ಮೆದುಳು-ಆರೋಗ್ಯಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಲಭ್ಯ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

Facility available at District Hospital for brain-health: DHO Dr. Yalla Ramesh Babu

ಮೆದುಳು-ಆರೋಗ್ಯಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಲಭ್ಯ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು 

ಬಳ್ಳಾರಿ 21 : ಮೆದುಳು ಆರೋಗ್ಯ ಸಂಬಂಧಿಸಿದ ಕಾಯಿಲೆಗಳಿಗೆ ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರಿಂದ ಸೌಲಭ್ಯವಿದ್ದು, ಇದರ ಸದುಪಯೋಗವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ ಇವರ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಆರೋಗ್ಯ ನೀರೀಕ್ಷಣಾಧಿಕಾರಿಗಳು ಮತ್ತು ಫಾರ್ಮಸಿ ಅಧಿಕಾರಿಗಳಿಗೆ ಮಂಗಳವಾರ ಏರಿ​‍್ಡಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಮೆದುಳು ಮತ್ತು ನರ ಸಮಸ್ಯೆಗಳಿಗೆ ಜನತೆಯು ಸಾಮಾನ್ಯವಾಗಿ ನಗರದ ವಿಮ್ಸ್‌ ತಪ್ಪಿದರೆ ಬೆಂಗಳೂರು ಮತ್ತು ಧಾರವಾಡಕ್ಕೆ ತೆರಳುತ್ತಾರೆ. ಇದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಯಲ್ಲಿಯೇ ತಜ್ಞರ ಸೌಲಭ್ಯವನ್ನು ಒದಗಿಸಿರುವುದರಿಂದ ಜನತೆಗೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕ್ಷೇತ್ರ ಮಟ್ಟದಲ್ಲಿ ನೀಡಬೇಕು. ಅನಗತ್ಯ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಕುಟುಂಬದ ಸದಸ್ಯರ ನೆಮ್ಮದಿಯ ಜೀವನಕ್ಕೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿಗೊಳಿಸಬೇಕು ಎಂದು ತಿಳಿಸಿದರು.ರಾಷ್ಟ್ರದ ಹೆಸರಾಂತ ಮನೋ ಆರೈಕೆ ಕೇಂದ್ರವಾಗಿರುವ ನಿಮಾನ್ಸ್‌ ಸಹಯೋಗ ಮತ್ತು ಸಲಹೆಗಳೊಂದಿಗೆ ನರರೋಗ ತಜ್ಞರ ಉಪಸ್ಥಿತಿಯಲ್ಲಿ ಮೆದುಳು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಪ್ತಸಮಾಲೋಚನೆ ನಡೆಸಲಾಗುವುದು. ಮುಖ್ಯವಾಗಿ ಪಾರ್ಶ್ವವಾಯು, ಅಪಸ್ಮಾರ, ಮರೆವು ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರ ವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವವರು ಆರಂಭಿಕ ಹಂತದಲ್ಲಿಯೇ ತಜ್ಞರನ್ನು ಸಂಪರ್ಕಿಸುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಟಾನ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಮಾತನಾಡಿ, ಈಗಾಗಲೇ ಜಿಲ್ಲಾ ಶಸ್ತ್ರಚಿಕಿತ್ಸಕರ ಅಧೀನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ಆರೋಗ್ಯ ವಿಭಾಗ ಆರಂಭಿಸಲಾಗಿದ್ದು, ವೈದ್ಯರು ಫಿಜಿಯೋಥೆರಫಿಸ್ಟ್‌, ಸ್ಪೀಚ್‌ಥೆರಫಿಸ್ಟ್‌, ಮನೋ ಶಾಸ್ತ್ರಜ್ಞರು ಹಾಗೂ ಶುಶ್ರೂಷಣಾಧಿಕಾರಿ ಒಳಗೊಂಡ ವೈದ್ಯಕೀಯ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದರು.ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬರುವಂತಹವವರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮನೋ ತಜ್ಞರ ಮೂಲಕ ಎಲ್ಲಾ ತಾಲ್ಲೂಕುಗಳಲ್ಲಿ ಪ್ರತಿ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಕಂಪ್ಲಿ, ಕುರುಗೋಡು, ಮೋಕಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯು ಸಹ ಶಿಬಿರಗಳನ್ನು ಏರಿ​‍್ಡಸಿ ಸ್ಥಳದಲ್ಲಿಯೇ ತಪಾಸಣೆ, ಆಪ್ತಸಮಾಲೋಚನೆ ಹಾಗೂ ಓಷದೋಪಚಾರ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆಯುವ ಮೂಲಕ ಆರಂಭದಲ್ಲಿಯೇ ಮಾನಸಿಕ ಆರೋಗ್ಯ ಗುಣಪಡಿಸಲು ಜನತೆಗೆ ಜಾಗೃತಿ ನೀಡಲು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಸಣ್ಣ ಕೇಶವ್, ಡಿಎಸ್‌ಆರ್‌ಸಿ ಆಪ್ತ ಸಮಾಲೋಚಕರಾದ ಪರಿಮಳ ಸೇರಿದಂತೆ ಜಿಲ್ಲೆಯ ಎಲ್ಲಾ ಆರೋಗ್ಯ ನೀರೀಕ್ಷಣಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು ಉಪಸ್ಥಿತರಿದ್ದರು.