ಸಂಕೇಶ್ವರ ಪಟ್ಟಣದ ಡ್ರೇನೆಜ್ ಯೋಜನೆಗೆ ರೂ. 100 ಕೋಟಿ ಅನುದಾನ ಮಂಜೂರು

Rs. 100 crore grant sanctioned for Sankeshwar town drainage project

ಸಂಕೇಶ್ವರ 01: 2021-22 ನೇ ಸಾಲಿನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ದಿ. ಉಮೇಶ ವಿಶ್ವನಾಥ ಕತ್ತಿಯವರು ಯು.ಜಿ.ಡಿ. ಯೋಜನೆಯಡಿಯಲ್ಲಿ ಸಂಕೇಶ್ವರ ಪಟ್ಟಣದ ಒಳ ಚರಂಡಿ (ಡ್ರೇನೆಜ್) ಯೋಜನೆಗೆ ಸುಮಾರು ರೂ. 100 ಕೋಟಿ ರೂಪಾಯಿಗಳಷ್ಟು ಸರ್ಕಾರದದಿಂದ ಅನುದಾನವನ್ನು ಮಂಜೂರು ಮಾಡಿದ್ದರು.  

ಈಗ ಈ ಯೋಜನೆಯು ಸದ್ಯದಲ್ಲಿಯೇ ಕಾರ್ಯಗತವಾಗಿ ಈ ಯೋಜನೆಗೆ ಚಾಲನೆ ದೊರೆಯುವುದು ನಿಶ್ಚಿತವೆಂದು ಸಂಕೇಶ್ವರದ ಪುರಸಭೆಯ ಸಭಾಭವನದಲ್ಲಿ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯರಾದ ಅಮರ ಮಧುಕರ ನಲವಡೆ ಇವರು ಪ್ರಸ್ತಾಪಿಸಿದಾಗ ಎಲ್ಲ ಸದಸ್ಯರು ನಿಷ್ಪಕ್ಷಪಾತವಾಗಿ ಯೋಜನೆಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು. 

ಈ ಯೋಜನೆಗೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಸಂಕೇಶ್ವರ ಪಟ್ಟಣದ ರಿ.ಸ.ನಂ. 318/2 ನೇದ್ದರಲ್ಲಿ 04 ಎಕರೆ ಜಮೀನವನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಕುರಿತು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಬೆಳಗಾವಿ ಇವರಿಗೆ ಸಲ್ಲಿಸುವ ಕುರಿತು ಚರ್ಚೆ ಮಾಡಿದರು. ಇದರ ಬಗ್ಗೆ ಶೀಘ್ರದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾರ್ಗದರ್ಶಕರಾದ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಾರ್ಖಾನೆಯ ಅಧ್ಯಕ್ಷ ಉಪಾಧ್ಯಕ್ಷ ಸಂಚಾಲಕರನ್ನು ಪುರಸಭೆಯ ಎಲ್ಲ ಸದಸ್ಯರು ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರಿ ಇವರ ಮಾರ್ಗದರ್ಶನದಲ್ಲಿ ಭೆಟ್ಟಿ ನೀಡಿ ಈ ವಿಷಯದ ಬಗ್ಗೆ ಕುಲಂಕುಷವಾಗಿ ಚರ್ಚೆ ಮಾಡಲಾಗುವುದು ಎಂದು ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರಿ ಇವರು ಸಭೆಗೆ ತಿಳಿಸಿದರು. 

ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ ಮತ್ತು ಪುರಸಭೆಯ ಕಿರಿಯ ಅಭಿಯಂತರ ರವೀಂದ್ರ ಗಡಾದ ಎಲ್ಲ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಿದರು.  

