ಬಾಗಲಕೋಟೆ 01 : ಜೂನ್ 1 ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಬೆಂಗಳೂರು ನಗರ ವಿವಿಯ ನಿವೃತ್ತ ಕುಲಪತಿಗಳು ಹಾಗೂ ಬೆಂಗಳೂರು ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಎನ್ ನರಸಿಂಹಮೂರ್ತಿಯವರು ಅಭಿಪ್ರಾಯಪಟ್ಟರು .
ಅವರು ಇತ್ತೀಚೆಗೆ ಬಾಗಲಕೋಟೆ ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ಏರಿ್ಡಸಿದ್ದ ಸಮಾಜ ಮತ್ತು ಮಾಧ್ಯಮಗಳು ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಯುಗ ಎಲೆಕ್ಟ್ರಾನಿಕ್ಸ್ ಮಾಧ್ಯಮ ಯುಗ ಸಾಮಾಜಿಕ ಜಾಲತಾಣಗಳ ಯುಗ ಗಳ ವಿಚಾರಗಳು ಮರೆಯಾಗುತ್ತಿದ್ದು ಇನ್ನು ಮುಂದೆ ಆನ್ಲೈನ್ ಯುಗ ಎನ್ನುವಂಥದ್ದು ಬರುತ್ತಿದೆ ಎಂದು ತಿಳಿಸಿದರು. ಇಂದಿನ ಸಂದರ್ಭದಲ್ಲಿ ಯುವ ಜನಾಂಗದವರು ಮಾಧ್ಯಮ ಕ್ಷೇತ್ರಕ್ಕೆ ಆಗಮಿಸುತ್ತಿದ್ದು ಅವರು ಸಮಾಜಮುಖಿಯಾಗಿ ಯೋಚಿಸುವ ಕೆಲಸವನ್ನು ಮಾಡಬೇಕೆಂದು ಅವರು ಅಭಿಪ್ರಾಯ ಪಟ್ಟರು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಪ್ರಾಮಾಣಿಕರಾಗಿ ಮತ್ತು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲ ಸಚಿವರಾದ ಪ್ರೊ ದಯಾನಂದ ಸಾವುಕಾರ ಅವರು ಮಾತನಾಡುತ್ತಾ ನಮ್ಮ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಮೊಟ್ಟಮೊದಲನೆಯದಾಗಿ ಪತ್ರಕರ್ತರಿಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಗಾರದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪ್ರಸ್ತುತ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ವಿಚಾರಗಳನ್ನು ಚರ್ಚಿಸಿದರು ಎಂದು ಅವರು ತಿಳಿಸಿದರು. ಡಾ ಚಿದಾನಂದ ದವಳೇಶ್ವರ ಅವರು ಸ್ವಾಗತಿಸಿದರು ಪ್ರಸಾರಂಗದ ನಿರ್ದೇಶಕರಾದ ಮಲ್ಲಿಕಾರ್ಜುನ ಮರಡಿಯವರು ವರದಿ ವಾಚಿಸಿದರು ಕಾರ್ಯಾಗಾರದ ಸಹಸಂಚಾಲಕರಾದ ಡಾ ಆರ್ ನಾಗರಾಜ್ ಅವರು ವಂದಿಸಿದರು.
ಈ ಕಾರ್ಯಗಾರದಲ್ಲಿ ತುಮಕೂರಿನ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ ಟಿ ಮುದ್ದೇಶ್ ಅವರು ನವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕುರಿತು, ಮೈಸೂರಿನ ಮಾಧ್ಯಮ ವಿಶ್ಲೇಷಕರಾದ ಡಾ ಅಮ್ಮ ಸಂದ್ರ ಸುರೇಶ್ ಅವರು ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಕೃಷಿ ಪತ್ರಿಕೋದ್ಯಮ ಕುರಿತು. ಬಳ್ಳಾರಿಯ ಹಿರಿಯ ಪತ್ರಕರ್ತರಾದ ಪ್ರೊ ಸಿ ಮಂಜುನಾಥ್ ರವರು ಸಾಹಿತ್ಯ ಮತ್ತು ಮಾಧ್ಯಮ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.