ಸಮರ್ಥ ವ್ಯಕ್ತಿಯನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ ಶ್ರೇಯ ಸಾವಕಾರ ತಂಡಕ್ಕೆ ಸಲ್ಲುತ್ತದೆ: ಜೆ. ಟಿ. ಪಾಟೀಲ

The credit for making a capable person the Sarvadhyakshas goes to the Saavakara team: J. T. Patil

ಬೀಳಗಿ 22:  ಓದಲು ಬರೆಯಲು ಬರದಿದ್ದರೂ 25 ಕೃತಿಗಳನ್ನು ರಚಿಸುವ ಮೂಲಕ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಜನಮಾನಸದಲ್ಲಿ ನೆಲೆನಿಂತಿದ್ದು, ಓರ್ವ ಸಮರ್ಥ ವ್ಯಕ್ತಿಯನ್ನು ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಶ್ರೇಯಸ್ಸು ಕಜಾಪ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ಮತ್ತವರ ತಂಡಕ್ಕೆ ಸಲ್ಲುತ್ತದೆ ಎಂದು ಶಾಸಕ ಜೆ. ಟಿ. ಪಾಟೀಲ ಹೇಳಿದರು.  

ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ವತಿಯಿಂದ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಬಾಯಿಯಿಂದ ಬಾಯಿಗೆ ಅಂದರೆ ನಮ್ಮ ಪೂರ್ವಜರು ಹಾಡುತ್ತಿದ್ದ ಹಂತಿಪದ, ಸೋಬಾನೆ ಪದ ಸೇರಿದಂತೆ ವಿವಿಧ ಪದಗಳೇ ಜಾನಪದ. ಇಂಥ ಹಾಡುಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಕಲಾವಿದರನ್ನು, ಸಾಧಕರನ್ನು ಗೌರವಿಸುವಂಥ ಕೆಲಸವನ್ನು ಸಾವಕಾರ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.  

 ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ನೆಲೆಯನ್ನು ತೋರಿಸುವಂಥ ಜಾನಪದ ಪುರಾತನವಾದದ್ದು. ಜನರ ಕಿವಿಯಿಂದ ಕಿವಿಗೆ ಹರಡುತ್ತ ಬಂದಿದೆ. ಜಾನಪದದಲ್ಲಿ ದೇವರು ಮತ್ತು ಧರ್ಮವನ್ನು ನಿಂದೆ ಮಾಡಿಲ್ಲ. ಸಂಸ್ಕಾರಗಳು ಬರಬೇಕಿದ್ದರೆ ಜಾನಪದ ಸಮ್ಮೇಳನಗಳು ಅವಶ್ಯಕ. ಇಂದು ಜಾನಪದದ ಹೆಸರಿನಲ್ಲಿ ದೃಶ್ಯ ಮಾಧ್ಯಮಗಳು ನೋಡಲು ಮತ್ತು ಕೇಳಲು ಅಸಹ್ಯವಾಗುವಂಥ ಅಶ್ಲೀಲ ಮಾತುಗಳನ್ನು ಬಳಸುತ್ತಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದೆ ಎಂದು ವಿಷಾದಿಸಿದರು.  

ನಿವೃತ್ತ ಪ್ರಾಧ್ಯಾಪಕ ಎನ್‌. ಎಂ. ಕೂಗಲಿ ಅಭಿನಂದನಾ ಪರ ಮಾತನಾಡಿ, ಮಳೆಯ ನಡುವೆಯೂ ಅರ್ಥಪೂರ್ಣವಾಗಿ ನಡೆದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 60ಕ್ಕೂ ಹೆಚ್ಚು ಸಾಧಕರನ್ನು ಗುರ್ತಿಸಿ ಗೌರವಿಸಿದ್ದು ಶ್ಲಾಘನೀಯ ಕಾರ್ಯವೆಂದು ಹೇಳಿದರು.  

ವಿಶ್ರಾಂತ ಡಿಡಿಪಿಐ ಎಂ. ಜಿ. ದಾಸರ ಸಮಾರೋಪ ನುಡಿ ಹೇಳಿ, ವರುಣನ ಸಿಂಚನದ ಮಧ್ಯೆಯೂ ಸರ್ವಾಧ್ಯಕ್ಷರ ಮೆರವಣಿಗೆ ಪ್ರಾರಂಭಿಸಿ ಯಶಸ್ವಿಗೊಳಿಸಿ, ಉದ್ಘಾಟನೆ, ಗೋಷ್ಠಿ, ಕಲಾಪ್ರದರ್ಶನ, ಸಾಧಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾದ ಯಶಸ್ವಿ ಸಮ್ಮೇಳನ ಇದಾಗಿದೆ ಎಂದರು.  