ಕಳೆದ ಮಾರ್ಚ್‌ 5ರಂದು ಜರುಗಿದ್ದ ಸಾಮಾನ್ಯ ಸಭೆಯ ನಡುವಳಿಕೆಗಳನ್ನು ಓದಿ ಸಭೆಯಲ್ಲಿ ಧೃಢೀಕರಿಸಲಾಯಿತು. ಮಾನ್ಸೂನ ಮಳೆಯ ಮುಂಜಾಗ್ರತೆ ಕ್ರಮದಲ್ಲಿ ಪುರಸಭೆಯ ಪೌರ ಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ಅಧ್ಯಕ್ಷೆ ಉಪಾಧ್ಯಕ್ಷರು ಸ್ಥಾಯಿ ಸಮೀತಿಯ ಚೇರಮನ್ನರು ಮತ್ತು ಹಿರಿಯ ಸದಸ್ಯರುಗಳಿಂದ ವಿತರಿಸಲಾಯಿತು. ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಘಕ ಓಠ 104050/2018ರಡಿ ಮಳಿಗೆಗಳ ಬಾಡಿಗೆ ವಸೂಲಾತಿ ಕುರಿತು ಚರ್ಚೆ ಮಾಡಲಾಯಿತು. ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ಬೇಗನೆ ಡಾಂಬರೀಕರಣ ಮಾಡಿ ಮುಚ್ಚಬೇಕು. ವಾಹನ ಸವಾರರು ಈ ಗುಂಡಿಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ತ್ವರಿತ ಗತಿಯಲ್ಲಿ ಮುಚ್ಚುವ ಕೆಲಸ ಆಗಬೇಕೆಂದು ಎಲ್ಲ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ಗಾಂಧಿ ಕುಟುಂಬಕ್ಕೆ ಬೇಕಾದವರಾದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಿಂದ 7 ಬಾರಿ ಚುನಾಯಿತರಾಗಿ ಮಾಜಿ ಸಚಿವ ದಿ. ಬಿ. ಶಂಕರನಾಂದ ಅವರು ಕೇಂದ್ರ ಸಂಪುಟದಲ್ಲಿ ಮಹತ್ವದ ಉನ್ನತ ಮಟ್ಟದ ಹುದ್ದೆಗಳನ್ನು ಪಡೆದುಕೊಂಡು ಬೆಳಗಾವಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿ ಗಿನ್ನೀಸ್ ದಾಖಲೆಗೆ ಹೆಸರುವಾಸಿಯಾಗಿದ್ದಾರೆ. ಇವರ ಶತಮಾನೋತ್ಸವ ಹಾಗೂ ಜನ್ಮೋತ್ಸವ ಪ್ರಯುಕ್ತವಾಗಿ ಇವರ ಹೆಸರನ್ನು ಸಂಕೇಶ್ವರದಲ್ಲಿ ನಿಡಸೋಶಿ ರಸ್ತೆಗೆ ನಾಮಕರಣ ಮಾಡಬೇಕೆಂದು ಅಮರ ನಲವಡೆಯವರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆಲ್ಲ ಸದಸ್ಯರು ಒಪ್ಪಿಗೆ ನೀಡಿದರು.  

ಸಭೆಯಲ್ಲಿ ಉಪಾಧ್ಯಕ್ಷರಾದ ವಿವೇಕ ರಾಮಚಂದ್ರ ಕ್ವಳ್ಳಿ, ಸ್ಥಾಯಿ ಸಮೀತಿ ಚೇರಮನ್ನರಾದ ಪ್ರಮೋದ ಅಪ್ಪಾಸಾಹೇಬ ಹೊಸಮನಿ, ಜಯಪ್ರಕಾಶ ನಾಗಪ್ಪ ಕರಜಗಿ, ಸುನೀಲ ಅಣ್ಣಾಸಾಹೇಬ ಪರ್ವತರಾವ, ಗಂಗಾರಾಮ ಭೂಸಗೋಳ, ಶೇವಂತಾ ಸಿ. ಕಬ್ಬೂರಿ, ರಿಜವಾನಾ ರಾಮಪೂರೆ, ಸುಚೀತಾ ಶ್ರೀಕಾಂತ ಪರೀಟ, ಸಚೀನ ಭೋಪಳೆ, ಚಿದಾನಂದ ಕರ್ದನ್ನವರ, ನಂದು ಮುಡಸಿ, ಸಂಗೀತಾ ಕೋಳಿ, ಅಜೀತ ಅಶೋಕ ಕರಜಗಿ, ಸಂಜಯ ಶಿರಕೋಳಿ, ದೀಲಿಪ ಹೊಸಮನಿ, ಅವಿನಾಶ ನಲವಡೆ, ಪ್ರವೀಣ (ಪುಟ್ಟು) ನೇಸರಿ ನ್ಯಾಯವಾದಿ ಹಾಗೂ ಮುಂತಾದ ಎಲ್ಲ ಸದಸ್ಯರು ಹಾಜರರಿದ್ದರು. 

ಸಭೆಯಲ್ಲಿ ಸಭೆಯ ಗಾಂಭೀರತೆಯ ಬಗ್ಗೆ ನಡುವಳಿಕೆಯ ಯಾರೊಬ್ಬ ಸದಸ್ಯರು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಎತ್ತಿದಾಗ ವಿನಾಕಾರಣವಾಗಿ ನಗುವುದು ಸಭೆಯ ಅವಮಾನ ಮಾಡಿದಂತಾಗುತ್ತದೆ.