ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಫಲಿತಾಂಶ ವೃದ್ಧಿಗೆ ಶ್ರಮ ವಹಿಸಿ

SSLC Exam-2: Work hard to improve your results

ಪೂರ್ವಭಾವಿ ಸಭೆಯಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಕರೆ 

ವಿಜಯಪುರ 22: : ಜಿಲ್ಲೆಯ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಹಾಗೂ ಸುಧಾರಣೆಗೆ ಶಿಕ್ಷಣ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿ ಆಗುವಂತೆ ಶ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು. 

ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಎಸ್‌.ಎಸ್‌.ಎಲ್‌.ಸಿ-2ರ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಫಲಿತಾಂಶ ಅತ್ಯಂತ ಕಳಪೆ ಮಟ್ಟದಲ್ಲಿ ಬಂದಿದ್ದು ಈ ಕುರಿತು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. 8ನೇ ತರಗತಿಯಿಂದ 10 ತರಗತಿಯವರೆಗೂ ಒಂದೇ ತರನಾಗಿ ಹೋಲುವಂತಹ ವಿಷಯಾದಾರಿತ ಪಠ್ಯ ಪುಸ್ತಕಗಳಿರುತ್ತವೆ. ಮಕ್ಕಳಿಗೆ ಶಿಕ್ಷಕರು ಪ್ರತಿನಿತ್ಯ ಅವರ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು.  ಭಯಮುಕ್ತ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು. ನಿರಂತರವಾಗಿ ಪುನರಾವರ್ತನೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರಿ​‍್ಡಸಿ, ಶಿಕ್ಷಣ ಗುಣಮಟ್ಟ ಸುಧಾರಣೆಗೆ ಹೆಚ್ಚು ಗಮನ ನೀಡಬೇಕು. ಫಲಿತಾಂಶ ವೃದ್ಧಿಗಾಗಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಆದ್ಯತೆ ಮೇಲೆ ಗಮನ ಹರಿಸಬೇಕು ಎಂದು ಅವರು ಹೇಳಿದರು.  

ಪ್ರಸಕ್ತ ವರ್ಷ ಪರೀಕ್ಷೆಗಳು ಅತ್ಯಂತ ಪಾರದರ್ಶಕ ಹಾಗೂ ನಕಲು ಮುಕ್ತವಾಗಿ, ಯಾವುದೇ ತೊಂದರೆಯಾಗದೇ ಪರೀಕ್ಷೆಗಳು ಜರುಗಿದ್ದು ಸಂತಸ ತಂದಿದೆ ಇದೇ ರೀತಿ ಮುಂಬರುವ ಪರೀಕ್ಷೆಗಳು ಸುಸೂತ್ರವಾಗಿ ಜರುಗಿಸುವಂತೆ ಅವರು ಸೂಚಿಸಿದರು.  

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ  ಶೈಕ್ಷಣಿಕ ವರ್ಷದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಫಲಿತಾಂಶ ತುಂಬಾ ಕಳಪೆ ಮಟ್ಟದಲ್ಲಿ ಬಂದಿದ್ದು ಕಳವಳಕಾರಿ ವಿಷಯವಾಗಿದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಡುವಾಗ ಪ್ರಿತಿ, ವಿಶ್ವಾಸ, ಸಹನೆಯಿಂದ ಪಾಠ ಮಾಡಬೇಕು. ಮಕ್ಕಳು ಮನೆಯಲ್ಲಿ ವಿದ್ಯಾಭ್ಯಾಸದೆಡೆಗೆ ತೊಡಗಿಕೊಳ್ಳುವಂತೆ ಪಾಲಕರು ಗಮನ ಹರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಅವರು ಹೇಳಿದರು. 

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಕಳೆದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳನ್ನು ಯಾವುದೇ ಗೊಂದಲಕ್ಕೀಡಾಗದಂತೆ ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ಅದೇ ರೀತಿ ಮುಂದಿನ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯಲು ಪೊಲೀಸ್ ಇಲಾಖೆ ಎಲ್ಲ ರೀತಿ ಸಹಾಯ ಸಹಕಾರ ನೀಡಲಿದೆ ಅವರು ಹೇಳಿದರು. 

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಟಿ.ಎಸ್ ಕೊಲ್ಹಾರ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್‌.ಎಸ್‌.ಎಲ್‌.ಸಿ-2 ಪರೀಕ್ಷೆ ಮೇ 26ರಿಂದ ಪ್ರಾರಂಭಗೊಂಡು ಜೂನ್ 2ರ ವರೆಗೆ ಜರುಗಲಿವೆ. ಒಟ್ಟು 68  ಪರೀಕ್ಷಾ ಕೇಂದ್ರಗಳಲ್ಲಿ ಎಸ್‌.ಎಸ್‌.ಎಲ್‌.ಸಿ-2 ಪರೀಕ್ಷೆಯ ಪರೀಕ್ಷೆಗಳು ಜರುಗಲಿದ್ದು 20,934 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ನಕಲಿಗೆ ಅವಕಾಶ ಒದಗಿಸದೇ ಪಾರದರ್ಶಕ ಪರೀಕ್ಷೆಗಾಗಿ  ಜಿಲ್ಲಾ ಜಾಗೃತಿ ದಳ, ವೆಬ್ ಕಾಸ್ಟಿಂಗ್ ಕೆಂದ್ರ, ಕಸ್ಟೋಡಿಯನ್, ಪರೀಕ್ಷಾ ಮೇಲ್ವಿಚಾರಕರು ಹಾಗೂ ಇತರ ಸಿಬ್ಬಂದಿಗಳನ್ನೊಳಗೊಂಡಂತೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೊಜನಾಧಿಕಾರಿ ನಿಂಗಪ್ಪ ಗೋಠೆ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಪರಶುರಾಮ ಹಿಟ್ನಳ್ಳಿ, ಶಿಕ್ಷಣ ಇಲಾಖೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ಕುಲಕರ್ಣಿ, ತಾಲೂಕು ಬಿ.ಇ.ಓಗಳು, ಮಾರ್ಗಾಧಿಕಾರಿಗಳು, ಖಜಾನೆ ಇಲಾಖೆಯ ಅಧಿಕಾರಿಗಳು, ಪ್ರಾಂಶುಪಾಲರು, ವಲಯ ನೀರೀಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.