ವಿಜಯಪುರ 02: ನಿಸರ್ಗವನ್ನು ಪ್ರೀತಿಸುವವರು ದೇವರಿಗೆ ಹತ್ತಿರವಿದ್ದಂತೆ ಎಂಬಂತೆ ಸಿದ್ದೇಶ್ವರಶ್ರೀಗಳು ನಿಸರ್ಗದಲ್ಲಿ ಲೀನರಾಗಿದ್ದಾರೆ ಎಂದು ಬಾಲ್ಕಿ ಬಸವಲಿಂಗ ದೇವರು ಹೇಳಿದರು.
ಇಂದು ಮಮದಾಪುರದಲ್ಲಿರುವ ಸಿದ್ದೇಶ್ವರಶ್ರೀಗಳ ಹೆಸರಿನಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸಸಿನೆಟ್ಟು ಮಾತನಾಡಿದ ಅವರು, ಭಗವಂತ ನಿಸರ್ಗ ಪ್ರೀಯನಾಗಿದ್ದಾನೆ. ನಿಸರ್ಗದಲ್ಲಿಯೇ ಭಗವಂತನನ್ನು ಕಾಣಬೇಕು, ಮನುಷ್ಯನಿಗೆ ಪರಿಸರದಲ್ಲಿಯೇ ಎಲ್ಲವೂ ದೊರಕುತ್ತದೆ, ಪರಿಸರವನ್ನು ಮಾನವ ಕಾಪಾಡಿದರೇ ಮಾನವನನ್ನು ಪರಿಸರ ಕಾಪಾಡುತ್ತದೆ. ಯುವಪೀಳಿಗೆ ಸುಂದರ ನಿಸರ್ಗ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಿದರೆ, ಬದುಕು ಸುಂದರವಾಗುತ್ತದೆ ಎಂದರು.
ಕಾಖಂಡಕಿ ಗುರುದೇವಾಶ್ರಮದ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಕೇವಲ 40 ವರ್ಷಗಳಲ್ಲಿ ಪರಿಸರದಲ್ಲಿ ತಾಪಮಾನ ಹೆಚ್ಚಾಗಿದೆ. ಸದ್ಯದ ತಾಪಮಾನ ಇನ್ನಷ್ಟು ಹೆಚ್ಚು ಆಗದಂತೆ ಪ್ರತಿಯೊಬ್ಬರು ಸಸಿನೆಟ್ಟರೆ ಪರಿಸರದಲ್ಲಿ ಸಮತೋಲನ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಅದಕ್ಕಾಗಿ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿಗಾಗಿ ವರ್ಷದಲ್ಲಿ ಒಂದೆರಡು ಬಾರಿ ನುರಿತ ತಜ್ಞರಿಂದ ಚಿಂತನಾ ಗೋಷ್ಠಿ ಏರಿ್ಡಸಬೇಕು. ಇದರಿಂದ ಎಲ್ಲರಿಗೂ ಹೊಸ ಹೊಸ ವಿಷಯಗಳು ತಿಳಿಯಲಿವೆ. ಸಮಸ್ಯೆಗಳಿಗೆ ಪರಿಹಾರವೂ ದೊರಕಲಿದೆ ಎಂದರು.
ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, 3 ವರ್ಷಗಳ ಹಿಂದೆ ಸಿದ್ದೇಶ್ವರಶ್ರೀಗಳ ಪ್ರೇರಣೆಯಿಂದ ಎಂ.ಬಿ.ಪಾಟೀಲ ಅವರು ಮಮದಾಪುರ ಕೆರೆ ಪಕ್ಕದಲ್ಲಿ ಅರಣ್ಯ ಪ್ರದೇಶ ನಿರ್ಮಿಸಲು ಸಂಕಲ್ಪ ಮಾಡಿದ್ದರು. ಆಗ ಅಲ್ಲಿ ಬಳ್ಳಾರಿಯ ಜಾಲಿ ಮುಳ್ಳುಕಂಟಿಯಿಂದ ತುಂಬಿತ್ತು. ಅದನ್ನು ಸ್ವಚ್ಚಮಾಡಿ, ಅರಣ್ಯ ನಿರ್ಮಾಣಮಾಡಿ ಶ್ರೀಗಳನ್ನು ಕರೆ ತಂದುತೋರಿಸಬೇಕು ಎನ್ನುವಷ್ಟರಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಬರಲು ಆಗಲಿಲ್ಲ. ಅವರು ಬಯಲಲ್ಲಿ ಬಯಲಾಗಿದ್ದಾರೆ. ರಾಜ್ಯಸರ್ಕಾರ ಮಮದಾಪುರ ಅರಣ್ಯಪ್ರದೇಶವನ್ನು “ಸಿದ್ದೇಶ್ವರಶ್ರೀಗಳ ಜೀವವೈವಿದ್ಯತೆಯ ಪಾರಂಪರಿಕ ಸಂರಕ್ಷಿತ ಅರಣ್ಯಪ್ರದೇಶ” ಎಂದು ಘೋಷಿಸಿರುವುದರಿಂದ ಶ್ರೀಗಳ ಅತ್ಯಂತ ಪ್ರೀತಿಯ ಪ್ರಕೃತಿಯನ್ನು ಮರುನಿರ್ಮಾಣ ಮಾಡುವುದರ ಜೊತೆಗೆ ಮುಂದಿನ ತಲೆಮಾರುಗಳು ಶ್ರೀಗಳು ಬಯಲಲ್ಲಿ ಬಯಲಾಗಿ ನೋಡಲು ಪೂರಕವಾಗುತ್ತದೆ ಎಂದರು.
ವಲಯ ಅರಣ್ಯಾಧಿಕಾರಿ ಸಂತೋಷ ಆಜುರು ಮಾತನಾಡಿ, ಬೇವು, ಆಲ, ಹೊಂಗೆ ಇತ್ಯಾದಿ ಸಸಿಗಳನ್ನು ಕೈಗಾರಿಕೆ ಸಚಿವರ ಮುಂದಾಳತ್ವದಲ್ಲಿ 300 ಹೆಕ್ಟರ್ ಪ್ರದೇಶದಲ್ಲಿ ಸಸಿನೆಡಲಾಗಿದೆ. ಇದೀಗ ಅವು ಸಮೃದ್ಧವಾಗಿ ಬೆಳೆದುನಿಂತಿವೆ ಎಂದರು.
ಬಸವ ಕಲ್ಯಾಣದ ಬಸವದೇವರು, ಬಾಲ್ಕಿಯ ಪ್ರಭುಲಿಂಗದೇವರು, ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವೃಕ್ಷೋಥಾನ ಗ್ರುಪ್ ಸದಸ್ಯರಾದ ಶಿವನಗೌಡ ಪಾಟೀಲ, ವೀರೇಂದ್ರ ಗುಚ್ಚಟ್ಟಿ, ಅಪ್ಪು ಭೈರಗೊಂಡ, ಡಾ. ಪ್ರವೀಣಚೌರ, ಸಮೀರ ಬಳಗಾರ, ಶಂಬುಲಿಂಗ ಕಪೂರಮಠ, ಸೋಮಶೇಖರಸ್ವಾಮಿ, ಸೋಮುಮಠ, ಸಂದೀಪಮಡಗೊಂಡ, ಮುತ್ತಣ್ಣ ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.