ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ
ಗದಗ 31: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ 15 ದಿನಗಳಿಂದ ತುಂಗಾಭದ್ರ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಮರ್ಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ನೇತೃತ್ವದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಅವಳಿ ನಗರದಲ್ಲಿ ಈಗಾಗಲೇ ಹಲವಾರು ವಾರ್ಡುಗಳಲ್ಲಿ ಕೊಳವೆಬಾವಿ ಪೈಪ್ ಮತ್ತು 24/7 ನೀರಿನ ಪೈಪಲೈನ್ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸಲು ಹಲವಾರು ಬಾರಿ ಪೌರಾಯುಕ್ತರಿಗೆ ಮತ್ತು ಸಹಾಯಕ ಅಭಿಯಂತರರ ಗಮನಕ್ಕೆ ತಂದಿದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಹದಗೆಟ್ಟಿದ್ದು, ಕುಡಿಯುವ ನೀರಿನ ತೊಂದರೆ ಅದಲ್ಲಿ ತಕ್ಷಣ ಸಂಬಂಧಿಸಿದ ವಾರ್ಡುಗಳಿಗೆ ನೀರು ಪೂರೈಸಲು 5 ಟ್ಯಾಂಕರ್ಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ನಗರದ 35 ವಾರ್ಡುಗಳಲ್ಲಿ ಬೊರವೆಲ್ ಹಾಗೂ ಪೈಪಲೈನ್ನ್ನು ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಪ್ರತಿ ಒಂದು ವಾರ್ಡಿಗೆ ತಲಾ 5 ಲಕ್ಷ ರೂ. ಟೆಂಡರ್ ಕರೆಯಲಾಗಿದ್ದು, ಈವರೆಗೂ ಟೆಂಡರ್ ಓಪನ್ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು. ತಕ್ಷಣ ಟೆಂಡರ ಓಪನ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು 35 ವಾರ್ಡುಗಳಲ್ಲಿ ಬೊರವೆಲ್ ಹಾಗೂ ಪೈಪಲೈನ್ ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಪ್ರತಿ ಒಂದು ವಾರ್ಡಿಗೆ ನಿಗದಿಯಾಗಿರುವ 5 ಲಕ್ಷ ರೂ. ಮೊತ್ತದ ಟೆಂಡರ್ನ್ನು ಕೂಡಲೇ ಓಪನ್ ಮಾಡುವುದರ ಜೊತೆಗೆ ಕಾಲುವೆ ಮೂಲಕ ಡಂಬಳ ಕಿನಾಲ್ಗೆ ನೀರು ಹರಿಸಿ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಜರುಗಿಸಲು ಪೌರಾಯುಕ್ತರಿಗೆ ಸೂಚನೆ ನೀಡಿದರು.
ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ವಿರೋಧಿ ಪಕ್ಷದ ಉಪನಾಯಕ ಬರಕತ್ಅಲಿ ಮುಲ್ಲಾ, ಸದಸ್ಯರದ ಲಕ್ಷ್ಮೀ ಸಿದ್ದಮ್ಮನಹಳ್ಳಿ, ಶಕುಂತಲಾ ಅಕ್ಕಿ, ನಗರಸಭೆ ಮಾಜಿ ಸದಸ್ಯರಾದ ಅನಿಲ ಗರಗ, ಚಾಂದ್ ಕೊಟ್ಟೂರು, ಗದಗ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ವಸಂತ್ ಸಿದ್ದಮ್ಮನಹಳ್ಳಿ, ಮುಖಂಡರಾದ ಮುನ್ನಾ ರೇಶ್ಮಿ, ಲಕ್ಷ್ಮಣ ಭಜಂತ್ರಿ, ಸಮೀರ ಕೊಟ್ಟೂರ ಸೇರಿ ಹಲವರು ಇದ್ದರು.