ಒತ್ತಡ ನಿರ್ವಹಣೆ ಕಾರ್ಯಾಗಾರ ಹಾಗೂ ಆರೋಗ್ಯ ತಪಾಸಣಾ ಶಿಬಿರ

For RDPR Department Officers and Staff

ಆರ್‌.ಡಿ.ಪಿ.ಆರ್ ಇಲಾಖೆ ಅಧಿಕಾರಿ-ಸಿಬ್ಬಂದಿಗಳಿಗೆ  

ವಿಜಯಪುರ ಜೂ.18: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ-ನೌಕರರು ನಿರಂತರವಾಗಿ ಶ್ರಮಿಸಿ, ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸಲು ಕಾರ್ಯನಿರ್ವಹಿಸುತ್ತಿದ್ದು,  ಒತ್ತಡದ ಕಾರ್ಯನಿರ್ವಹಣೆ ಮಧ್ಯದಲ್ಲಿಯೇ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು.  

ಜಿಲ್ಲಾ ಪಂಚಾಯಿತಿ ವಿಜಯಪುರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿ, ನೌಕರರ ಮತ್ತು ಸಿಬ್ಬಂದಿಗಳಿಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ಒತ್ತಡ ನಿರ್ವಹಣೆ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ಕರ್ತವ್ಯದ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಅವುಗಳಿಗೆ ಯಾವುದೇ ಒತ್ತಡಕ್ಕೊಳಗಾಗದೇ, ಸಮಾಧಾನವಾಗಿ ನಿಭಾಯಿಸಬೇಕು. ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತುರ್ತಾಗಿ ಒದಗಿಸುವ ಒತ್ತಡಗಳಿರುತ್ತವೆ. ಅಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದ ನಿಭಾಯಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬರುವ ಸಮಸ್ಯೆಗಳನ್ನು ಎದುರಿಸಲು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.  

ಸದಾ ಒತ್ತಡದಲ್ಲಿಯ ಕಾರ್ಯನಿರ್ವಹಿಸುವ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರರ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷ ಕಾಳಜಿಯೊಂದಿಗೆ ಒತ್ತಡ ನಿರ್ವಹಣೆ ಕಾರ್ಯಾಗಾರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಆರೋಗ್ಯದ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಭಯ ಪಡದೇ ಮುಕ್ತವಾಗಿ ವೈದ್ಯರೊಂದಿಗೆ ಮಾತನಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಒಂದೆಡೆ ಕಛೇರಿ ಕೆಲಸ, ಇನ್ನೊಂದು ಕಡೆ ಮನೆ ಕೆಲಸ, ಮಕ್ಕಳು,  ಕುಟುಂಬದ ಹಿರಿಯರ ಬಗ್ಗೆ ಗಮನ ಹರಿಸುತ್ತಾ ನಮ್ಮ ಆರೋಗ್ಯದ ಕಡೆಗೆ ಗಮನಹಿರಿಸಿರುವುದಿಲ್ಲ. ಇವೆಲ್ಲವುದರ ಜೊತೆಗೆ ಕಛೇರಿ ಕೆಲಸ ನಿಭಾಯಿಸಬೇಕು. ಮಲ್ಟಿಟಾಸ್ಕ್‌ (ಒಣಟಣಣಛಿಞ) ಮಾಡಬೇಕು ಎಂದರೆ ಮನಸ್ಸು, ದೇಹ ಎರಡೂ ಸದೃಢವಾಗಿರಬೇಕು. ಆದ್ದರಿಂದ ಎಲ್ಲರೂ  ತಮ್ಮ ಆರೋಗ್ಯದ ಕಡೆ ಗಮನ ಹರಿಸುವಂತೆ ಅವರು ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಆಜೂರ, ಸಹಾಯಕ ಕಾರ್ಯದರ್ಶಿಗಳಾದ ಅನುಸೂಯಾ ಚಲವಾದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಽಽ ಸಂಪತ್ ಗುಣಾರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾಽಽ ಅರ್ಚನಾ ಕುಲಕರ್ಣಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾಽಽ  ಅಪ್ಪಾಸಾಹೇಬ ಇನಾಮದಾರ,  ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿ. ಜಿ. ಪಾರೆ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಮಟ್ಟದ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳುಉಪಸ್ಥಿತರಿದ್ದರು.