ಧಾರವಾಡ 17: ಕರ್ನಾಟಕ ವಿದ್ಯಾವರ್ಧಕ ಸಂಘವು “ಶ್ರೀಮತಿ ರಶ್ಮಿ ಮಂಜುನಾಥ ನಾಯಕ ದತ್ತಿ” ಅಂಗವಾಗಿ ದಿನಾಂಕ: 18-6-2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ವಿದ್ಯಾರಶ್ಮಿ ಪ್ರಶಸ್ತಿ’ ಪ್ರದಾನ, ಸನ್ಮಾನ, ಉಪನ್ಯಾಸ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ಸ್ ವಿತರಣೆ ಕಾರ್ಯಕ್ರಮ ಏರಿ್ಡಸಿದೆ. ಧಾರವಾಡ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸುವರು. ಧಾರವಾಡ ಕ.ವಿ.ವ. ಸಂಘದ ಉಪನ್ಯಾಸಕಿ ಡಾ. ಸಂಜೀವ ಕುಲಕರ್ಣಿ ‘ಹದಿಹರೆಯದ ಮಾನಸಿಕ ತುಡಿತಗಳು ಮತ್ತು ಪರಿಣಾಮ’ ವಿಷಯ ಕುರಿತು ಅತಿಥಿ ಉಪನ್ಯಾಸ ನೀಡುವರು.
ಅತಿಥಿಗಳಾಗಿ ಧಾರವಾಡ ವಿಶ್ರಾಂತ ಪೊಲೀಸ್ ಅಧೀಕ್ಷಕ ಡಿ.ಎಂ. ನಾಯಕ ಆಗಮಿಸುವರು. ದತ್ತಿ ದಾನಿಗಳಾದ ಕೆ.ಎಚ್. ನಾಯಕ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಧಾರವಾಡ ಶಹರದ ವಿದ್ಯಾರ್ಥಿ ಕುಮಾರ. ಸಮರ್ಥ ಉಮರ್ಜಿ, ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆ, ಧಾರವಾಡ ಅವರಿಗೆ ‘ವಿದ್ಯಾರಶ್ಮಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದತ್ತಿದಾನಿಗಳಿಂದ ಧಾರವಾಡ ಶಹರದ ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ಸ್ ವಿತರಣೆ ಮಾಡಲಾಗುವುದು.
ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಶ್ರೀಮತಿ ರಶ್ಮಿ ನಾಯಕ
ರಶ್ಮಿ ನಾಯಕ ಇವರು ಕೆ.ಎಚ್. ನಾಯಕ ಮತ್ತು ಬೇಬಿ ನಾಯಕರವರ ಪುತ್ರಿ. ದಿ. 18-6-1988 ರಲ್ಲಿ ಧಾರವಾಡದಲ್ಲಿ ಜನಿಸಿದರು. ತಂದೆ ಕೆ. ಎಚ್. ನಾಯಕ ಅವರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೇಷ್ಠ ಶಿಕ್ಷಕರಾಗಿ ನಿವೃತ್ತಿ ಹೊಂದಿದವರು. ಸುಸಂಸ್ಕೃತ ಕುಟುಂಬ. ಶ್ರೀಮತಿ ರಶ್ಮಿ ಎಂ.ಎಸ್.ಸಿ ಬಯೋಟೆಕ್ ಮತ್ತು ಎಂ.ಎಸ್.ಸಿ ಜಿಯೊಲಾಜಿ ಪದವೀಧರೆಯಾಗಿ ಶಿಕ್ಷಕಿಯಾಗಬೇಕೆಂಬ ಹಂಬಲದಲ್ಲಿ ಬಿ.ಎಡ್ ತರಬೇತಿಯನ್ನು ಪಡೆದಿದ್ದರು.
ಅಪ್ಪ ಅಮ್ಮರಂತೆ ಆದರ್ಶ ಶಿಕ್ಷಕಿಯಾಗುವ ಕನಸು ಹೊತ್ತು ಬೆಂಗಳೂರಿನ ರಾಷ್ಟ್ರೋತ್ಥಾನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿ ದಿಸೆಯಲ್ಲಿಯೇ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರ್ರಶಸ್ತಿ ಪಡೆದಿದ್ದ ರಶ್ಮಿ, ದೀನ ದಲಿತರು, ಬಡವರು, ಅಸಹಾಯಕರ ಕಂಡರೆ ಸಹಾಯಕ್ಕೆ ಧಾವಿಸುವ ಹೃದಯ ಶ್ರೀಮಂತಿಕೆ ಹೊಂದಿದ್ದರು.
ಧಾರವಾಡದ ದಿ. ನಾಗೇಶ ನಾಯಕ ಹಾಗೂ ಶ್ರೀಮತಿ ನಾಗವೇಣಿ ನಾಯಕ ಅವರ ಮಗ ಸ್ವಾತಂತ್ರ್ಯ ಯೋಧ ದಿವಂಗತ ಬೊಮ್ಮಯ್ಯ ನಾಯಕ ಅವರ ಮೊಮ್ಮಗ, ಶ್ರೀ ಮಂಜುನಾಥ ನಾಯಕ, ಬಿ.ಇ. ಪದವೀಧರರಾಗಿ ಬಿ.ಇ.ಎಲ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಇವರನ್ನು ರಶ್ಮಿ ಬಾಳಸಂಗಾತಿಯಾಗಿ ಕೈಹಿಡಿದರು.ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ರಶ್ಮಿ ಚೊಚ್ಚಲ ಹೆರಿಗೆಯಲ್ಲಿ ಪ್ರೀತಿಯ ಪತಿಯ ಕೈಗೆ ಹೆಣ್ಣು ಮಗುವನ್ನು ಕೊಟ್ಟು ಕಣ್ಣು ಮುಚ್ಚಿದರು.
ತಂದೆ ಕೆ. ಎಚ್. ನಾಯಕ, ತಾಯಿ ಬೇಬಿ ನಾಯಕ ಅವರು ಪ್ರೀತಿಯ ಮಗಳ ನೆನಪು ಸದಾ ಸಮಾಜಮುಖಿ ಕಾರ್ಯಗಳೊಂದಿಗೆ ಉಳಿಯಲೆಂಬ ಆಶಯದೊಂದಿಗೆ ತಮ್ಮ ಮಗಳ ಹೆಸರಿನಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ‘ವಿದ್ಯಾರಶ್ಮಿ’ ಪ್ರಶಸ್ತಿ ನೀಡಿ ಗೌರವಿಸಲು ಸಂಘದಲ್ಲಿ 2017 ರಲ್ಲಿ ದತ್ತಿ ಇಟ್ಟಿದ್ದಾರೆ.