ಕಳೆದ ಎರಡು ವರ್ಷಗಳ ಸತತ ಬರಗಾಲ ಮತ್ತು ಅತಿವೃಷ್ಟಿ

The continuous drought and heavy rains of the last two years

ಈ ವರ್ಷ ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಸಂತಸ: ಕೃಷಿ ಚಟುವಟಿಕೆಯಲ್ಲಿ ಚುರುಕು

ಗೌರೀಶ್ ನಾಗಶೆಟ್ಟಿ 

ಶಿರಹಟ್ಟಿ 13: ತಾಲೂಕಿನಲ್ಲಿ ಕಳೆದ ನಾಲ್ಕೈದು ವಾರಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಈ ಬಾರಿ ಮುಂಗಾರು ಉತ್ತಮವಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಅಶ್ವಿನಿ, ಭರಣಿ, ಕೃತ್ತಿಕಾ ಮತ್ತು ಮೃಗಶಿರ ಮಳೆಗಳು ಉತ್ತಮವಾಗಿ ಸುರಿದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ಎರಡು ವರ್ಷಗಳ ಬರಗಾಲ ಮತ್ತು ಅತಿವೃಷ್ಟಿಯ ಸಂಕಷ್ಟದಿಂದ ಹೊರಬರುತ್ತಿರುವ ರೈತರು ಇದೀಗ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. 

ಕೃಷಿ ಭೂಮಿ ಸಿದ್ಧತೆ ಮತ್ತು ಬಿತ್ತನೆ ಪೂರ್ವ ಸಿದ್ಧತೆಗಳು 

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲ ರೈತರು ಸಾವಯವ ಗೊಬ್ಬರವನ್ನು ಭೂಮಿಗೆ ಸೇರಿಸುತ್ತಿರುವುದು ಕಂಡುಬರುತ್ತಿದೆ. ಈ ಎಲ್ಲ ಕಾರ್ಯಗಳು ಸದ್ಯ ಮುಕ್ತಾಯಗೊಳ್ಳುತ್ತಿದ್ದು, ಮೃಗಶಿರ ಮಳೆ ಉತ್ತಮವಾಗಿ ಮುಂದುವರೆದರೆ ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಳ್ಳತ್ತದೆ ಅದರೆ ಕೇಲವು ಗ್ರಾಮಗಳಲ್ಲಿ ಅತಿವೃಷ್ಠಿ ಮಳೆಯಿಂದ ಆರಂಭಗೊಳ್ಳಲಿದೆ ರೈತರಿಗೆ ಕಷ್ಟವಾಗಿದೆ. 

ಕಡಕೋಳ, ಹೊಸಳ್ಳಿ, ಮಾಚೇನಹಳ್ಳಿ, ಮಜ್ಜೂರ, ವರವಿ, ತೆಗ್ಗಿನ ಭಾವನೂರ, ಹಡಗಲಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಮಾಗಡಿ, ಹೊಳಲಾಪೂರ, ಪರಸಾಪುರ, ಛಬ್ಬಿ, ರಣತೂರ, ನಾಗರಮಡುವು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಈ ಭಾಗದ ರೈತರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಬೀಜ ಮತ್ತು ಗೊಬ್ಬರ ಸಂಗ್ರಹಿಸಲು ಮುಂದಾಗಿದ್ದಾರೆ. 

ಕೃಷಿ ಇಲಾಖೆಯಿಂದ ಗುರಿ ಮತ್ತು ನೆರವು 

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಒಟ್ಟು 36,411 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ. ಇದರಲ್ಲಿ ಶೇಂಗಾ (3350 ಹೆಕ್ಟೇರ್), ಹೆಸರು (3200 ಹೆಕ್ಟೇರ್), ಗೋವಿನಜೋಳ (27146 ಹೆಕ್ಟೇರ್), ಸೂರ್ಯಕಾಂತಿ (45 ಹೆಕ್ಟೇರ್), ತೊಗರಿ (450 ಹೆಕ್ಟೇರ್), ಅಲಸಂದಿ (55 ಹೆಕ್ಟೇರ್), ಬತ್ತ (460 ಹೆಕ್ಟೇರ್), ಹತ್ತಿ (575 ಹೆಕ್ಟೇರ್), ಕಬ್ಬು (500 ಹೆಕ್ಟೇರ್), ಹೈಬ್ರೀಡ್ ಜೋಳ (125 ಹೆಕ್ಟೇರ್) ಸೇರಿವೆ. ಮುಂಗಾರು ಮಳೆ ಉತ್ತಮವಾದರೆ ಈ ಗುರಿ ಮೀರುವ ಸಾಧ್ಯತೆ ಇದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. 

ತಾಲೂಕಿನಲ್ಲಿ ಒಟ್ಟು 94,913 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ 74,475 ಹೆಕ್ಟೇರ್ ಸಾಗುವಳಿ ಕ್ಷೇತ್ರವಾಗಿದೆ. ಇದರಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಉದ್ದೇಶವಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ರೈತರು ಹಿಂದಿನ ಸಂಕಷ್ಟಗಳನ್ನು ಮರೆತು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. 

