ದುರ್ಗಾದೇವಿ ಶಿಕ್ಷಣ ಸಮಿತಿಯಿಂದ ಹುಲಿಕಲ್ ನಟರಾಜ ದಂಪತಿಗಳಿಗೆ ಗೌರವ ಸನ್ಮಾನ

Hulikal Nataraja couple honored by Durga Devi Education Committee

  ದುರ್ಗಾದೇವಿ ಶಿಕ್ಷಣ ಸಮಿತಿಯಿಂದ ಹುಲಿಕಲ್ ನಟರಾಜ ದಂಪತಿಗಳಿಗೆ  ಗೌರವ ಸನ್ಮಾನ  

 ಗದಗ 19:  ಶಾಲೆಗಳು ದೇವಾಲಯ ಇದ್ದಂತೆ, ಅಲ್ಲಿ ಹೆಚ್ಚು ಗಂಟೆ ಬಾರಿಸಿದರೆ ಅದರಲ್ಲಿನ ಪೊಸಿಟಿವ್ ವೈಬ್ರೇಷನ್‌ನಿಂದ  ಹೆಚ್ಚು ಜ್ಞಾನಿಗಳು, ಪ್ರಜಾವಂತರು ಹುಟ್ಟಿಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಪವಾಡಗಳನ್ನು ಬಯಲು ಮಾಡುವ ವೈಜ್ಞಾನಿಕ ಚಿಂತಕರಾದ ಡಾ. ಹುಲಿಕಲ್ ನಟರಾಜ್ ಅವರು ಹೇಳಿದರು.  

 ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ  ಸನ್ಮಾನ ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ಬೆರೆತು ಮಾತನಾಡಿದ ಅವರು ಮಕ್ಕಳು ಅಪರಿಚಿತರು ನೀಡುವ ಚಾಕಲೇಟ್, ಪೇಪರ್, ಸಹಿ ತಿನಿಸು ಮತ್ತು ಲಿಂಬಿಹಣ್ಣಿನಂತಹ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ಏಕೆಂದರೆ ದುಷ್ಕರ್ಮಿಗಳು ಅಮಾಯಕ ಮಕ್ಕಳನ್ನು ಪುಸಲಾಯಿಸಿ ಅಹಿತಕರ ಘಟನಗಳಿಗೆ ಕಾರಣಗಳಾಗುತ್ತಾರೆ ಅದ್ದರಿಂದ ಮಕ್ಕಳು ಪಾಲಕರು ಮತ್ತು ಶಿಕ್ಷಕರ ಮಾತುಗಳನ್ನು ಮಾತ್ರ ಕೇಳಬೇಕೆಂದು ಸಲಹೆ  ನೀಡಿದರು.  

ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ದೇವರ ಕೆಲಸವಾಗಿದೆ. ಆ ಕಾಯಕವನ್ನು ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ನಡೆದುಕೊಂಡು ಬಂದಿರುವುದು ಶ್ಳಾಘನೀಯವಾಗಿದೆ.  ಈ ಶಾಲೆಯಲ್ಲಿ ಮಕ್ಕಳು  ಚೆನ್ನಾಗಿ ಓದಿ, ಉತ್ತಮ ಸಾಧನೆ ಮಾಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಶಾಲೆಯ ಹಾಗೂ ದೇಶದ ಆಸ್ತಿಯಾದರೆ ಅದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದರು.  

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ ಅವರು ಮಾತನಾಡಿ,  ಸಮಾಜದಲ್ಲಿ ಅಜ್ಞಾನದಿಂದಾಗಿ ಜಿಡ್ಡುಗಟ್ಟಿರುವ ಮೂಡನಂಬಿಕೆಗಳನ್ನು ಅಳಿಸಿ, ಜ್ಞಾನದಿಂದ ಸದೃಡ ಸಮಾಜ ಕಟ್ಟಲು  ಎಲ್ಲರೂ ಶ್ರಮಿಸಬೇಕು. ಇಂದಿನ ಮಕ್ಕಳು ಮುಂದಿನ ದೇಶದ ಆಸ್ತಿಯಾಗಿರುವದರಿಂದ ಅವರಿಗೆ ಈಗಿನಿಂದಲೆ ಭವಿಷ್ಯದಲ್ಲಿ ಬೇಕಾಗುವ ಜ್ಞಾನವನ್ನು ನೀಡಬೇಕಾಗಿದೆ ಎಂದು ಹೇಳಿದರು.   

  ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕಿ ಕವಿತಾ ಇಮರಾಪೂರ ಅವರು ಮಾತನಾಡಿ, ಮಕ್ಕಳಿಗೆ ಇಂದಿನ ದಿನಗಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚು ಮೂಡಿಸಬೇಕಿದೆ. ಮೂಡನಂಬಿಕೆಗಳನ್ನು ದೂರು ಮಾಡಿ ಮೂಲ ನಂಬಿಕೆಗಳಿಗೆ ಗೌರವ ಕೊಡಬೇಕಾಗಿದೆ. ನಾವು ಎಷ್ಟೆ ಮುಂದುವರೆದರೂ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳಿದರು. 

 ಇದೇ ಸಂದರ್ಭದಲ್ಲಿ ಇತ್ತೀಚಿಗೆ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಹುಲಕಲ್ ನಟರಾಜ್ ಹಾಗೂ   ದೇವಿಕಾ ನಟರಾಜ್ ದಂಪತಿಗಳಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.  

 ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರೋಣ ತಾಲ್ಲೂಕು ಅಧ್ಯಕ್ಷರಾದ ವಿರೇಶ ನೇಗಲಿ, ಲಕ್ಷ್ಮೇಶ್ವರ ತಾಲ್ಲೂಕು ಅಧ್ಯಕ್ಷರಾದ ಕರಿಯಪ್ಪ ಶಿರಹಟ್ಟಿ, ಮುಂಡರಗಿ ತಾಲ್ಲೂಕಿನ ನೂತನ ಅಧ್ಯಕ್ಷ ಗಂಗಾಧರ ಬಳಿಗಾರ, ರಮೇಶಗೌಡ್ರ ಪಾಟೀಲ, ನರಗುಂದ ತಾಲ್ಲೂಕಾಧ್ಯಕ್ಷ ವಿನಾಯಕ ಶಾಲದಾರ ಗಜೇಂದ್ರಗಡದ ವೀರಣ್ಣ ಮಳಗಿ, ವಿರೇಶ ಪವಾಡಿಶೆಟ್ಟರ, ಸಾಗರ ಹಾಗೂ ಶಾಲೆಯ ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಮುಖ್ಯೋಪಾದ್ಯಾಯನಿ ಎಚ್‌.ಎಂ.ನದಾಫ್, ಸಹ ಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ಸುಧಾ ತಿರಕಣ್ಣವರ, ರೇಖಾ ಅಂಗಡಿ, ಮಂಜುಳಾ ದಾಸರ, ರೂಪಾ ಅಸೂಟಿ   ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.