ಮಹಿಳೆಯರು ಕಾನೂನುಗಳ ಸದುಪಯೋಗ ಪಡೆದುಕೊಳ್ಳಬೇಕು

ಕಾರ್ಯಕ್ರಮದಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಲಾಯಿತು

ಮಹಿಳೆಯರು ಕಾನೂನುಗಳ ಸದುಪಯೋಗ  

ಪಡೆದುಕೊಳ್ಳಬೇಕು: ನ್ಯಾ. ಮಹಾಂತೇಶ ದರಗದ

ಕೊಪ್ಪಳ 25: ಭಾರತದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಕಾನೂನುಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಸಂಗಪ್ಪ ದರಗದ ಅವರು ಹೇಳಿದರು. 

ಅವರು ಸೋಮವಾರ ಕೊಪ್ಪಳ ನಗರದ ಪ್ಯಾಟಿ ಈಶ್ವರ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ “ಅಂತರಾಷ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಕಾರ್ಯಕ್ರಮಗಳು” ಹಾಗೂ “ಬೇಟಿ ಬಚಾವೋ ಬೇಟಿ ಪಡಾವೋ” ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು.  

ನವ್ಹೆಂಬರ್ 25ರಂದು ಅಂತರಾಷ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನ ಎಂದು ಆಚರಿಸಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ಸಬಲರಾಗಬೇಕು. ಯಾವುದೇ ದೌರ್ಜನ್ಯ ಜರುಗಿದಲ್ಲಿ ಹಕ್ಕು ಚಲಾಯಿಸುವ ಹಾಗೂ ದೌರ್ಜನ್ಯವನ್ನು ಖಂಡಿಸುವ ಮನೋಭಾವ ಮಹಿಳೆ ಬೆಳಸಿಕೊಳ್ಳಬೇಕು. ಸಮಾಜದಲ್ಲಿ ಕೃತ್ಯ ಎಸಗಿದಾಗ ಪ್ರಶ್ನಿಸುವ ಹಕ್ಕು ಮಹಿಳೆಗೆ ಇದೆ. ಕಾನೂನಿನ ಮುಂದೆ ಎಲ್ಲರೂ ಸಮಾನಿದ್ದರೂ ಸಹ ಕೆಲವು ವಿಷಯಗಳಲ್ಲಿ ಹಿಂದೆ ಇರುವರು. ಮುಂದೆ ಉದೋಗ್ಯಗಳಲ್ಲಿ ಶೇ80 ರಷ್ಟು ಮಹಿಳೆಯರೇ ಇರಲಿದ್ದಾರೆ. ಕಛೇರಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವಾದಲ್ಲಿ ಅದನ್ನು ಕಮಿಟಿ ಮುಂದೆ ದೂರು ನೀಡಬಹುದಾಗಿದೆ ಎಂದು ತಿಳಿಸಿದ ಅವರು, ವಿವಿಧ ಮಹಿಳಾ ಕಾನೂನು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು.  

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ ಅವರು ಮಾತನಾಡಿ, ಮಹಿಳೆಯರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಸಂವಿಧಾನ ಕತೃ ಆದ ಡಾ. ಬಿಆರ್‌. ಅಂಬೇಡ್ಕರ್ ರವರು ​‍್ರ​‍್ರಥಮ ಬಾರಿಗೆ ಮಹಿಳೆಯರಿಗೆ ಹಕ್ಕು, ಆಸ್ತಿಯ ಹಕ್ಕು ನೀಡಬೇಕು ಎಂದು ಆಶಯ ಹೊಂದಿದ್ದರು. ಮಹಿಳೆಯರ ಮೇಲೆ ದೌರ್ಜನ್ಯ ಇನ್ನೂ ನಡೆಯುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತುವ ಗುಣ ನಮ್ಮ ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟಪ್ಪನವರ್ ಅವರು ಮಾತನಾಡಿ, ಮಹಿಳೆಯರು ಇಲಾಖೆಯ ವಿವಿಧ ಸೌಲಭ್ಯಗಳು ಮತ್ತು ತಮ್ಮ ಪರವಾದ ಕಾನೂನುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಕನಿಷ್ಠ ಕಾನೂನುನ ಅರಿವು ಅವಶ್ಯವಾಗಿರಬೇಕು. ಇಂತಹ ಕಾರ್ಯಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಅವರು ಮಾತನಾಡಿ, ಮಹಿಳೆಯರು ಕುಟುಂಬದಲ್ಲಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸ್ವಾವಲಂಬಿ ಜೀವನ ಸಾಗಿಸುವಲ್ಲಿ ಮಹಿಳೆ ಮುಂಚುಣಿಯಲ್ಲಿ ಇರುವುದು ಬಹುಮುಖ್ಯವಾಗಿದೆ. ಮಹಿಳಾ ಸಬಲೀಕರಣವಾಗಬೇಕು ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಕಟದ ಎಲ್‌.ಪಿ.ಓ ಶಿವಲೀಲಾ ಹೊನ್ನೂರು ಅವರು ವಿಶೇಷ ಉಪನ್ಯಾಸ ನೀಡಿ, ಹೆಣ್ಣು ಮಗು ಹೆಚ್ಚು ಜಾಗೃತವಾಗಿರಬೇಕು ಎಂಬ ವಿಷಯದಲ್ಲಿ ಕುಟುಂಬದ ಪಾತ್ರ ಅತಿ ಮುಖ್ಯವಾಗಿದೆ. ಮಹಿಳೆಯರು ಎಲ್ಲಾ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಇಂತಹ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವಷ್ಟು ಮುಂಚುಣಿಯಲ್ಲಿ ನಮ್ಮ ಮಹಿಳೆಯರು ಇರಬೇಕು. ಕೌಟುಂಬಿಕ ಕಲಹ, ಯಾವುದೇ ಜಾತಿ, ಲಿಂಗ, ವರ್ಣಗಳ ಆಧಾರದ ಮೇಲೆ ಮಹಿಳೆಯರನ್ನು ಬೇಧ ಭಾವ ಮಾಡಬಾರದು. ಹೆಣ್ಣು ಮಗುವಿನ ರಕ್ಷಣೆ ನಮ್ಮೆಲ್ಲರ ಹೊಣೆ, ಮಹಿಳಾ ಸಬಲೀಕರಣ ಪ್ರಕ್ರಿಯೇ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ವಕೀಲರಾದ ಹನುಮಂತ ರಾವ್, ಹರೀಶ್ ಹಾಗೂ ಟಿ.ಎಸ್‌.ವಿರಾಪೂರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ್ ಸೇರಿದಂತೆ ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲಾ ಮಹಿಳಾ ಮಣಿಗಳು ಉಪಸ್ಥಿತರಿದ್ದರು.