ಮಳೆ ಪ್ರಮಾಣ ಮತ್ತು ಸಹಾಯಧನ 

ಮೇ 23ರ ವರೆಗೆ ತಾಲೂಕಿನಲ್ಲಿ 94.8 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 178.9 ಮಿ.ಮೀ. ಮಳೆ ಸುರಿದಿದೆ. ಇದು ಶೇ. 89ರಷ್ಟು ಮಳೆ ಹೆಚ್ಚಾದ ಬಗ್ಗೆ ವರದಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಹಂಗಾಮಿನ ಬಿತ್ತನೆಗಾಗಿ ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ. 50ರ ಸಹಾಯಧನ ಯೋಜನೆಯಡಿ ಹೆಸರು ಮತ್ತು ಗೋವಿನ ಜೋಳದ ಬೀಜಗಳನ್ನು ನೀಡಲಾಗುವುದು.  

ರೈತರಿಗೆ ಕೃಷಿ ಇಲಾಖೆಯ ಸಲಹೆಗಳು 

ರೈತರು ಬಿತ್ತನೆ ಕೈಗೊಳ್ಳುವ ಮುನ್ನ ಕಡ್ಡಾಯವಾಗಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಹೆಸರು ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತಿದರೆ, ಬೆಳೆಯ ಪ್ರಾಥಮಿಕ ಹಂತದಲ್ಲಿ ಸಾರಜನಕ ಚೆನ್ನಾಗಿ ಲಭ್ಯವಾಗಿ ಬೆಳೆಯ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತದೆ. ಪ್ರತಿ ಕೆಜಿ ಬೀಜಕ್ಕೆ 10 ಗ್ರಾಂ ಟ್ರೆಂಕೋಡರ್ಮಾದಿಂದ ಬೀಜೋಪಚಾರ ಮಾಡಿದಲ್ಲಿ ಸರ್ಕೊನ್ನೊರಾ ಎಲೆಚುಕ್ಕೆ ರೋಗದ ನಿರ್ವಹಣೆ ಮಾಡಬಹುದು. 

ಗೋವಿನ ಜೋಳದಲ್ಲಿ ಪ್ರತಿ ಕಿ.ಗ್ರಾಂ. ಬೀಜಕ್ಕೆ 25 ಗ್ರಾಂ ರಂಜಕ ಕರಗಿಸುವ ಅಣುಜೀವಿ (ಸುಡೋಮೊನಾಸ ಸ್ಟೈಯೇಟಾ ಎಚ್‌-21) ಹಾಗೂ 6 ಗ್ರಾಂ ಟ್ರೆಕೋಡರ್ಮಾ ಜೈವಿಕ ಶೀಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಕಾಂಡ ಕಪ್ಪು ಕೊಳೆ ರೋಗ ನಿಯಂತ್ರಿಸಬಹುದಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ. 

ರಸಗೊಬ್ಬರ ದಾಸ್ತಾನು ಮತ್ತು ವಿತರಣೆ 

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 15 ಮೆಟ್ರಿಕ್ ಟನ್ ರಸಗೊಬ್ಬರಕ್ಕಾಗಿ ರೈತರ ಬೇಡಿಕೆಯಿದ್ದು, ಈಗಾಗಲೇ ಇಲಾಖೆ 6,253 ಮೆಟ್ರಿಕ್ ಟನ್ ಯೂರಿಯಾ, 2,200 ಮೆಟ್ರಿಕ್ ಟನ್ ಡಿಎಪಿ, 614 ಮೆಟ್ರಿಕ್ ಟನ್ ಎಂಒಪಿ, 4,010 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 13,331 ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಿದೆ. 

ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ರೈತರಿಗೆ ಬೀಜ, ರಸಗೊಬ್ಬರ ಪೂರೈಕೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ . ರೈತರು ಅಧಿಕೃತ ಪರವಾನಗಿ ಹೊಂದಿದ ಮಳಿಗೆಗಳಲ್ಲಿ ಮಾತ್ರ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು. ಕೃಷಿ ಪರಿಕರಗಳನ್ನು ಎಂ.ಆರ್‌.ಪಿ.ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತರಬೇಕು. ಅಂತಹವರ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.  

ಪ್ರಮಾಣಿತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ರೇವಣ್ಣಪ್ಪ ಮನಗೂಳಿ 

ತಾಲೂಕು ಸಹಾಯಕ ಕೃಷಿ ನಿರ್ದೇಶಕರ  


ಹೆಸರು, ಶೇಂಗಾ, ಹೈಬ್ರೀಡ್ ಜೋಳ ಬಿತ್ತನೆಗೆ ಸಜ್ಜಾಗಿದ್ದು, ಬೀಜ ಮತ್ತು ಗೊಬ್ಬರದ ಸಿದ್ಧತೆ ನಡೆದಿದೆ. ಮಳೆ ಒಂದೆರಡು ದಿನ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ. 

ಬಸವರಾಜ ಕಬಾಡಿ 

ರೈತ