‘ಧ್ಯಾನ, ಜ್ಞಾನದಿಂದ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ’

'Through meditation and knowledge, one can find meaning in life'

ಲೋಕದರ್ಶನ ವರದಿ 

‘ಧ್ಯಾನ, ಜ್ಞಾನದಿಂದ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ’  

ಯರಗಟ್ಟಿ 15: ಮನುಷ್ಯ ಆಧ್ಯಾತ್ಮಿಕ ಜ್ಞಾನದೊಂದಿಗೆ ಜಾತಿ, ಧರ್ಮ ಸಮಾನವಾಗಿ ಕಾಣಬೇಕು. ಧ್ಯಾನ ಮತ್ತು ಜ್ಞಾನದಿಂದ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಭಾಗೋಜಕೊಪ್ಪ ಡಾ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 


ಸಮೀಪದ ಕೋ.ಶಿವಾಪೂರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠ ಆವರಣದಲ್ಲಿ ಆಯೋಜಿಸಿದ್ದ ಜಡೆತಲೆ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ ಅವರ 21 ದಿನಗಳ ಮೌನ ಅನುಷ್ಠಾನ ಮತ್ತು ಲಿಂಗಪೂಜಾ ಸಮಾರೋಪ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. 


ನಂತರ ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ ಅವರು ಮೌನ ಹಾಗೂ ತಮ್ಮ ನಡೆ-ನುಡಿ, ತತ್ವ ಆದರ್ಶಗಳಿಂದ ಜಗತ್ತನ್ನೆ ಗೆದ್ದ ಮಹಾ ದಾರ್ಶನಿಕರು. ಲೋಕಕಲ್ಯಾಣಕ್ಕಾಗಿ ಬರೆದ ಗ್ರಂಥ ಇಂದು ಇಡೀ ದೇಶದಲ್ಲಿ ಖ್ಯಾತಿ ಪಡೆದಿದೆ. ಆದ್ದರಿಂದ ಗುರು ತೋರಿದ ಮಾರ್ಗದಲ್ಲಿ ನಡೆದರೆ ಉತ್ತಮ ಫಲ ಪ್ರಾಪ್ತಿಯಾಗಿ ಜೀವನ ಉನ್ನತಿ ಹೊಂದುವುದು ಎಂದು ಹೇಳಿದರು. 


ಮನುಷ್ಯ ಇಂದು ಹಣ ಅಧಿಕಾರದ ಬೆನ್ನು ಹತ್ತಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಮಠ ಮಾನ್ಯಗಳು ಇರುವುದು ಸಮಾಜವನ್ನು ಸರಿದಾರಿಗೆ ತರುವುದಕ್ಕೆ ಹೊರತು ಬೇರೆಯದಕ್ಕಲ್ಲ. ಮನೆ ಮತ್ತು ಮಠಗಳಿಗೆ ನಿಕಟವಾದ ಸಂಪರ್ಕ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಠಾಧೀಶರು ನೀಡುವ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಬದುಕು ಸಾರ್ಥಕತೆ ಪಡೆಯಲಿದೆ ಎಂದರು. 


ಹಣ್ಣಿಕೇರಿ ಶ್ರೀಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮಿಜಿ, ಮೊರಬ ಜಡಿಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿಜಿ, ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಕಪ್ಪರಟ್ಟಿ-ಕಳ್ಳಿಗುದ್ದಿ ಬಸವರಾಜಸ್ವಾಮಿಜಿ, ಬಸಯ್ಯ ಹಿರೇಮಠ, ಮಹಾದೇವಪ್ಪ ಗಡ್ಡಿ, ಮಹಾಂತೇಶ ತೋಟಗಿ, ಶಿವಾನಂದ ಕಟ್ಟಿಮನಿ, ನಾಗಪ್ಪ ಹಂಜಿ, ಶಿಂಗಯ್ಯ ಮಠಪತಿ, ಫಕ್ಕಿರ​‍್ಪ ಇಟ್ಟಣಗಿ, ಮಲ್ಲಿಕಾರ್ಜುನ ಅಂಗಡಿ, ಪ್ರಜ್ವಲ ಹಿರೇಮಠ, ಪ್ರವೀಣ ವಿಭೂತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಇದ್ದರು. 


ಇತ್ತೀಚಿನ ಸುದ್ದಿ