ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿಗಾಗಿ ರಾಜ್ಯವ್ಯಾಪಿ ಹೋರಾಟದ ಮನವಿ
ಕೊಪ್ಪಳ 26: ಕೇಂದ್ರ ಸರ್ಕಾರ ನಿರ್ಲಜ್ಜವಾಗಿ ಕಾರ್ೋರೇಟ್ ಕಂಪನಿಗಳ ಜೊತೆ ಕೈ ಮಿಲಾಯಿಸಿ ದುಡಿಯುವವರ ಹಕ್ಕೆನ್ನೆಲ್ಲಾ ಕಸಿದುಕೊಳ್ಳಲು ಹೊರಟಿದೆ. ನಮ್ಮ ಭೂಮಿ, ಬೆಳೆ, ಶ್ರಮ ಮತ್ತು ಬದುಕನ್ನು ಬಂಡವಾಳಿಗರ ಪಾದಗಳಿಗೆ ಒಪ್ಪಿಸಲು ಹೊರಟಿದೆ. ರಾಜ್ಯ ಸರ್ಕಾರ ನಾವು ಈ ನೀತಿಗಳನ್ನೆಲ್ಲಾ ವಿರೋಧಿಸುತ್ತೇವೆ ಎಂದು ಬಾಯಿ ಮಾತಿಗೆ ಹೇಳುತ್ತಿದೆ. ತನ್ನ ಪ್ರಣಾಳಿಕೆಯಲ್ಲೂ ಬರೆದುಕೊಂಡಿದೆ. ಆದರೆ ಬಿಜೆಪಿ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನೇ ತಾನೂ ಮುಂದುವರೆಸಿಕೊಂಡು ಹೋಗುತ್ತಿದೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಬದುಕಿನ ಮೇಲೆ ಕಾರ್ೋರೇಟ್ ಶಕ್ತಿಗಳ ಅಕ್ರಮಣವನ್ನು ತಡೆಯದಿದ್ದರೆ, ಈ ಸಂಕಷ್ಟಗಳಿಂದ ನಮಗೆ ವಿಮೋಚನೆ ಇಲ್ಲ, ಮಾತ್ರವಲ್ಲ ನಮ್ಮ ಭವಿಷ್ಯದ ತಲೆಮಾರು ಸಂಪೂರ್ಣವಾಗಿ ಅನಾಥಗೊಳ್ಳುವುದು, ಹೊಸ ರೂಪದ ಗುಲಾಮಗಿರಿಗೆ ಒಳಗಾಗುವುದು ಖಚಿತ. ಇದನ್ನು ನಾವು ತಡೆಯಲೇಬೇಕು. ಈ ಉದ್ದೇಶದಿಂಧ ಇಡೀ ದೇಶದ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟವಾದ ಜೆಸಿಟಿಯು ಮತ್ತು ಇತರೆ ದುಡಿಯುವ ಜನರ ಸಂಘಟನೆಗಳು ದೇಶದ 500 ಜಿಲ್ಲೆಗಳಲ್ಲಿ ಎಚ್ಚರಿಕಾ ರಾ್ಯಲಿ ನಡೆಸಲು ಕರೆ ನೀಡಿವೆ. ಈ ಕರೆಗೆ ಎಲ್ಲಾ ಜನಪರ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿವೆ. ನವೆಂಬರ್ 15-25 ಎಲ್ಲಾ ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಆಂದೋಲನ ನಡೆಯಲಿದೆ. ನವೆಂಬರ್ 26 ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಎಚ್ಚರಿಕಾ ರಾ್ಯಲಿಗಳ ಮೂಲಕ ಸರ್ಕಾರಗಳಿಗೆ ಮೂರು ತಿಂಗಳ ಗಡವು. ಅದರೊಳಗೆ ಅವು ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದಿದ್ದರೆ ಕೇಂದ್ರೀಕೃತ ತೀವ್ರ ಸ್ವರೂಪದ ಹೋರಾಟವು ನಡೆಯಲಿದೆ.
ಬನ್ನಿ, ದುಡಿಯುವ ಜನರುಗಳಾದ ನಾವು ಸರ್ಕಾರಗಳ ಮುಂದೆ ಇಡುತ್ತಾ ಬಂದಿರುವ ಹಕ್ಕೊತ್ತಾಯಗಳೇನು? ಕೇಂದ್ರ ಸರ್ಕಾರ ಮಾಡಿರುವ ಮಹಾದ್ರೋಹ ಏನು? ರಾಜ್ಯ ಸರ್ಕಾರ ಕೊಟ್ಟ ಮಾತಿನ್ನು ಉಲ್ಲಂಘಿಸಿರುವು ಎಲ್ಲಿ? ಎಂಬುದನ್ನು ನೋಡೋಣ.