ಜನಪದ ಕಾವ್ಯ-ಕುಂಚ ಸಿಂಚನದಲ್ಲಿ ಕವಿ ಡಿ. ಎಂ. ಸಾವಕಾರ ಕವಿತೆ ವಾಚನ ಮಾಡಿದರೆ, ಶಿವಾನಂದ ಮಾದರ ಗಾಯನಕ್ಕೆ ಶಿವಾನಂದ ಹಿರೇಮಠ ಕುಂಚ ಸಿಂಚನ ಮಾಡಿದರು.    

ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ವಿವಿಧ ಪ್ರಕಾರದ 50ಕ್ಕೂ ಹೆಚ್ಚು ತಂಡಗಳು ಕಲಾಪ್ರದರ್ಶನ ಮಾಡುವ ಮೂಲಕ ನೆರೆದವರ ಗಮನ ಸೆಳೆದರು.  

ಪಿಕೆಪಿಎಸ್ ಅಧ್ಯಕ್ಷ ಎಂ. ಬಿ. ಕಂಬಿ, ಈರಣ್ಣ ದುಂ. ಗಾಣಗೇರ, ಪೀರಸಾಬ ನದಾಫ, ಡಾ. ಎಸ್‌. ಕೆ. ಬಂಗಾರಿ, ನಿಂಗರಾಜ ಮಬ್ರಮಕರ, ಫಕೀರಯ್ಯ ಮಠಪತಿ, ಆರ್‌. ವಿ. ಅಂಗಡಿ, ಸಂಗಮೇಶ ಶಾಂತಗಿರಿ, ಮಹೇಶ ಮಾದರ, ರಮೇಶ ಮಾದರ, ಬಸವ್ವ ಹೆಬ್ಬಾಳ, ಸುಲೋಚನಾ ಗಿರಿಯನ್ನವರ, ಇಂದ್ರವ್ವ ಗಡ್ಡಿ ಮತ್ತಿತರಿದ್ದರು.  

 ರಮೇಶ ಮೇಟಿ ನಿರೂಪಿಸಿದರು. ಬಸವರಾಜ ನಾಯ್ಕ ಸ್ವಾಗತಿಸಿದರು. ಎಂ. ಬಿ. ತಾಂಬೋಳಿ ವಂದಿಸಿದರು.  

ಸಮ್ಮೇಳನದಲ್ಲಿ ತೆಗೆದುಕೊಂಡ 5 ನಿರ್ಣಯಗಳು:   

ಸರ್ಕಾರದಿಂದ ಜಾನಪದ, ಸಾಂಸ್ಕೃತಿಕ ನೀತಿ ರೂಪಿಸಬೇಕು. ಜಾನಪದ ಕಲಾವಿದರಿಗೆ 2 ಸಾವಿರದಿಂದ 5 ಸಾವಿರ ರೂ. ಮಾಶಾಸನ ಹೆಚ್ಚಿಸಬೇಕು. ಮಾಶಾಸನ ಪಡೆಯಲು 58 ವರ್ಷದಿಂದ 50 ವರ್ಷಕ್ಕೆ ಇಳಿಸಬೇಕು. ಕನ್ನಡ ಜಾನಪದ ಪರಿಷತ್ ನಡೆಸುವ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡಬೇಕು. ಶಾಲಾ ಪಠ್ಯ ಪುಸ್ತಕಗಳಲ್ಲಿ ಜಾನಪದ ಆಟ, ಪಾಠದ ಕುರಿತು ವಿಷಯ ಸೇರೆ​‍್ಡ ಮಾಡಬೇಕು. ಸರ್ಕಾರವೇ ಜಾನಪದ ಕಲಾವಿದರಿಗೆ ಜೀವವಿಮೆ ಮಾಡಬೇಕು ಎಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನದಲ್ಲಿ ತೆಗೆದುಕೊಂಡ 5 ನಿರ್ಣಯಗಳನ್ನು ಸರ್ಕಾರ ಕೂಡಲೆ ಜಾರಿಗೆ ತರಬೇಕು.  

ಡಿ. ಎಂ. ಸಾವಕಾರ,  

ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್ ಬಾಗಲಕೋಟೆ