ರನ್ನ ಬೆಳಗಲಿಯಲ್ಲಿ ಧರ್ಮಸ್ಥಳ ಸಂಘ ದಿಂದ ಪರಿಸರ ಜಾಗೃತಿ ಕಾರ್ಯಕ್ರಮ

Environmental awareness program by Dharmasthala Sangha in Ranna Belagali

ರನ್ನ ಬೆಳಗಲಿ 06: ಪಟ್ಟಣದ ಸದಾಶಿವ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಾಸ್ಟ್‌(ರಿ) ಮುಧೋಳ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನ ದಂತೆ ಗುರುವಾರ ದಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ "ಪರಿಸರ ಮಾಹಿತಿ ಹಾಗೂ ಸಸಿ ನೆಡುವ" ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. 

ಚನ್ನಕೇಶವ ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕರು ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಸಂಘವು ಪ್ರತಿ ವರ್ಷವೂ ವನಮಹೋತ್ಸವ, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರ್ತಾ ಇದೆ. ಈ ದಿನ ಮಧ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡು ಹೊಸ ಜೀವನಕ್ಕೆ ಕಾಲಿಟ್ಟ ನವಜೀವನ ಸದಸ್ಯರಿಂದ 10 ಪ್ರಮುಖ ಊರುಗಳಲ್ಲಿ ಕಾರ್ಯಕ್ರಮ ಆಯೋಜಿಸಿ, ಪ್ರತಿ ಕಾರ್ಯಕ್ರಮದ ಅಡಿಯಲ್ಲಿ ಒಂದು ನೂರು ಸಸಿ ನಾಟಿ ಮಾಡುವುದರ ಮೂಲಕ ಮುಧೋಳ ತಾಲೂಕಿನಲ್ಲಿ 1,000 ಸಸಿಗಳನ್ನು ಬೆಳೆಸಿ, ಉಳಿಸಿ ಪ್ರಕೃತಿಗೆ ನೀಡುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಶ್ರೀಶೈಲಗೌಡ ಪಾಟೀಲ ಧರ್ಮಸ್ಥಳ ಸಂಘದ ನಿರ್ದೇಶಕರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯವಾಗಿದೆ ಪ್ರತಿ ವರ್ಷ ಒಂದು ಮರವನ್ನಾದರು ಬೆಳೆಸಿ ಉಳಿಸುವ ಪ್ರಯತ್ನ ನಮ್ಮದಾಗಬೇಕು ಎಂದು ತಿಳಿಸಿದರು. 

ಪರಮಾನಂದ ಸಂಕ್ರಟ್ಟಿ ರೈತ ಮುಖಂಡರು ಮೂಡನಂಬಿಕೆಯಿಂದ ಹೊರಬಂದು ಸಸಿಗಳನ್ನು ಮಕ್ಕಳಂತೆ ಬೆಳೆಸಿ, ಗಿಡಮರಗಳು ನಮಗೆ ಉಸಿರು ನೀಡುತ್ತವೆ ಕೇವಲ ಜೂನ್ 5ಕ್ಕೆ ಈ ಕಾರ್ಯಕ್ರಮ ಸೀಮಿತವಾಗಬಾರದು ಎಂದು ತಿಳಿಸಿದರು.ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ಪರಿಸರಕ್ಕೆ ನಾವು ಅನಿವಾರ್ಯರಲ್ಲ, ನಮಗೆ ಪರಿಸರ ಬಿಟ್ಟರೆ ಬದುಕಿಲ್ಲ.ಪಂಚ ಮಹಾಭೂತಗಳನ್ನೂ ಮಲಿನಗೊಳಿಸಿದ ನಾವು, ನಮಗೆ ಅರಿವಿಲ್ಲದೆ ನವು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಪ್ರಕೃತಿ ಅನೇಕ ತಲ್ಲಣಗಳಿಂದ ನಮ್ಮನ್ನು ಎಚ್ಚರಿಸಿದರೂ, ನಮ್ಮ ಸ್ವಾರ್ಥ ಭಾವದಿಂದ ಪರಿಸರವನ್ನೇ ನಾಶಪಡಿಸುತ್ತಿದ್ದೇವೆ. ಪರಿಸರ ನಾಶವೇ ಮನುಕುಲದ ಸರ್ವನಾಶ ಮುಂದಿನ ಪೀಳಿಗೆಯ ಉತ್ತಮ ಆರೋಗ್ಯಕ್ಕಾಗಿ ಮರ ಬೆಳೆಸಿ ಎಂದು ತಿಳಿಸಿದರು.ಶ್ರೀಮತಿ ರೂಪಾ ಸದಾಶಿವ ಹೊಸಟ್ಟಿ ಅಧ್ಯಕ್ಷರು ಪ.ಪಂ ರನ್ನ ಬೆಳಗಲಿ ಅವರು  ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗಿಡ ಮರ ಬೆಳೆಸೋಣ ಭೂಮಿಯ ಅಂದ ಹೆಚ್ಚಿಸಿ ಆರೋಗ್ಯವಂತರಾಗೋಣ ಎಂದು ಕರೆ ನೀಡಿದರು. 

ಮುತ್ತಪ್ಪ ಸಂಕ್ರಟ್ಟಿ ಅಧ್ಯಕ್ಷರು ಎಸ್‌.ಡಿ.ಎಂ.ಸಿ, ಬಿ ಆರ್ ಗಂಗರಡ್ಡಿ ಮುಖ್ಯೋಪಾಧ್ಯಾಯರು, ರಾಜು ಎಸ್ ಆಚಾರ್ಯ ತಾಲೂಕ ಯೋಜನಾಧಿಕಾರಿಗಳು, ಸಂಗಮೇಶ ಕಣಬೂರ ಅಧ್ಯಕ್ಷರು ನವ ಜೀವನ ಸಂಘ ರನ್ನ ಬೆಳಗಲಿ, ಸಾಯವ್ವ ತೋಳನೂರ ಅಧ್ಯಕ್ಷರು ಮಹಿಳಾ ಒಕ್ಕೂಟ, ಸದಾಶಿವ ಹೊಸಟ್ಟಿ ಯುವ ಮುಖಂಡರು, ಶಿವಾನಂದ ಪಟ್ಟಣಶೆಟ್ಟಿ ಅಧ್ಯಕ್ಷರು ನವಜೀವನ ಸಂಘ ಡವಳೇಶ್ವರ, ಪ್ರವೀಣ ಪೂಜೇರಿ  ಮೇಲ್ವಿಚಾರಕರು, ನಾಗಮ್ಮ ಪೂಜೇರಿ ಸೇವಾ ಪ್ರತಿನಿಧಿ ಹಾಗೂ ನವಜೀವನ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.