ದುಡಿಯುವ ಜನರು ನಾವು ಆಗ್ರಹಿಸುತ್ತಾ ಬಂದಿರುವುದೇನು?
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ರೈತರ ಬೆಳೆಗೆ ತಕ್ಕ ಬೆಲೆ ಸಿಗದೇ ಹೋಗಿರುವುದರಿಂದಲೇ ರೈತರು ಸಾಲಗಾರರಾಗಿದ್ದಾರೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಮಾಡಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೈತರು ಮಾನಸಿಕ ಖಿನ್ನತೆಗೆ ಗುರಿಯಾಗಿದ್ದಾರೆ. ಹಾಗಾಗಿ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಘೋಷಿಸಬೇಕು. ವಿದ್ಯುತ್ ಶಕ್ತಿಯ ಖಾಸಗೀಕರಣಕ್ಕೆ ಮುಂದಾಗಬಾರದು. ಬಗರ್ ಹುಕುಂ ರೈತರ ಹಾಗೂ ಸರ್ಕಾರಿ ಜಾಗಗಳಲ್ಲಿ ಮನೆಕೊಟ್ಟಿಕೊಂಡಿರುವ ಲಕ್ಷಾಂತರ ಬಡವರ ಜಮೀನು ಮತ್ತು ಜಾಗಗಳನ್ನು ಸತಾಯಿಸದೆ ಸಕ್ರಮಗೊಳಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಹಾಗೂ ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಬಲವಂತದ ಭೂಸ್ವಾಧೀನ ಹಾಗೂ ‘ಒತ್ತುವರಿ' ತೆರವು ಮಾಡುವುದನ್ನು ಕೈಬಿಡಬೇಕು. ರೈತರ ಕೊರಳಿಗೆ ಉರುಳಾಗಿರುವ ಜಾನುವಾರು ಕಾಯ್ದೆಯನ್ನು ರದ್ದು ಮಾಡಬೇಕು. ಕೃಷಿಯಲ್ಲಿ ಕುಲಾಂತರ ತಳಿಯ ಬಳಕೆಯನ್ನು ನಿಶೇಧಿಸಬೇಕು.
ಕಾರ್ಮಿಕ ವರ್ಗಕ್ಕೆ ಇದುವರೆಗೆ ಸಿಕ್ಕಿದ್ದ ಎಲ್ಲಾ ಹಕ್ಕುಗಳನ್ನೂ ಕಸಿದುಕೊಳ್ಳುತ್ತಿರುವ ನಾಲ್ಕು ಕೋಡ್ ಗಳನ್ನು ರದ್ದುಗೊಳಿಸಬೇಕು. ಅಸಂಘಟಿತ, ಸ್ಕೀಂ, ಗಿಗ್, ದಿನಗೂಲಿ ಕಾರ್ಮಿಕರ ಉದ್ಯೋಗ ಭದ್ರತೆಗೆ ಮತ್ತು ಬದುಕಿನ ರಕ್ಷಣೆಗೆ ಸೂಕ್ತ ನೀತಿ ರೂಪಿಸಬೇಕು. ಕಟ್ಟಡ ಕಾರ್ಮಿಕರಂತೆಯೇ ಫಲಾನುಭವಿ ವರ್ಗಕ್ಕೆ ಸೆಸ್ ಹಾಕುವ ಮೂಲಕ ಆಯಾ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಬೇಕು. ಶ್ರಮಿಕ ಜನರು ಘನತೆಯಿಂದ ಬಾಳುವಂತಹ ವೇತನವನ್ನು ಎಲ್ಲರಿಗೂ ನಿಗದಿಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ, ಸರ್ಕಾರಿ ಸ್ಕೀಂಗಳ ಪ್ರತ್ಯೆಕ್ಷ ಅಥವಾ ಪರೋಕ್ಷ ಖಾಸಗೀಕರಣವನ್ನು ನಿಲ್ಲಿಸಬೇಕು. ಎಲ್ಲರಿಗೂ ಕನಿಷ್ಟ 27 ಸಾವಿರ ಮಾಸಿಕ ವೇತನ ನಿಗದಿಯಾಗಬೇಕು. ದುಡಿಮೆಯ ಅವಧಿಯನ್ನು 8 ರಿಂದ 12 ಕ್ಕೆ ಏರಿಸಿರುವ ಕಾರ್ಮಿಕ ವಿರೋಧಿ ನೀತಿಯನ್ನು ಈ ಕೂಡಲೇ ಹಿಂಪಡೆಯಬೇಕು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳಾ ಸಮುದಾಯಗಳಿಗೆ ಅವಕಾಶಗಳಲ್ಲಿ ಹಾಗೂ ಆದಿಕಾರದಲ್ಲಿ ನ್ಯಾಯುಯುತ ಪಾಲು ದಕ್ಕಬೇಕು. ಮೀಸಲಾತಿಯ ಸುತ್ತ ಮೂಡಿರುವ ವಿವಾದಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಬಗೆಹರಿಸಲು ಸರ್ಕಾರ ಮುಂದಾಗಬೇಕು. ದಮನಿತ ಸಮುದಾಯಗಳಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು. ದಮನಿತ ಸಮುದಾಯಗಳಿಗೆ ಸೇರಿದ ಪಿಟಿಸಿಎಲ್ ವ್ಯಾಪ್ತಿಗೆ ಸೇರಿದ ಭೂಮಿಗಳನ್ನು ರಕ್ಷಿಸಲು ಮುಂದಾಗಬೇಕು. ಜಾತಿ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ತಡೆಗೆ ಸರ್ಕಾರ ಪರಿಣಾಮಕಾರಿ ಕ್ರಮಗಳಿಗೆ ಮುಂದಾಗಬೇಕು. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಶಕ್ತಿಗಳ ಬಗ್ಗೆ ಮೃದು ಧೋರಣೆ ತಾಳದೆ ಕಠಿಣ ಕ್ರಮಗಳಿಗೆ ಮುಂದಾಗಬೇಕು. ಮಹಿಳೆ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗೆ ಹಾಗೂ ಸಬಲೀಕರಣಕ್ಕೆ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಟಾನಕ್ಕೆ ತರಬೇಕು.
