ಭೀಮವ್ವ ಅಜ್ಜಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಹಿರಿಮೆ - ವೈದ್ಯ ಬಸವರಾಜ್ ಕ್ಯಾವಟರ್ ಸಂತಸ
ಕೊಪ್ಪಳ 27: ತಾಲೂಕಿನ ಮೊರನಾಳ ಗ್ರಾಮದ ಭೀಮವ್ವ ದೊಡ್ಡ ಬಾಳಪ್ಪ ಸಿಳ್ಳೆಕ್ಯಾತರ ಅವರಿಗೆ ಭಾರತ ಸರಕಾರ ಅವರ ಕಲೆಯನ್ನು ಗುರುತಿಸಿ 2019 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ನೀಡಿರುವುದು ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದ್ದಾರೆ.ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ನಿಯೋಗದೊಂದಿಗೆ ಸೋಮವಾರ ಮೊರನಾಳ ಗ್ರಾಮಕ್ಕೆ ಭೇಟಿ ನೀಡಿ ಭೀಮವ್ವ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಈ ತೊಗಲುಗೊಂಬೆಯಾಟ ನಮ್ಮ ಸನಾತನದ ಜಾನಪದ ಸಂಸ್ಕೃತಿಯ ಕಲೆಯಲ್ಲಿ ಒಂದಾಗಿದೆ. ಈ ಕಲೆಯಿಂದ ಇತಿಹಾಸದ ರಾಮಾಯಣ ಮಹಾಭಾರತದ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಬಗ್ಗೆ ನೆನಪು ಮಾಡುವ ಇದೊಂದು ಕಲೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಲಿಕ್ಕೆ ಹೆಮ್ಮೆ ಅನಿಸುತ್ತದೆ.ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಳೆದ 60 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಅದ್ಭುತವಾಗಿ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.ಇಂತಹ ದೊಡ್ಡ- ದೊಡ್ಡ ಪ್ರಶಸ್ತಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಾಧನೆ ಮಾಡುತ್ತಿರುವ ವ್ಯಕ್ತಿಗಳಿಗೆ ಇದೊಂದು ರೀತಿ ಅನ್ಯಾಯವೇ ಸರಿ ಎಂದು ಹೇಳಬಹುದು. ಆದರೆ, ಭಾರತ ಸರಕಾರದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ಮತ್ತು ಬಿಜೆಪಿ ಪಕ್ಷದವರು ಭಾರತ ದೇಶದ ಪರಂಪರೆ ಇತಿಹಾಸ ಮತ್ತು ಸಮಾಜದಲ್ಲಿ ಸಾಧನೆ ಮಾಡುವವರನ್ನು ಹುಡುಕಿ ಹುಡುಕಿ ಬಡತನದಿಂದ ಬಂದು ಬೆಳೆದು ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸಾಧನೆಗೆ ತಕ್ಕಂತೆ ಗುರುತಿಸಿ ಸನ್ಮಾನ್ಯ ಗೌರವಾನ್ವಿತ ನರೇಂದ್ರ ಮೋದಿಜಿ ಅವರ ಭಾರತ ಸರ್ಕಾರ ಸಾಧನೆ ಮಾಡಿದವರನ್ನು ಗೌರವಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ವಿಶೇಷವಾಗಿ ಮೊರನಾಳ ಭೀಮಮ್ಮ ಅವರ ಕಲೆಗೆ, ನಿರಂತರ ಶ್ರಮಕ್ಕೆ ಅವರಿಗೆ ಗೊತ್ತಿಲ್ಲದ ಹಾಗೆ ಇವತ್ತು ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಕೊಪ್ಪಳ ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಇದೊಂದು ಅವಿಸ್ಮರಣೀಯ ಸಂತೋಷದ ಘಳಿಗೆಯಾಗಿದೆ.
ಹಾಗಾಗಿ ನಾವೆಲ್ಲರೂ ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ ಸನ್ಮಾನ್ಯ ನರೇಂದ್ರ ಮೋದಿಜಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ಈ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಈ ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದ ಅವಧಿಯಲ್ಲಿ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವನಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಮೊರನಾಳ ಭೀಮವ್ವ ರವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವತ್ತು ಅದರ ಹಾದಿಯಾಗಿ ಪದ್ಮಶ್ರೀ ಪ್ರಶಸ್ತಿ ನಮ್ಮ ಜಿಲ್ಲೆಯ ಮಹಿಳೆಗೆ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಚಂದ್ರಶೇಖರ್ ಪಾಟೀಲ್ ಹಲಿಗೇರಿ, ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಮೈನಹಳ್ಳಿ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ, ಪ್ರದೀಪ್ ಹಿಟ್ನಾಳ, ವೀರೇಶ್ ಸಜ್ಜನ್, ವಾಣಿಶ್ರೀ ಮಠದ್, ಫಕೀರ್ಪ ಆರ್ಯಾರ್, ವೆಂಕಟೇಶ್ ಹಾಲವರ್ತಿ, ಪಾಂಡು ಹಟ್ಟಿ, ಅಂದಪ್ಪ ಬೋರನಾಳ, ನಾಗನಗೌಡರು ಡಂಬ್ರಳ್ಳಿ, ಬಸವ ರೆಡ್ಡಿ ಬೈರಾಪುರ, ಬಸವರಾಜ ಉಳ್ಳಾಗಡ್ಡಿ, ಶ್ರೀನಿವಾಸ್ ಕಲಾದಿಗಿ ಸೇರಿ ಇತರರು ಇದ್ದರು.