ವಿಜಯಪುರ 17: ಯೋಗವು ದೇಹವನ್ನು ನಿರೋಗಿಯನ್ನಾಗಿ ಮಾಡಿ, ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಬಲಪಡಿಸುವ ಒಂದು ಸಾಧನವಾಗಿದೆ, ಆದ್ದರಿಂದ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳೋಣ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವಿದ್ಯಾವತಿ ಎಮ್ ಅಥಣಿ ಅವರು ಹೇಳಿದರು.
ಜೂನ್ 21ರಂದು ನಡೆಯಲಿರುವ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯೋಗ ಧನುಷ್ ಮತ್ತು ಹಸಿರು ಯೋಗ (ಹರಿತ ಯೋಗ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದೃಢ ಹಾಗೂ ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಒತ್ತಡದ ಜೀವನದಲ್ಲಿ ಮಾನಸಿಕವಾಗಿ ನೆಮ್ಮದಿ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
ದಿನನಿತ್ಯ ಯೋಗ ರೂಢಿಸಿಕೊಳ್ಳುವುದರಿಂದ ಮನುಷ್ಯ ನಿರೋಗಿಯಾಗಿ ಜೀವನ ನಡೆಸಲು ಸಹಾಯಕವಾಗುತ್ತದೆ. ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯ ಯೋಗ ಫಾರ್ ಒನ್ ಹೇಲ್ತ್ ಒನ್ ಅರ್ಥ್ ಎಂದರೆ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬುದಾಗಿದೆ ಎಂದು ಹೇಳಿದರು. ಹರಿತಯೋಗ ಅಥವಾ ಹಸಿರು ಯೋಗದ ಬಗ್ಗೆ ವಿವರಿಸಿದ ಅವರು, ಪ್ರಕೃತಿಯಲ್ಲಿ ಗಿಡಮರಗಳಿಗೆ ಬಹಳ ಮಹತ್ವವಿದೆ. ಆದ್ದರಿಂದ ಸಸಿಗಳನ್ನು ನೆಡುವುದರ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡೋಣ ಎಂದು ಹೇಳಿದರು.
ಕಾರಾಗೃಹದ ಅಧೀಕ್ಷಕ ಬಿ.ಎಂ.ಕೊಟ್ರೇಶ್, ಸಹಾಯಕ ಅಧಿಕ್ಷಕರಾದ ಅಭಿಜಿತ್ ಜಯಕ್ಕನವರ, ಜೈಲರ್ ಗೋಪಾಲಕೃಷ್ಣ ಕುಲಕರ್ಣಿ, ಆಯುಷ್ಯ ಇಲಾಖೆಯ ಆಡಳಿತಾಧಿಕಾರಿ ಸಂಜೀವ ಎಂ. ಕುಲಕರ್ಣಿ, ವೈದ್ಯಾಧಿಕಾರಿಗಳಾದ ಮಹೇಶ ನಾವದಗಿ ಹಾಗೂ ಕಾರಾಗೃಹದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.