ಯುವಜನರ ಭವಿಷ್ಯಕ್ಕೆ ಭದ್ರತೆ ದೊರಕಬೇಕು. ಶಿಕ್ಷಣದ ವ್ಯಾಪಾರವನ್ನು ನಿಲ್ಲಿಸಬೇಕು. ಸರ್ಕಾರಿ ಶಿಕ್ಷಣವನ್ನು ಎಲ್ಲಾ ಹಂತಗಳಲ್ಲೂ ಬಲಪಡಿಸಬೇಕು. ಖಾಸಗೀ ಶಿಕ್ಷಣ ಧಂದೆಗಳ ಮೇಲೆ ನಿಯಂತ್ರಣ ಹೇರಬೇಕು. ಎನ್ ಇ ಪಿ ರದ್ದಾಗಬೇಕು. ಭದ್ರತೆಯ ಉದ್ಯೋಗ ಮತ್ತು ಘನತೆಯ ವೇತನ ಕಾನೂನಾತ್ಮಕ ಹಕ್ಕಾಗಬೇಕು. ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ರಚನಾತ್ಮಕ ಯೋಜನೆಗಳನ್ನು ರೂಪಿಸಬೇಕು. ಯುವಜನರು ವಿವಿಧ ಕ್ಷೇತ್ರಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ಸ್ಟಾರ್ಟಪ್ ಯೋಜನೆಗಳಿಗೆ ತ್ವರಿತ ಬೆಂಬಲವನ್ನು ಒದಗಿಸಬೇಕು.
ಕೇಂದ್ರ ಸರ್ಕಾರ ಜನರಿಗೆ ಮಾಡಿರುವ ಮಹಾದ್ರೋಹ ಏನು?
ಕೇಂದ್ರ ಸರ್ಕಾರ ಈ ದೇಶದ ಅತಿಶ್ರೀಮಂತ ಉದ್ದಿಮೆಪತಿಗಳಾದ ಅದಾನಿ, ಅಂಬಾನಿಗಳ ಜೊತೆಗೂಡಿ ರೈತರ ಭೂಮಿ ಮತ್ತು ಬೆಳೆಯ ಮೇಲೆ ನಿಯಂತ್ರಣ ಸಾಧಿಸಲು ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಂದಿತು. ಅದರ ವಿರುದ್ಧ ದೇಶದಾದ್ಯಂತ ರೈತರು ವೀರೋಚಿತ ಹೋರಾಟ ನಡೆಸಿದರು. ದೆಹಲಿ ಗಡಿಗಳಲ್ಲಿ ಚಾರಿತ್ರಿಕ ಒಂದು ವರ್ಷಕ್ಕೂ ಮೀರಿದ ದಿಟ್ಟ ಹೋರಾಟ ನಡೆಯಿತು. 752 ಜನ ರೈತರು ಹುತಾತ್ಮರಾದರು. ಆದರೂ ರೈತರು ಪಟ್ಟುಬಿಡದಿದ್ದಾಗ ಮೂರು ಕಾಯ್ದೆಗಳನ್ನು ವಾಪಾಸ್ ತೆಗೆದುಕೊಂಡು ಮತ್ತು ರೈತರ ಇತರೆ ಮುಖ್ಯ ಬೇಡಿಕೆಗಳಾದ ಕನಿಷ್ಟ ಬೆಂಬಲ ಬೆಲೆ ಕಾಯ್ದೆಯನ್ನಾಗಿಸುವ ಖಾತ್ರಿ ನೀತಿಯನ್ನು ಜಾರಿ ಮಾಡುವ, ಸಾಲಮನ್ನಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ, ಇನ್ನಿತರ ಹಕ್ಕೊತ್ತಾಯಗಳಿಗೆ ಲಿಖಿತ ಆಶ್ವಾಸನೆಕೊಟ್ಟಿತು. ಈ ಲಿಖಿತ ವಿಶ್ವಾಸದ ಮೇಲೆ ರೈತರು ಹೋರಾಟವನ್ನು ಹಿಂತೆಗೆದುಕೊಂಡರು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಗೆ ದ್ರೋಹ ಬಗೆದಿದೆ. ಅದರಲ್ಲಿ ಒಂದೇ ಒಂದು