ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

Let's provide a better environment for the next generation: DHO Dr. Yalla Ramesh Babu

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು 

ಬಳ್ಳಾರಿ 06: ಮಣ್ಣಿನಲ್ಲಿ ಕರಗದೇ ಇರುವ ಹಾಗೂ ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತಿರುವ ಪ್ಲಾಸ್ಟಿಕ್‌ನ ಸಂಪೂರ್ಣ ಬಳಕೆ ನಿಲ್ಲಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ವಿಭಾಗ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಸಸಿ ನೆಟ್ಟು ನೀರುಣಿಸಿ ಬಳಿಕ ಅವರು ಮಾತನಾಡಿದರು.      ದಿನದಿಂದ ದಿನಕ್ಕೆ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ತಡೆಗಟ್ಟುವ ಮೂಲಕ ಮಣ್ಣು, ಗಾಳಿ, ನೀರು, ಪ್ರಾಣಿ ಸಂಕುಲ ಮುಂತಾದವುಗಳನ್ನು ಕಾಪಾಡಿಕೊಂಡು ಭೂಮಿಯ ಮೇಲೆ ಆರೋಗ್ಯ ಜೀವನ ಸಾಗಿಸುವ ಮಹತ್ವದ ಕಾರ್ಯಕ್ಕೆ ಎಲ್ಲರೂ ಪಣತೊಡಬೇಕಿದೆ ಎಂದು ತಿಳಿಸಿದರು.ಪ್ಲಾಸ್ಟಿಕ್ ಒಂದು ಅಜೈವಿಕ ವಸ್ತು. ಇದನ್ನು ಸುಟ್ಟರೆ ಟಾಕ್ಸಿಕ್ ಮೂಲಕ ಪರಿಸರವನ್ನು ಹಾಳು ಮಾಡುತ್ತದೆ ಹಾಗೂ ಹಸಿ ಮಣ್ಣಿನ ಜೊತೆ ಬೆರೆತರೆ ಅಮೋನಿಯ ಬಿಡುಗಡೆ ಮಾಡಿ ಹಸಿರು ಮನೆಯ ಪರಿಣಾಮದ ವೇಳೆ ಮಿಥೆನ್ ಜೊತೆ ಸೇರಿಕೊಂಡು ಕೆಟ್ಟವಾಸನೆ ಹರಡುತ್ತದೆ ಎಂದು ಅವರು ತಿಳಿಸಿದರು.ಪ್ಲಾಸ್ಟಿಕ್‌ನಲ್ಲಿ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ನಾನಾ ಹಂತಗಳಲ್ಲಿ ಸೇರಿಕೊಂಡು ಹೃದಯ ಸಂಬಂಧಿ ಕಾಯಿಲೆಗಳು, ಥೈರಾಡ್, ಅಸ್ಥಮಾ, ಕೂದಲು ಮತ್ತು ಚರ್ಮದ ಸಮಸ್ಯೆ, ನರ ಸಂಬಂಧಿ ಕಾಯಿಲೆಗಳು ಸೇರಿದಂತೆ ಮಾರಕ ರೋಗಗಳಿಗೆ ತುತ್ತಾಗುವುದು ಕಾಣಬಹುದು. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂ ಪ್ರೇರಣೆಯಿಂದ ನಿಯಂತ್ರಿಸೋಣ ಎಂದರು. 

ಪ್ರತಿಜ್ಞೆ ಸ್ವೀಕಾರ: ಇದೇ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಬಾಟೆಲ್ ಮುಂತಾದ ವಸ್ತುಗಳನ್ನು ಬಳಸದೇ ಇರುವ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್‌.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಾ.ಸುರೇಶ್ ಕುಮಾರ್, ಡಾ.ಪ್ರಿಯಾಂಕ ಸೇರಿದಂತೆ ಮಲೇರಿಯಾ, ಕುಷ್ಠರೋಗ, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು  ಇದ್ದರು.