ಡಾ.ಎಂ.ಎಂ.ಕಲಬುರ್ಗಿಯವರ ಸಾಹಿತ್ಯ, ಸಂಶೋಧನೆ ಕನ್ನಡದ ಶಕ್ತಿ ಹೆಚ್ಚಿಸಿದೆ : ಡಾ.ವೀರಣ್ಣ ರಾಜೂರ
ಬೆಳಗಾವಿ 04: ನಮ್ಮ ನಾಡಿನ ಖ್ಯಾತ ಸಂಶೋಧಕರು ಹಾಗೂ ಚಿಂತಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿಯವರ ಕೊಡುಗೆ ಅನನ್ಯವಾದುದು. ಇಂದಿನ ಯುವ ಸಂಶೋಧಕರು ಅವರನ್ನು ತಿಳಿದುಕೊಳ್ಳುವುದು ಬಹಳವಿದೆ. ಕನ್ನಡ ಸಾರಸ್ವತ ಲೋಕವನ್ನು ತಮ್ಮ ಸಂಶೋಧನೆಯ ಮೂಲಕವಾಗಿ ಬೆಳಗಿದವರು ಡಾ.ಎಂ.ಎಂ.ಕಲಬುರ್ಗಿಯವರು ಎಂದು ಖ್ಯಾತ ಸಂಶೋಧಕರು ಡಾ.ಎಂ. ಎಂ ಕಲ್ಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡದ ಅಧ್ಯಕ್ಷ ಡಾ.ವೀರಣ್ಣಾ ರಾಜೂರ ಹೇಳಿದರು.
ಅವರು ಡಾ.ಎಂ. ಎಂ ಕಲ್ಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ಹಾಗೂ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿಯ ಕನ್ನಡ ವಿಭಾಗದ ವತಿಯಿಂದ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ.ಎಮ್. ಎಮ್. ಕಲಬುರ್ಗಿರವರ ನಾಟಕ ಸಾಹಿತ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಎಂ. ಎಂ. ಕಲಬುರ್ಗಿಯವರ ವ್ಯಕ್ತಿತ್ವ ಬಹುದೊಡ್ಡದು. ಅವರ ಸಾಹಿತ್ಯ ಸಂಶೋಧನೆಯ ವಿಸ್ತಾರ ಅಗಾಧವಾಗಿತ್ತು. ಅವರ ಸಾಹಿತ್ಯದ ಪಂಚಮುಖಿ ವಿಚಾರಗಳಾದ ಅಧ್ಯಯನ, ಬೋಧನೆಯ, ಸಂಶೋಧನಾ, ಯೋಜನೆ ಮತ್ತು ಸಮಾಜಮುಖಿ ತತ್ವಗಳು ಪ್ರಖರವಾಗಿದ್ದವು. ಅವರು ಆಳವಾದ ಸಂಶೋಧನೆಗಳ ಮೂಲಕ ಕನ್ನಡದ ಸಾಹಿತ್ಯವನ್ನು ಗಟ್ಟಿಗೊಳಿಸಿದರು. ಸಾಹಿತ್ಯ ಬಹುಪ್ರಕಾರದಲ್ಲಿ ಅವರ ಹೆಜ್ಜೆಗುರುಗಳನ್ನು ಕಾಣಲು ಸಾಹಿತ್ಯ, ಯುವಪ್ರತಿಭಾ ಸಂಪನ್ನ ಸಂಶೋಧಕರು ಕಲಬುರ್ಗಿಯವರ ಸಂಶೋಧನಾ ಕೃತಿಗಳನ್ನು ಗಂಭೀರವಾಗಿ ಅಧ್ಯಯನಿಸಬೇಕೆಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಸಾಹಿತಿ ಡಾ. ವಿ.ಎಸ್.ಮಾಳಿ ಮತ್ತು ರಂಗಕರ್ಮಿ ಡಾ. ರಾಮಕೃಷ್ಣ ಮರಾಠೆ ಡಾ.ಎಂ.ಎಂ.ಕಲಬುರ್ಗಿಯವರ ‘ಖರೇ ಖರೇ ಸಂಗ್ಯಾ- ಬಾಳ್ಯಾ’ ಹಾಗೂ 'ಖರೇ ಖರೇ ಕಿತ್ತೂರು ಬಂಡಾಯ' ನಾಟಕ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ಎಚ್ ಎಮ್ ಚನ್ನಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕ ಪರ ಭಾಷಣ ಮಾಡಿದರು. ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿಯವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ, ಡಾ. ಹನುಮಾಕ್ಷಿ ಗೋಗಿ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ.ಅಶೋಕ ನರೋಡೆ, ಪ್ರೊ.ಶಶಿಕಾಂತ ತಾರದಾಳೆ, ಡಾ.ಮಹೇಶ ಗುರನಗೌಡರ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಬಾಗೇವಾಡಿ ಹಾಗೂ ಅಕ್ಷಯ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ನೆರವೇರಿಸಿದರು, ಡಾ.ಪಾಂಡುರಂಗ ಗಾಣಿಗೇರ ವಂದಿಸಿದರು.