ಹಕ್ಕೊತ್ತಾಯವನ್ನೂ ಇದುವರೆಗೆ ಈಡೇರಿಸಿಲ್ಲ. ಅದೇ ರೀತಿಯ ಕಾರ್ಮಿಕರ ಹಕ್ಕುಗಳನ್ನೆಲ್ಲಾ ಕಸಿದು ನಾಲ್ಕು ಕೋಡ್ ಎಂಬ ಚಟ್ಟಾವನ್ನು ತಯಾರು ಮಾಡಿದೆ. ಅದರಲ್ಲಿ ಅಸಂಘಟಿತ ಹಾಗೂ ಅನೌಪಚಾರಿಕ ಕಾರ್ಮಿಕರೆಲ್ಲರಿಗೂ ಸಾಮಾಜಿಕ ಭದ್ರತೆ ಒದಗಿಸುವ ಮಾತನಾಡಿದ್ದರೂ ಅದು ಅನ್ನ ಇಲ್ಲದ ಪಾತ್ರೆಯಾಗಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಲು ಅನುಮತಿ ನೀಡಿದೆ. ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಯವರಿಗೆ ಬಿಟ್ಟುಕೊಡುತ್ತಿದೆ. ಖಾಸಗೀಕರಣದಿಂದಾಗಿ ಮೀಸಲಾತಿ ಅರ್ಥಹೀನವಾಗುತ್ತಿದೆ. ಜನರ ಓಟನ್ನು ಬಾಚಲು ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿದೆ. ಜಾತಿಗಳನ್ನೂ ಪರಸ್ಪರ ಎತ್ತಿಕಟ್ಟಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ. ಮಹಿಳಾ ಪೀಡಕರನ್ನು ರಕ್ಷಿಸಿ ಪೋಷಿಸುತ್ತಿದೆ. ತೆರಿಗೆ ಮತ್ತು ಸೆಸ್ ಗಳನ್ನು ಹೇರಿ, ಎಲ್ಲಾ ವಸ್ತುಗಳ ಬೆಲೆ ಏರಿಸಿ, ಜನಸಾಮಾನ್ಯರನ್ನು ಸುಲಿಯುತ್ತಿದೆ. ಸಾರಾಂಶದಲ್ಲಿ ಜನದ್ರೋಹಿಯಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪೆದ್ದೆಲ್ಲಿ?
ಜನರು ಬಹುದಶಕಗಳಿಂದ ಆಗ್ರಹಿಸುತ್ತಾ ಬಂದಿರುವ ಮೇಲ್ಕಂಡ ಹಕ್ಕೊತ್ತಾಯಗಳ ಪೈಕಿ ಶೇ. 80 ಭಾಗದ ವಿಚಾರಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಕ್ಕೆ ಬಂದರೆ ಅವನ್ನೆಲ್ಲಾ ಜಾರಿ ಮಾಡುವುದಾಗಿ ಮಾತು ಕೊಟ್ಟಿತ್ತು. ಕೊಟ್ಟ ಮಾತಿನಂತೆ ಅದರಲ್ಲಿ ಕನಿಷ್ಟ 20 ರಷ್ಟನ್ನಾದರೂ ಜಾರಿ ಮಾಡಿದೆಯಾ? ಇಲ್ಲ. ಇದಕ್ಕೂ ಮುನ್ನ ಅಧಿಕಾರದಲ್ಲಿದ್ದ ಬಿಜೆಪಿ ತಂದಿದ್ದ ಮನೆಹಾಳು ತೀರ್ಮಾನಗಳನ್ನೆಲ್ಲಾ ಕಾಂಗ್ರೆಸ್ ಸರ್ಕಾರವೂ ಚಾಚುತಪ್ಪದೆ ಪಾಲಿಸುತ್ತಿದೆ. ಹಾಗಾದರೆ ಬಿಜೆಪಿಗೂ ನಿಮಗೂ ಇರುವ ವೆತ್ಯಾಸವಾದರೂ ಏನು? ಎಂದು ನಾವು ಕೇಳುತ್ತಿದ್ದೇವೆ.