ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಸೂಚನೆ
ಕೊಪ್ಪಳ 18: ಜಿಲ್ಲಾ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೆಂಪೇಗೌಡ, ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಡಾ. ಫ.ಗು ಹಳಕಟ್ಟಿ ಜಯಂತಿ: ಜಿಲ್ಲಾ ಮಟ್ಟದಲ್ಲಿ ಡಾ. ಫ.ಗು ಹಳಕಟ್ಟಿ ಜಯಂತಿಯನ್ನು ಜುಲೈ 2 ರಂದು ಹಮ್ಮಿಕೊಳ್ಳಲಾಗುವುದು. ಅಂದು ಬೆಳಿಗ್ಗೆ 8.30ಕ್ಕೆ ಕುಷ್ಟಗಿ ರಸ್ತೆಯಲ್ಲಿರುವ ಡಾ. ಫ.ಗು ಹಳಕಟ್ಟಿ ವೃತ್ತದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಲಿದೆ. ನಂತರ 10.30 ಗಂಟೆಗೆ ನಗರದ ಸಾಹಿತ್ಯ ಭನವದಲ್ಲಿ ನಡೆಯಲಿರುವ ವೇದಿಕೆ ಸಮಾರಂಭದಲ್ಲಿ ಡಾ. ಫ.ಗು ಹಳಕಟ್ಟಿ ಭಾವಚಿತ್ರಕ್ಕೆ ಪೂಜೆ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಹಡಪದ ಅಪ್ಪಣ್ಣ ಜಯಂತಿ: ಸಮಾಜದ ಮುಖಂಡರ ಕೋರಿಕೆಯ ಮೇರೆಗೆ ಕೊಪ್ಪಳ ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನು ಜುಲೈ 10ರ ಬದಲಿಗೆ ಜುಲೈ 22ಕ್ಕೆ ಆಯೋಜಿಸಲಾಗುವುದು. ಅಂದು ಬೆಳಿಗ್ಗೆ 8.30ಕ್ಕೆ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೇರವಣಿಗೆಯು ನಗರದ ಗಡಿಯಾರ ಕಂಬದ ಹತ್ತಿರವಿರುವ ಅಕ್ಕಮಹಾದೇವಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಲಿದೆ. ಬಳಿಕ 10.30 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪೂಜೆ, ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಡಾ. ಫ.ಗು ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭಗಳ ದಿನದಂದು, ಸಾಹಿತ್ಯ ಭವನ, ಡಾ. ಫ.ಗು ಹಳಕಟ್ಟಿ ವೃತ್ತ ಮತ್ತು ರಸ್ತೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ. ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಈ ಜಯಂತಿಗಳ ದಿನದಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ಗ್ರಾಮ ಪಂಚಾಯತ್ ಮತ್ತು ಇತರೆ ಕಛೇರಿಗಳಲ್ಲಿ ಆಚರಿಸುವಂತಾಗಬೇಕು. ಜಿಲ್ಲಾ ಮಟ್ಟದ ಜಯಂತಿ ಆಚರಣೆ ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಂಪೇಗೌಡ ಜಯಂತಿಯನ್ನು ಜೂನ್ 27 ರಂದು ಸರಳವಾಗಿ ಆಚರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಗಳ ಯಶಸ್ವಿಗೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಬಸವ ಅನುಯಾಯಿಗಳಾದ ಗವಿಸಿದ್ದ ಕೊಪ್ಪಳ, ಈರಣ್ಣ ಕೊರಳಳ್ಳಿ, ಹನುಮಂತ ಕಲಮಂಗಿ, ಶೇಖರ ಇಂಗಳದಾಳ, ಶರಣಬಸವ ಪಾಟೀಲ್, ಗುಡದಪ್ಪ ಹಡಪದ, ವೀರಣ್ಣ ಸಂಕ್ಲಾಪುರ, ಈಶ್ವರ್ಪ ದಿನ್ನಿ, ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ಹನುಮಂತಪ್ಪ ಈಶ್ವರ್ಪ, ಮಂಜುನಾಥ ಹಡಪದ, ಶವುಕುಮಾರ ಕಾರಟಗಿ, ಮೌನೇಶ ಕೊಪ್ಪಳ, ದ್ಯಾಮಣ್ಣ ಮದಿನೂರ, ಈಶಪ್ಪ ಮುದ್ದಾಬಳ್ಳಿ, ವೀರುಪಾಕ್ಷಪ್ಪ ಮ್ಯಾದ್ನೇರಿ, ಬಸವರಾಜ್ ಇಟಗಿ, ಶರಣಪ್ಪ ಇಟಗಿ, ಗವಿಸಿದ್ದಪ್ಪ ಮಾದಿನೂರ, ಮುತ್ತಣ್ಣ ಬೆಣಕಲ್, ಬಸವರಾಜ್ ಉಣಿಸಿಹಾಳ್, ಅಂದಪ್ಪ, ವೀರುಪಾಕ್ಷ ದೊಡ್ಡಮನಿ, ಗವಿಸಿದ್ದಪ್ಪ ಕಾಟ್ರಳ್ಳಿ, ಶಂಕ್ರ್ಪ ಹಡಪದ, ಈರಣ್ಣ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.