ಮಹಾಲಿಂಗಪುರ 17: ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃಹದಲ್ಲಿ ತಾಲೂಕು ಹೋರಾಟ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ನಮ್ಮ ಹೋರಾಟ ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷದಲ್ಲಿ ಮುನ್ನಡೆಯುತ್ತಿದೆ ಎಂದು ಕರ್ನಾಟಕ ರೈತ ಸಂಘದ ಸಂಚಾಲಕ ಗಂಗಾಧರ ಮೇಟಿ ಹೋರಾಟದ ಬಗ್ಗೆ ಹೇಳಿದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ ಪಟ್ಟಣವನ್ನು ತಾಲೂಕು ಕೇಂದ್ರ ಮಾಡಲು ಬಹಳ ದಿನದ ಹೋರಾಟ ನಡೆದಿದೆ. ಹೀಗಾಗಿ ತಾಲೂಕು ಕೇಂದ್ರ ರಚನೆ ಮಾಡಲು ಬೇಕಾಗಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿ ವರದಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಕಂದಾಯ ಇಲಾಖೆಗೆ ತಲುಪಿದ್ದು ನಮ್ಮ ಹೋರಾಟ ಕೊನೆಯ ಹಂತ ತಲುಪಿದೆ. ಮಹಾಲಿಂಗಪುರ ಪಟ್ಟಣ ಅಂದಾಜು 1,22,500 ಜನಸಂಖ್ಯೆಯನ್ನು ಹೊಂದಿದ್ದು ತಾಲೂಕು ರಚನೆಗೆ ಅಗತ್ಯವಾಗಿದೆ. 14 ಗ್ರಾಮ 2 ಪಟ್ಟಣಗಳ ಒಳಗೊಂಡ ಈ ಪಟ್ಟಣ ತಾಲೂಕು ರಚನೆ ಮಾಡಲು ರಬಕವಿ-ಬನಹಟ್ಟಿ ತಹಸಿಲ್ದಾರ ವರದಿಯನ್ನು ಆಧರಿಸಿ ಜಮಖಂಡಿ ಉಪ ವಿಭಾಗಾಧಿಕಾರಿ ಪ್ರಸ್ತಾವನೆ ನೀಡಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ವೀರೇಶ ಆಸಂಗಿ, ಮಹಾಲಿಂಗಯ್ಯ ಮನ್ನಯ್ಯನವರಮಠ, ಶೇಖರ ಅಂಗಡಿ, ಶಿವಲಿಂಗ ಟಿರ್ಕಿ, ಬಂದು ಪಕಾಲಿ ಮಾತನಾಡಿದರು.
ಜೂನ್ 22ರಂದು ಮತ್ತೊಮ್ಮೆ ಸಭೆ ಸೇರಿ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಎಲ್ಲ ಗ್ರಾಮದ ಸಾರ್ವಜನಿಕರು, ಮುಖಂಡರು ಸೇರುವಂತೆ ಹೇಳಿ ಎಲ್ಲರೂ ಹೋರಾಟಕ್ಕೆ ಬೆಂಬಲ ಸೂಚಿಸಿ, ಜೊತೆಗೆ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದರು.
ಹಿರಿಯರಾದ ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ್, ಸಿದ್ದು ಶಿರೋಳ, ನಿಂಗಪ್ಪ ಬಾಳಿಕಾಯಿ,ಈಶ್ವರ್ ಮುರಗೋಡ, ಹನಮಂತ ಜಮಾದಾರ, ಭೀಮಸಿ ಸಸಾಲಟ್ಟಿ, ಪರ್ಪ ಹುದ್ದಾರ, ದುಂಡಪ್ಪ ಜಾದವ, ಮಲ್ಲು ಮಿರ್ಜಿ, ಭೀಮಸಿ ನಾಯಕ, ಚನ್ನಪ್ಪ ಪಟ್ಟಣಶೆಟ್ಟಿ, ರಾಜು ತೇರದಾಳ, ರಫೀಕ್ ಮಾಲದಾರ ಸೇರಿದಂತೆ ನ್ಯಾಯವಾದಿಗಳಾದ ಶಿವಾನಂದ ಉಳ್ಳಾಗಡ್ಡಿ, ಎಂ ಕೆ ಸಂಗನ್ನವರ, ಎ ಎ ಮುರಗೋಡ, ಎಂ ಬಿ ಬಡಿಗೇರ, ಎ ಕೆ ಓಸ್ವಾಲ್, ಕೆ ಆಯ್ ಜಕಾತಿಮಠ, ಎಂ ಬಿ ಪಾಟೀಲ್ ಇದ್ದರು.