ಕೊಪ್ಪಳ ಸುತ್ತಮುತ್ತ ಹೊಸ ಕಾರ್ಖಾನೆ ತಡೆಗಟ್ಟುವಂತೆ ಸಚಿವರಿಗೆ ಮನವಿ

Appeal to the Minister to prevent new factories around Koppal

ಕೊಪ್ಪಳ  18: ನಗರಕ್ಕೆ ಹೊಂದಿಕೊಂಡು ಮತ್ತು ಹತ್ತಿರದಲ್ಲಿ ಪ್ರಸ್ತುತ ಬಂದಿರುವ ಬಲ್ಡೋಟಾ ಕಾರ್ಖಾನೆ ಮತ್ತು ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಮತ್ತು ಪರಿಸರ ಹಾನಿ ಕುರಿತು ಸಚಿವ ಹೆಚ್‌. ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಮನವಿ ಪತ್ರ ಸಲ್ಲಿಸಿ, ಇಲ್ಲಿ ಒಂದೇ ಕಡೆಗೆ ಕಾರ್ಖಾನೆಗಳನ್ನು ಹಾಕುವ ಮೂಲಕ ನೈಸರ್ಗಿಕ ನಿಯಮವನ್ನು ಮೀರಿ ಸಮಸ್ಯೆ ಮಾಡಲಾಗುತ್ತಿದೆ. ಅದರಿಂದ ಪರಿಸರದ ನಾಶ, ವಾಯು ಶುದ್ಧತೆಯ ನಾಶ, ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ ಜೊತೆಗೆ ಇತರೆ ಸಮಸ್ಯೆಗಳು ಬರುತ್ತಿದ್ದು, ಆರೋಗ್ಯಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು ವಿಸ್ತರಣೆ ಅನುಮತಿ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು. ಕೊಪ್ಪಳ ಗವಿಮಠ ಕಿಷ್ಕಿಂದೆ, ಮಳೆಮಲ್ಲೇಶ್ವರ ಸೇರಿ ಅಏಕ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಿ, ಪ್ರವಾಸೋಧ್ಯಮ ಬೆಳೆಸಲಿ, ಅದು ಬಿಟ್ಟು ಇಲ್ಲಿನ ಜನರಿಗೆ ಉದ್ಯೋಗವನ್ನು ಕೊಡದೇ ಇಲ್ಲಿನ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಸ್ಥಳಿಯರ ಜೀವನ ಹಾಳು ಮಾಡುತ್ತಿದ್ದಾರೆ, ಉದ್ಯೋಗ ಬೇಕು ಆದರೆ ಅದಕ್ಕೂ ಮುಂಚೆ ಬದುಕಬೇಕಿದೆ ಎಂದು ಹೋರಾಟಗಾರರು ಮನವಿ ಸಲ್ಲಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕೆ.ಎಂ. ಸೈಯದ್ ಇದ್ದರು. 

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಮುದುಕಪ್ಪ ಹೊಸಮನಿ, ಎಸ್‌. ಎ. ಗಫಾರ್, ಮಖಬುಲ್ ರಾಯಚೂರ ಇತರರು ಇದ್ದರು. 

ಇಂದು ಸಭೆ : 19/06/2025 ಗುರುವಾರ ಸಾಯಂಕಾಲ 4-30ಕ್ಕೆ ನಗರದ ಪ್ರವಾಸಿ ಮಂದಿರ (ಐಬಿ) ದಲ್ಲಿ  ಜಂಟಿ ಕ್ರಿಯಾ ವೇದಿಕೆ ಪೂರ್ಣ ಪ್ರಮಾಣದ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಈ ಸಭೆಯಲ್ಲಿ ಬಹಳ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು, ಅತೀ ಶೀಘ್ರದಲ್ಲಿ ಮುಂದಿನ ಹೋರಾಟ ರೂಪಿಸುವ ಅಗತ್ಯವಿದೆ. ಅದಕ್ಕಾಗಿ ಭಾಗ್ಯನಗರ ಮತ್ತು ಕೊಪ್ಪಳ ನಗರದ ಪ್ರಮುಖರು ಈ ಸಭೆಗೆ ಬಂದು ತಮ್ಮ ಸಲಹೆ ಸೂಚನೆ ನೀಡುವಂತೆ ಜಂಟಿ ಕ್ರಿಯಾ ವೇದಿಕೆ ಪರವಾಗಿ ಮನವಿ ಮಾಡಿದ್ದಾರೆ.