ಪರಿಸರ ದಿನಾಚರಣೆ: ಪರಿಸರ ಜಾಗೃತಿ, ಕಾರ್ಖಾನೆ ವಿರೋಧಿ ಸಂದೇಶ ಸಾರಿದ ಮದುವೆ ಮಂಟಪ
ಕೊಪ್ಪಳ 05: ಇಲ್ಲಿನ ಪ್ಯಾಟಿ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಗೊಂಡಬಾಳ ಕುಟುಂಬದ ಮದುವೆ ಸಮಾರಂಭದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ಜಾಗೃತಿ ಮತ್ತು ಕೊಪ್ಪಳ ಹತ್ತಿರದ ಕಾರ್ಖಾನೆ ವಿರೋಧಿ ಸಂದೇಶ ಮೊಳಗಿದ್ದು ವಿಶೇಷ. ಸದಾ ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಮತ್ತು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಲ್ಲಿ ಒಬ್ಬರಾಗಿರುವ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ತಮ್ಮ ಸಹೋದರ ಸಂಬಂಧಿ ಜಗದೀಶ ಈರಣ್ಣ ಗೊಂಡಬಾಳ ಮತ್ತು ಅನಿತಾ ಮುದಿಯಪ್ಪ ತಾವರಗೇರಿ ಅವರ ಮದುವೆ ಸಮಾರಂಭವನ್ನೇ ಜಾಗೃತಿಗಾಗಿ ಬಳಸಿದ್ದು ನೆರೆದವರಲ್ಲಿ ಪುಳಕ ತಂದಿತು. ಬಂದ ಅತಿಥಿ, ಗಣ್ಯರು, ಕುಟುಂಬದವರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಸಸಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗಿಡಮರ ಬೆಳೆಸಿ ಪರಿಸರ ಉಳಿಸಿ, ಅನಾವಶ್ಯಕ ಗಿಡ ಕಡಿದು ನಮ್ಮ ಪೀಳಿಗೆ ಹಾಳು ಮಾಡಬೇಡಿ, ಕಾರ್ಖಾನೆಗಳು ಅಭಿವೃದ್ಧಿಗಿಂತ ಪರಿಸರ ಮಾರಕವಾಗಿರುವದು ಈ ಶತಮಾನದ ದುರಂತ, ಶುದ್ಧ ಪರಿಸರಕ್ಕೆ, ಮುಂದಿನ ಸಂತಾನ ಉಳಿಸಲು ಅನಾವಶ್ಯಕ ಕಾರ್ಖಾನೆಗಳು ತೊಲಗಲೇಬೇಕು, ಬಲ್ಡೋಟಾ ಕಾರ್ಖಾನೆ ತೊಲಗಲಿ, ಕೊಪ್ಪಳ ಜನರ ಜೀವ ಉಳಿಯಲಿ, ಗವಿಶ್ರೀಗಳು ಹೇಳಿದ ಕಾರ್ಖಾನೆ ಸ್ಥಾಪನೆ ತೊಟ್ಟಿಲು ತೂಗುವ ಕೈಗಿಂತ ಮಸಣಕ್ಕೆ ಸೇರುವವರ ಸಂಖ್ಯೆ ಹೆಚ್ಚು ಮಾಡುತ್ತದೆ ಎಂಬ ಘೋಷಣೆಗಳನ್ನು ಹಾಕಲಾಗಿದೆ. ನೂರಾರು ಜನರಿಗೆ ಸಸಿ ವಿತರಿಸಿ ಗಿಡಮರ ಬೆಳೆಸುವಂತೆ ಕೋರಲಾಯಿತು. ಇದೇ ವೇಳೆ ಪರಿಸರ ಜಾಗೃತಿ ಗೀತೆಗಳನ್ನು ಮದುವೆ ಮಂಟಪದಲ್ಲಿ ಹಾಕಲಾಗಿತ್ತು. ಈ ವೇಳೆ ಆನಂದ ಗೊಂಡಬಾಳ, ಮಂಜುನಾಥ ಸೊರಟೂರ, ಶರಣಪ್ಪ ನಾಯಕ, ರುಕ್ಮಣ್ಣ ಶ್ಯಾವಿ, ಶ್ರೀಶೈಲಪ್ಪ ನಿಡಶೇಶಿ, ಚನ್ನಪ್ಪ ರೋಣದ, ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಈರಣ್ಣ ಗೊಂಡಬಾಳ, ಹನುಮಂತ ಗೊಂಡಬಾಳ, ಹನುಮಂತ ನಾಯಕ, ರಾಘವೇಂದ್ರ ಅನೇಕರು ಇದ್ದರು.