ಬಳ್ಳಾರಿಯಲ್ಲಿ ಎಐಡಿಎಸ್ಓ 70ನೇ ಸಂಸ್ಥಾಪನಾ ದಿನ ಕಾರ್ಯಕ್ರಮ
ಬಳ್ಳಾರಿ 28: ಆರ್ವಾಯ್ಎಂಇಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಐಡಿಎಸ್ಓ 70ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ಯೇಯದ್ದೇಶ ಕುರಿತು ಚರ್ಚೆ ಹಾಗೂ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಸಿನಿಮಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷರುಗಳಲ್ಲಿ ಒಬ್ಬರಾದ ಅಪೂರ್ವ ಸಿ.ಎಂ ರವರು ಮಾತನಾಡುತ್ತಾ "ಶಿಕ್ಷಣ-ಮಾನವತೆ-ಸಂಸ್ಕೃತಿ" ಉಳಿಸಲು ಹಾಗೂ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಮಹಾನ್ ವಿಚಾರಧಾರೆಯ ಆಧಾರದ ಮೇಲೆ ತಳಮಟ್ಟದ ಹೋರಾಟ ಬೆಳೆಸಲು 70ನೇ ಎಐಡಿಎಸ್ಒ ಸಂಸ್ಥಾಪನಾ ದಿನವನ್ನು ಯೋಗ್ಯ ರೀತಿಯಲ್ಲಿ ಆಚರಿಸಿ!" ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡಿ ದೇಶದ ನವೋದಯ ಚಿಂತಕರ, ಮಹಾನ್ ಕ್ರಾಂತಿಕಾರಿಗಳ ಕನಸಿನ ಭಾರತ ನಿರ್ಮಿಸಲು, ಸ್ವಾತಂತ್ರ ಸಂಗ್ರಾಮದ ರಾಜಿ ರಹಿತ ಕ್ರಾಂತಿಕಾರಿ ಹೋರಾಟಗಾರರು ಮತ್ತು ನಮ್ಮ ನಾಯಕರು ಹಾಗೂ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ರವರ ಚಿಂತನೆಗಳ ಆಧಾರದ ಮೇಲೆ ಬಂಗಾಳದಲ್ಲಿ ಬಹುಪಾಲು ಪ್ರೌಢ ಶಾಲಾ ವಿದ್ಯಾರ್ಥಿಗಳು ಡಿಸೆಂಬರ್ 28, 1954 ನಮ್ಮ ಎಐಡಿಎಸ್ಒ ಆರಂಭಿಸಿದರು.
ಇಂದು, ದೇಶದಾದ್ಯಂತ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎಐಡಿಎಸ್ಒ ಕಾರ್ಯ ನಿರ್ವಹಿಸುತ್ತಾ ದೇಶದ ಬಹು ದೊಡ್ಡ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲ ಮೂಲಭೂತ ಸಮಸ್ಯೆಗಳ ವಿರುದ್ಧ ಹೋರಾಡಲು, ಮಹಾನ್ ವಿಚಾರಧಾರೆಯ ಆಧಾರದ ಮೇಲೆ ಶಿಕ್ಷಣ-ಮಾನವತೆ-ಸಂಸ್ಕೃತಿಯನ್ನು ಉಳಿಸುವ ಚಳುವಳಿಯನ್ನು ನಾವು ತಳ ಮಟ್ಟದಿಂದ ಆರಂಭಿಸಬೇಕಿದೆ. ದೇಶಾದ್ಯಂತ ಓಇಕ2020 ಪ್ರತಿರೋಧಿಸಲು, ಸಾರ್ವಜನಿಕ ಶಿಕ್ಷಣ ಉಳಿಸಲು ನಾವೆಲ್ಲರೂ ಸಜ್ಜಾಗಬೇಕಿದೆ. ಈ ದೇಶದ ಪ್ರತಿಯೊಬ್ಬ ಮಗುವಿಗೂ, ಉನ್ನತ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ದೊರಕಬೇಕೆಂದು ಹೋರಾಡಿದ ಭಗತ್ ಸಿಂಗ್, ಸುಭಾಸ್ಚಂದ್ರ ಬೋಸ್ ರವರ ಕನಸು ಕನಸಾಗಿಯೇ ಉಳಿದಿದೆ. ಅವರು ತಮ್ಮ ಕನಸನ್ನು ನನಸು ಮಾಡುತ್ತಾರೆ ಎಂಬ ಭರವಸೆ ಇರಿಸಿದ್ದು ನಮ್ಮ ಮೇಲೆ! ಈ ನೆಲದ ವಿದ್ಯಾರ್ಥಿ ಸಮುದಾಯದ ಮೇಲೆ! ಆ ಭರವಸೆ ಈಡೇರಿಸುವ ಐತಿಹಾಸಿಕ ಜವಾಬ್ದಾರಿ ನಮ್ಮ ಮೇಲಿದೆ.
ಈ ಜವಾಬ್ದಾರಿಯನ್ನು ಮತ್ತಷ್ಟು ತೀಕ್ಷ-್ಣಗೊಳಿಸಲು ಈ ಸಂಸ್ಥಾಪನಾ ದಿನದಂದು ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳೋಣ! ಈ ಹಿನ್ನಲೆಯಲ್ಲಿ ಸಂಸ್ಥಾಪನಾ ದಿನದ ಸಂದೇಶವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ, ಎಐಡಿಎಸ್ಒ ಸಮಿತಿಗಳ ಎಲ್ಲ ಸದಸ್ಯರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸೋಣ! ನಮ್ಮ ಜಿಲ್ಲೆಯಲ್ಲಿಯೂ ಬಲಿಷ್ಠ ಸಂಘಟನೆ ಕಟ್ಟುವ ಕಾರ್ಯಕ್ಕೆ ಮುಂದಾಗೋಣ!"ಎಂದರು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಉಪಾಧ್ಯಕ್ಷರು ಎಂ.ಶಾಂತಿ, ಉಮಾ ಮತ್ತು ಕಛೇರಿ ಕಾರ್ಯದರ್ಶಿ ನಿಹಾರಿಕ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.