ಚಿಕ್ಕೋಡಿ 02: ಎಷ್ಟೋ ಯೋನಿಗಳನ್ನು ತಿರುಗಿ ಮನುಷ್ಯ ಜೀವನಕ್ಕೆ ಬಂದಿರುವ ನಾವೆಲ್ಲರೂ ಜೀವನದ ಮೌಲ್ಯವನ್ನು ತಿಳಿದುಕೊಂಡು ಅಧ್ಯಾತ್ಮಿಕ ಸನ್ಮರ್ಗಾದಲ್ಲಿ ಬೆರೆತು ಮೋಕ್ಷದ ದಾರಿಯಲ್ಲಿ ನಡೆಯಬೇಕೆಂದು ಯರನಾಳದ ರಾಮಾರೂಢಮಠದ ರಾಮಾನಂದ ಸ್ವಾಮಿಗಳು ಸದ್ಭಕ್ತ ಬಂಧುಗಳಿಗೆ ಕರೆ ನೀಡಿದರು.
ಅವರು ಸದ್ಗುರು ಶರಣರ ಕಲಾಸೇವಾ ಮಂಡಳ, ಧುಳಗನವಾಡಿ ಖೋತ ಪರಿವಾರ ಇವರ ಸಹಯೋಗದಲ್ಲಿ ಇತ್ತೀಚೆಗೆ ಧುಳಗನವಾಡಿಯಲ್ಲಿ 105ನೇ ಸುವಿಚಾರ ಚಿಂತನಗೋಷ್ಠಿ ಹಾಗೂ ಭಜನಾ ಕಾರ್ಯಕ್ರಮದಲ್ಲಿ ನಿಜಗುಣಶಿವಯೋಗಿ ವಿರಚಿತ ಸುಮ್ಮನೆ ಕಾಲವನ್ನು ಕಳೆದು ಸಾವುದುಚಿತವೆ.. ವಿಷಯದ ಮೇಲೆ ಮಾತನಾಡಿ. ವ್ಯರ್ಥ ಕಾಲ ಕಳೆಯದೆ ಸತ್ಯದ ದಾರಿತೋರಿಸುವ ಶಾಸ್ತ್ರ ಪ್ರವಚನ ಆಲಿಸಿ ಅಂತರಂಗದಲ್ಲಿ ನಿತ್ಯ ನಾಮಸ್ಮರಣೆ ಮಾಡಬೇಕೆಂದರು. ಶಿರಗಾಂವದ ಶಂಕರಾನಂದ ಕುರಣಿ ಶ್ರೀಗಳು ಮಾತನಾಡಿ ಅತಿಯಾದ ಮೋಹದಿಂದ ದುಖ:ಪ್ರಾಪ್ತಿಯಾಗುತ್ತದೆ. ಕಳೆದುಹೋದ ಸಮಯ ಮತ್ತೆ ಸಿಗುವದಿಲ್ಲ ನಾನು ಮಾಡಿದೆನೆಂಬ ಅಹಂ ಭಾವಬಿಟ್ಟು ಪರಪುಣ್ಯ ಕಾರ್ಯಮಾಡಿ ಜೀವನಮುಕ್ತರಾಗಬೇಕೆಂದರು.
ಕೇರೂರದ ಕೇದಾರಲಿಂಗ ಶರಣರು ಕಾರ್ಯಕ್ರಮವನ್ನು ವೃಕ್ಷಕ್ಕೆ ನೀರೆರೆದು ಉದ್ಘಾಟಿಸಿದರು. ಮಾತೋಶ್ರೀ ಸಾವಿತ್ರಮ್ಮ ವಿಜಯನಗರೆ ಅಧ್ಯಕ್ಷತೆ ವಹಿಸಿದ್ದರು. ಧನಪಾಲ ಕಮತೆ, ಅಪ್ಪಾಸಾಹೇಬ ಖೋತ, ಭರತ ಕಲಾಚಂದ್ರ, ಉಪಸ್ಥಿತರಿದ್ದರು. ಕುಂಗಟೋಳಿಯ ಕಲಾವಿದರಾದ ಮಾರುತಿ ಕೆ. ಕಮತೆ ನವಲಿಹಾಳದ ರಾಜೇಂದ್ರ ಚೌಗಲೆ ಇವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿವಿಧ ಗ್ರಾಮದ ಭಜನಾ ಕಲಾವಿದರು ಭಜನಾ ಸೇವೆ ಸಲ್ಲಿಸಿದರು. ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು. ಓಂಕಾರ ಖೋತ ಸ್ವಾಗತಿಸಿದರು. ಸುಪ್ರೀಯಾ ಕಲಾಚಂದ್ರ ವಂದಿಸಿದರು.