ಅಂಬೇಡ್ಕರ್ ಕುರಿತು ಹೇಳಿಕೆ ನೀಡಿದ ಅಮಿತ್ ಶಾ ವಿರುಧ್ದ ಕ್ರಮಕ್ಕೆ ಆಗ್ರಹಿಸಿ ಸ್ಲಂ ಸಮಿತಿಯಿಂದ ಪ್ರತಿಭಟನೆ
ಗದಗ 26: ಕೇಂದ್ರ ಸಂಸತ್ತಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದು, ಕೊಡಲೇ ಸಂವಿಧಾನ ವಿರೋಧಿ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಗಡಿಪಾರ ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಗಾಂಧಿ ಸರ್ಕಲನಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಸ ಸಮಿತಿ ಜಿಲ್ಲಾ ಸಂಚಾಲಕರಾದ ವೆಂಕಟೇಶಯ್ಯ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಅಂಬೇಡ್ಕರ್ ಅವರು ಹಲವು ಧರ್ಮಗಳು, ಭಾಷೆಗಳು, ಸಂಸ್ಕ್ರತಿಗಳು, ಜಾತಿಗಳು ಹಾಗೂ ಸಂಪ್ರದಾಯಗಳನ್ನು ಒಳಗೊಂಡಿರುವ ಭಾರತದಂತಹ ದೇಶವನ್ನು ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು, ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಎಲ್ಲಾ ಬಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟವರು, ಆದರೆ ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಸಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದಕೊಂಡು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ವ್ಯಕ್ತಿ ಕೇಂದ್ರದಲ್ಲಿ ಸಚಿವರಾಗಿ ಇರಲು ಯೋಗ್ಯವಲ್ಲ, ಕೊಡಲೇ ರಾಷ್ಟ್ರಪತಿಗಳು ಇಂತಹ ಸಂವಿಧಾನ ವಿರೋಧಿ ಕೋಮುವಾದಿ ಅಮಿತ್ ಶಾ ರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ ಗಡಿಪಾರ ಮಾಡಬೇಕೆಂದು ಆಗ್ರಹಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಅಸಮಾನತೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು, ಈ ದೇಶದಲ್ಲಿ ಇದ್ದ ಶ್ರೇಣೀಕೃತ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನ ಹಕ್ಕುಗಳನ್ನು ನೀಡಿದವರು, ನಮ್ಮ ದೇಶದ ಮಹಿಳೆಯರಿಗೆ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದವರು, ಅಂತಹ ಮಹಾನ ನಾಯಕನ ಬಗ್ಗೆ ಮಾತನಾಡುವ ಮೂಲಕ ಸಂವಿಧಾನ ವಿರೋಧಿ ಅಮಿತ್ ಶಾ ಈ ದೇಶಕ್ಕೆ ಮತ್ತು ನಮ್ಮ ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ, ಕೊಡಲೇ ಸಂವಿಧಾನ ವಿರೋಧಿ ಮತ್ತು ಜಾತಿವಾದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕು, ಇಂತಹ ಹೇಳಿಕೆಯಿಂದ ದೇಶದ ಕೊಟ್ಯಾಂತರ ಜನರಿಗೆ ನೋವುಂಟಾಗಿದ್ದು, ದೇಶದ ಜನರಲ್ಲಿ ಕ್ಷೇಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಪ್ರಗತಿಪರ ಚಿಂತಕರಾದ ಬಸವರಾಜ ಪೂಜಾರ, ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ ಇಸ್ಮಾಯಿಲನವರ, ಮುನ್ನಾ ಅಗಡಿ, ಖಾಜಾಸಾಬ ಬಳ್ಳಾರಿ, ಶಂಕ್ರ್ಪ ಪೂಜಾರ, ಜಂದಿಸಾಬ ಬಳ್ಳಾರಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.