ಸಡಗರದ ಶಾಲಾ ಪ್ರಾರಂಭೋತ್ಸವ
ಹೂವಿನಹಡಗಲಿ 31: ತಾಲೂಕಿನ ಮೈಲಾರ ಗ್ರಾಮದ ತೋಟಿಗರ ದೇವೇಂದ್ರ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಾನಕಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ, ಹಿರಿಯರಾದ ಹನುಮಂತಪ್ಪ ಸೇರಿದಂತೆ ಮುಖ್ಯ ಶಿಕ್ಷಕರು,ಶಿಕ್ಷಕರು, ಅಡುಗೆ ಸಿಬ್ಬಂದಿ ಮಕ್ಕಳನ್ನು ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಮ್ಮ ವಿದ್ಯಾರ್ಥಿಗಳು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕರೆ ನೀಡಿದರು. ಹಿರಿಯರಾದ ಹನುಮಂತಪ್ಪ ಮಾತನಾಡಿ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗದೆ ಇರುವಂತೆ ತಿಳಿ ಹೇಳಿದರು.
ಹಿರಿಯ ಶಿಕ್ಷಕಿ ಸುದಾ ಕೆ.ವಿ. ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಯೋಜನೆಗಳ ಮಹತ್ವ ತಿಳಿಸಿ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಮುಖ್ಯ ಗುರುಗಳಾದ ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ,ಶಾಲೆಯ ಶಿಕ್ಷಕರು, ಸಿಬ್ಬಂದಿ, ಅಡುಗೆ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆರ್.ಆನಂದಮೂರ್ತಿ ಸ್ವಾಗತಿಸಿದರು. ಶಿಕ್ಷಕಿ ದಾಕ್ಷಾಯಿಣಿ ಮುಳಗುಂದ ವಂದಿಸಿದರು. ದೈಹಿಕ ಶಿಕ್ಷಕ ಕೆ.ಎಂ.ಮೃತ್ಯುಂಜಯ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಪೂರಕ ಪೌಷ್ಠಿಕ ಆಹಾರ ಮೊಟ್ಟೆ, ಬಾಳೆಹಣ್ಣು ಜೊತೆ ಬೂಂದಿ ಲಾಡು ಸಿಹಿಯೊಂದಿಗೆ ಊಟ ಬಡಿಸಲಾಯಿತು.