ಉಭಯ ಶ್ರೀಗಳ ಜಾತ್ರಾ ಮಹೋತ್ಸವ
ಜೂ. 16 ರಂದು ಮಹಾರಥೋತ್ಸವ : ಧರ್ಮೋತ್ತೇಜಕ ಮಹಾಸಭೆ
ಗದಗ 15: ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ಜೂ. 16 ರಂದು ಸೋಮವಾರ ಸಂಜೆ 6 ಗಂಟೆಗೆ ಮಹಾರಥೋತ್ಸವ ಹಾಗೂ ಧರ್ಮೋತ್ತೇಜಕ ಮಹಾಸಭೆ ಜರುಗುವುದು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯಶ್ರೀ ಜ. ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಧಾರವಾಡ ಮುರಘಾಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಗಂಗಾವತಿ ಕಲ್ಮಠದ ಪೂಜ್ಯಶ್ರೀ ಡಾ. ಕೊಟ್ಟೂರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಪೂಜ್ಯಶ್ರೀ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು, ಬಳಗಾನೂರ ಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು, ಚನ್ನಮ್ಮ ಕಿತ್ತೂರಿನ ಪೂಜ್ಯಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪೂರಿನ ಪೂಜ್ಯಶ್ರೀ ವಿರುಪಾಕ್ಷಿ ದೇವರು, ಯಡ್ರಾಮಿಯ ಪೂಜ್ಯಶ್ರೀ ಪ್ರಣವಲಿಂಗ ಮಹಾಸ್ವಾಮಿಗಳು, ಲಿಂಗಸೂರಿನ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ನ್ಯ ಸಭಾಪತಿ ಬಸವರಾಜ ಹೊರಟ್ಟಿ, ನರಗುಂದ ಶಾಸಕ ಸಿ.ಸಿ. ಪಾಟೀಲ, ಧಾರವಾಡ ಶಾಸಕ ಮಹೇಶ ಟೆಂಗಿನಕಾಯಿ, ಕೆಎಂಎಫ್ ಎಚ್. ಜಿ. ಹಿರೇಗೌಡರ, ಮುಖಂಡರಾದ ಅನಿಲ್ ಮೆಣಸಿನಕಾಯಿ, ಅಂಬಿಕಾ ಜಾರಕಿಹೊಳಿ, ಸಂತೋಷ ಜಾರಕಿಹೊಳಿ, ಮುಚಖಂಡಯ್ಯನವರು ಹಂಗರಗಿ, ಡಾ. ಪುರುಷೋತ್ತಮಗೌಡ್ರು, ಈಶ್ವರಸಾ ಮೆಹರವಾಡೆ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ 2025 ನೇ ಸಾಲಿನ ಪಂ. ಪಂಚಾಕ್ಷರಿ ಗವಾಯಿಗಳವರ ಪುಣ್ಯಸ್ಮರಣೋತ್ಸವದಲ್ಲಿ ರಾಮಣ್ಣ ನಸಬಿ ಸಾ. ಬಿಳೇಕಲ್(ಸಂಗೀತ ಕ್ಷೇತ್ರ) ಅವರಿಗೆ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ಹಾಗೂ ಜಗಳೂರಿನ ವಿರೂಪಾಕ್ಷಯ್ಯ ಶಾಸ್ತ್ರಿ ಹಿರೇಮಠ (ಪ್ರವಚನ ಕ್ಷೇತ್ರ) ಬೆಂಗಳೂರಿನ ರಾಜು ಎಮ್ಮಿಗನೂರ (ಗಾಯನ ಕ್ಷೇತ್ರ) ಹಾಗೂ ಪ್ರಕಾಶ ಬಸರಿಗಿಡದ (ಭೂದಾನ ಕ್ಷೇತ್ರ) ಅವರುಗಳಿಗೆ ಕುಮಾರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದಿಂದ ಉಭಯ ಗುರುಗಳ ಭಾವಚಿತ್ರದ ಮೆರವಣಿಗೆ ಆರಂಭಗೊಳ್ಳುವುದು.
ಬೆಳಿಗ್ಗೆ 11 ಗಂಟೆಗೆ ಸನ್ಮಾನ ಕಾರ್ಯಕ್ರಮ ಜರಗುವುದು. ಸಂಜೆ 4 ಗಂಟೆಗೆ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ ಮಹಾಪುರಾಣ ಮಂಗಲಗೊಳ್ಳುವುದು ಸಂಜೆ 6 ಗಂಟೆಗೆ ಉಭಯ ಗುರುಗಳ ಮಹಾರಥೋತ್ಸವ ಜರುಗುವುದು ಎಂದು ಶ್ರೀ ಮಠವು ಪ್ರಕಟಣೆಯಲ್ಲಿ ತಿಳಿಸಿದೆ.