ಬಳ್ಳಾರಿ: ನಾಟಕಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಸಹಕಾರ ಅಗತ್ಯ: ಡಾ.ಸಿದ್ಧಲಿಂಗಯ್ಯ

ಲೋಕದರ್ಶನ ವರದಿ

ಬಳ್ಳಾರಿ 03: ಇಂದಿನ ದಿನಗಳಲ್ಲಿ ವ್ಯಕ್ತಿಗಳಲ್ಲಿ ಕಷ್ಟ ಸಹಿಷ್ಣುತೆ ಬಹಳ ಕಡಿಮೆ ಆಗುತ್ತಿದೆ. ಬದುಕಿನಲ್ಲಿ ಭರವಸೆ ಅತಿ ಕಡಿಮೆ ಆಗುತ್ತಿದ್ದು ಖಿನ್ನತೆ ಎಲ್ಲೆಡೆ ಆವರಿಸಿಕೊಳ್ಳುತ್ತಿದ್ದು, ನಾಟಕಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಸಹಕಾರಿ ಆಗುತ್ತವೆ ಎಂದು ನಾಡಿನ ಹೆಸರಾಂತ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಹೇಳಿದರು.

ಅವರು ನಾಡಿನ ಹಿರಿಯ ಪ್ರಸಾಧನ ಕಲಾವಿದ ರಾಮಕೃಷ್ಣ ಅವರಿಗೆ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಪೌರಾಣಿಕ ನಾಟಕಗಳ ಅಗತ್ಯ ತುಂಬ ಇದೆ. ಪುರಾಣ ಪಾತ್ರಗಳು ದಿನನಿತ್ಯದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲು ಸಹಕಾರಿ ಎಂದ ಅವರು ಹರಿಶ್ಚಂದ್ರ, ನಳಮಹಾರಾಜ, ಶ್ರೀರಾಮ, ಸೀತಾಮಾತೆ, ಚಂದ್ರಮತಿ ಪಾತ್ರಗಳನ್ನು ನಾಟಕಗಳಲ್ಲಿ ನೋಡಿದಾಗ ಅಂಥವರ ಕಷ್ಟಗಳೆದುರು ನಮ್ಮದೇನು ಎಂದು ಭಾವಿಸಿ ಸಮಾಧಾನಪಟ್ಟುಕೊಂಡು ಜೀವನ ಮುನ್ನಡೆಸಲು ಸಹಕಾರಿಯಾಗುವುದು. ನಾಟಕಗಳಿಂದಲೇ ಪ್ರಸಿದ್ಧರಾದ ಜೋಳದರಾಶಿ ದೊಡ್ಡನೌಡರು ಬದುಕಿನಲ್ಲಿ ಅದೆಷ್ಟು ಶಿಸ್ತು ಪಾಲಿಸಿದ್ದಾರೆಂದು ಅವರ ದಿನಚರಿ, ಗಾಯನಗಳ ರೆಕಾಡರ್್ಗಳು ಇಡೀ ಗ್ರಾಮ ಮಾದರಿಯಾಗಿದ್ದು ಗ್ರಾಮಾಭಿವೃದ್ಧಿ ಹರಿಕಾರರಾಗಿದ್ದವೆಂಬುದು ಸುಸ್ಪಷ್ಟವಾಗಿದೆ. ಅಂತಹ ಮಹಾನುಭಾವರ ಹೆಸರಿನಲ್ಲಿ ರಂಗತೋರಣ ರಾಜ್ಯ ಪುರಸ್ಕಾರ ನೀಡುತ್ತಿದ್ದು ಮೇಕಪ್ ಕಲಾವಿದರಾಗಿರುವ  ರಾಮಕೃಷ್ಣರನ್ನು ಗುರುತಿಸಿ ರಂಗದ ನೇಪಥ್ಯಕ್ಕೂ ಮಹತ್ವ ನೀಡಿದ್ದು ಸ್ವಾಗತಾರ್ಹವೆಂದರು.

ಕಾರ್ಯಕ್ರಮದ ಆರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ನೃತ್ಯಗುರು ಜಿಲಾನಿ ಬಾಷಾ ಅವರ ಲಕ್ಷ್ಮೀಕಲಾ ಕ್ಷೇತ್ರದ ಯುವ ಕಲಾವಿದರಿಂದ ಉತ್ತಮವಾದ ಕನ್ನಡ ಭಾವಗೀತೆ, ಜಾನಪದ ಗೀತೆಗಳ ನೃತ್ಯ ಸಂಭ್ರಮ ಸಭಿಕರ ಮನಸೊರೆಗೊಂಡಿತು. ನೃತ್ಯ ಗುರು ಜಿಲಾನಿಬಾಷಾ ಅವವರನ್ನು ಅತಿಥಿಗಳು ಅವರ ವಿದ್ಯಾರ್ಥಿಗಳೊಂದಿಗೆ ಸತ್ಕರಿಸಲಾಯಿತು.

ಆರಂಭದಲ್ಲಿ ಕು.ಉಮಾ ಮಹೇಶ್ವರಿ 'ನಿಮ್ಮ ಶರಣರಿಗೆ ಶರಣೆಂಬುದ' ಪ್ರಾರ್ಥನೆ ನಂತರ ಅತಿಥಿಗಳಿಂದ ದೊಡ್ಡನಗೌಡರ ಭಾವಚಿತ್ರದೊಂದಿಗೆ ರಾಘವ ಹಾಗೂ ರವೀಂದ್ರನಾಥ ಠಾಕೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ರಾಘವ ಕಲಾಮಂದಿರ ಆವರಣದ ರಾಘವ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ರಂಗತೋರಣದ ಅಧ್ಯಕ್ಷ ಭೀಮಸೇನ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ದೊಡ್ಡನಗೌಡ ಪ್ರತಿಷ್ಟಾನದ ಗೌರವಾಧ್ಯಕ್ಷರಾದ ಬಿ.ಸಿದ್ಧನಗೌಡರು ಅತಿಥಿಗಳನ್ನು ಶಾಲು ಸ್ಮರಣಿಕೆಗಳೊಂದಿಗೆ ಸನ್ಮಾನಿಸಿದರು. ಶಿವಾನಂದ ಹೊಂಬಳ ಅವರು ದೊಡ್ಡನಗೌಡರ ವಿಶಿಷ್ಟ ಗೀತೆ 'ಹೋಗಿ ಬರ್ತೆನ್ರಯ್ಯ ನಮ್ಮೂರಿಗೆ...' ಸುಶ್ರಾವ್ಯವಾಗಿ ಹಾಡಿದರು. ರಾಮೇಶ ಟ್ರಸ್ಟ್ನ ಅಧ್ಯಕ್ಷ ಕೆ.ಪೊಂಪನಗೌಡರು ವಂದಿಸಿದರು. ರಂಗತೋರಣ ಕಾರ್ಯದರ್ಶಿ  ಪ್ರಭುದೇವ ಕಪ್ಪಗಲ್ಲು, ಏಣಗಿ ಬಾಳಪ್ಪನವರು ದೊಡ್ಡನಗೌಡರ ಈ ಗೀತೆಯೊಂದಿಗೆ ನಾಟಕ ಮುಗಿಸುತ್ತಿದ್ದರು ಎಂದು ಪ್ರಸ್ತಾಪಿಸಿ ಕಾರ್ಯಕ್ರಮ ನಿರೂಪಿಸಿದರು.