ಹ್ಯಾಟಿ ಗ್ರಾಮದಲ್ಲಿ ಎನ್‌.ಎಸ್‌.ವಿ ಕಾರ್ಯಕ್ರಮದ ಅರಿವು

“ನೋ ಸ್ಕಾಲ್‌ಫೆಲ್ ವ್ಯಾಸಕ್ಟಮಿ” ಕಾರ್ಯಕ್ರಮ

ಹ್ಯಾಟಿ ಗ್ರಾಮದಲ್ಲಿ ಎನ್‌.ಎಸ್‌.ವಿ ಕಾರ್ಯಕ್ರಮದ ಅರಿವು

ಕೊಪ್ಪಳ 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಗೊಂಡಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹ್ಯಾಟಿ ಗ್ರಾಮದಲ್ಲಿ “ನೋ ಸ್ಕಾಲ್‌ಫೆಲ್ ವ್ಯಾಸಕ್ಟಮಿ” ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಯಿತು.  

ಕೊಪ್ಪಳ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ ಅವರು ಮಾತನಾಡಿ, ಪ್ರತಿ ವರ್ಷ ನವಂಬರ್ 21 ರಿಂದ ಡಿಸೆಂಬರ್ 05 ರವರೆಗೆ ಎನ್‌.ಎಸ್‌.ವಿ ಪಾಕ್ಷಿಕ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಇದರ ಉದ್ದೇಶ ಪುರುಷರ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಪತ್ನಿಯರ ಆರೋಗ್ಯದಲ್ಲಿ ತೊಂದರೆ ಇರುವಾಗ ಅಂತಹ ಪತಿಯವರಿಗೆ ಈ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಬಹುದು. ಇದು ಸರಳ ಹಾಗೂ ಸುರಕ್ಷಿತ ವಿಧಾನವಾಗಿದೆ. ಗಾಯ ಇಲ್ಲ, ಹೊಲಿಗೆ ಇಲ್ಲ, ಚಿಕಿತ್ಸಾ ವಿಧಾನ ಕೇವಲ 05 ರಿಂದ 10 ನಿಮಿಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.ನಮ್ಮ ದೇಶದ ಬಡತನಕ್ಕೆ ಅಜ್ಞಾನ, ಅನಕ್ಷರತೆ ಹಾಗೂ ಮೂಡನಂಬಿಕೆ ಕಾರಣ. ಅಂತಹ ಮೂಡನಂಬಿಕೆಗಳಲ್ಲಿ ಜನಸಂಖ್ಯೆ ಹೆಚ್ಚಳವೂ ಕೂಡ ಕಾರಣವಾಗಿದೆ. ಪ್ರತಿ ಕುಟುಂಬಕ್ಕೆ ಎರಡು ಮಕ್ಕಳು ಇದ್ದರೆ ಸಾಕು. ಅಂತಹ ಕುಟುಂಬ ಸಂತೋಷದಿಂದ ಇರುತ್ತದೆ. ಎರಡು ಮಕ್ಕಳಿಗೆ ಸರಿಯಾಗಿ ಊಟ, ಬಟ್ಟೆ, ವಿದ್ಯೆ, ಆರೋಗ್ಯ ಸೌಲಭ್ಯ ಸರಿಯಾಗಿ ನೀಡಬಹುದು. ಪುರುಷರು ಸಹಭಾಗಿತ್ವವು ಕುಟುಂಬ ಕಲ್ಯಾಣ ಕಾರ್ಯಕ್ರಮದ ಒಂದು ಭಾಗವಾಗಿದ್ದು, ಪುರುಷರು ಸಹ ಮುಂದೆ ಬಂದು, ಇಂತಹ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಆರೋಗ್ಯವಂತವರಾಗಿರುಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಸೀನಾ ಬೇಗಂ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಸಜ್ಜನ್, ಆರೋಗ್ಯ ನೀರೀಕ್ಷಣಾಧಿಕಾರಿ ಈಶಪ್ಪ, ಆಶಾ ಕಾರ್ಯಕರ್ತೆಯರಾದ ಪ್ರಭಾವತಿ ಹಾಗೂ ರೇಣುಕಾ, ಅಂಗನವಾಡಿ ಕಾರ್ಯಕರ್ತೆಯರಾದ ಸಿದ್ದಮ್ಮ, ಶಶಿಕಲಾ ಮತ್ತು ಮಂಜುಳಾ ಸೇರಿದಂತೆ ಹ್ಯಾಟಿ ಗ್ರಾಮದ ತಾಯಂದಿರು, ಗರ್ಭಿಣಿಯರು ಭಾಗವಹಿಸಿದ್ದರು.