ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆ ಕಾರ್ಯಕ್ರಮ
ರಾಣೇಬೆನ್ನೂರು 13: ಎಲ್ಲಾ ಧಾನಗಳಿಗಿಂತಲೂ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾದ ದಾನ ಅನ್ನದಾನವಾಗಿದೆ, ಅದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ಕಾಣುವುದರ ಜೊತೆಗೆ ಸಮಾಜವು ಸಮೃದ್ಧಿಯಾಗಿ ಅಭಿವೃದ್ಧಿ ಕಾಣಲಿದೆ ಎಂದು ತುಮ್ಮಿನಕಟ್ಟಿ ಪಟ್ಟಣದ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಮಹಾ ಸಂಸ್ಥಾನ ಪೀಠದ ಜಗದ್ಗುರು ಪ್ರಭುಲಿಂಗ ಮಹಾಸ್ವಾಮಿಗಳವರು ನುಡಿದರು.
ಅವರು ಸೋಮವಾರ ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ, ಆಯೋಜಿಸಲಾಗಿದ್ದ ಮಾಸಿಕ ಹುಣ್ಣಿಮೆ ಧರ್ಮ ಜಾಗೃತಿ, ರುದ್ರಾಭಿಷೇಕ, ವಿವಿಧ ಧಾರ್ಮಿಕ ಮತ್ತು ಅನ್ನದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಕಾಯಕಯೋಗಿಗಳು ಹೆಚ್ಚಾಗಿ ಇದ್ದಾರೆ. ಅವರೆಲ್ಲರೂ ಸೇರಿ ತಮ್ಮ ನಿತ್ಯದ ಬದುಕಿನ ಜೊತೆಗೆ ಧರ್ಮ ಜಾಗೃತಿಯ ಸೇವಾ ಕಾರ್ಯಗಳ ಮೂಲಕ ಬದುಕು ಸಂತೃಪ್ತಿಯನ್ನು ಕಾಣುವ ಕಾರ್ಯಕ್ಕೆ ಮುಂದಾಗಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ನೇಕಾರ ಸಮುದಾಯದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅವರು, ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ, ಸಮುದಾಯದ ಪ್ರತಿಯೊಬ್ಬ ನಾಗರಿಕರು ಒಂದಾಗಿ ಒಗ್ಗಟ್ಟಾಗಲು ಮುಂದಾಗಬೇಕು. ಇಂದಿನ ದಿನಮಾನಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಾನಮಾನಗಳನ್ನು ಪಡೆಯಬೇಕಾದರೆ ಸಂಘಟನೆ ಬಹಳ ಮುಖ್ಯ ಈ ನಿಟ್ಟಿನಲ್ಲಿ ಸಮಾಜ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು. ಸಾಮೂಹಿಕವಾಗಿ, ಸಾರ್ವಜನಿಕವಾಗಿ ಮಹಾ ದಾಸೋಹ ಪ್ರಸಾದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜ ಅಗಡಿ, ಬಸವರಾಜ ಐರಣಿ, ಮಾರುತಿ ಗರಡಿಮನಿ, ನಾಗರಾಜ ಚಳಗೇರಿ, ಪರಸಪ್ಪ ಬಳ್ಳಾರಿ, ಮಂಜುನಾಥ್ ಮಸಲವಾಡ, ಅರ್ಚಕರಾದ ವೀರಯ್ಯ ಮತ್ತು ಶಂಭುನಾಥ ಸ್ವಾಮಿಗಳವರು ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.