ಅವುಗಳ ಯೋಜನೆಗಳನ್ನು ರೂಪಿಸಬೇಕೆಂದು ಹೇಳಿದರು.
ದೌರ್ಜನ್ಯಕ್ಕೆ ಒಳಗಾಗಿ ಮರಣ. ರೇಫ್ ಹಾಗೂ ಇಂಜೂರಿಯಾದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಕನಿಷ್ಠ 5 ಲಕ್ಷದಿಂದ ಗರಿಷ್ಠ 10 ಲಕ್ಷಗಳವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ನೀಡುವ ಪರಿಹಾರ ಸಕಾಲದಲ್ಲಿ ಅವರಿಗೆ ಸಿಗುವಂತಾಗಲಿ. ತಮಗೆ ಅವಶ್ಯಕತೆ ಇದ್ದರೆ ಹೆಚ್ಚಿನ ಅನುದಾನವನ್ನು ನೀಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನಮ್ಮ ಜಿಲ್ಲೆಗೆ ನೀಡಿದ 400 ಕೋಟಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗಾಗಿ ಆ ಅನುದಾನದಲ್ಲಿ 100 ಕೋಟಿ ರೂ. ವರೆಗೆ ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕಿ ರೇಷ್ಮಾ ಹಾನಗಲ್.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕೊಟ್ರೇಶ ಮರಬನಳ್ಳಿ. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೆಶಕರಾದ ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.