ರೆಡ್ಡಿ ಸಮಾಜ ಸೌಹಾರ್ದತೆ, ಸ್ವಾಭಿಮಾನದ ಪ್ರತೀಕ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bhoomi Puja Program of Venkateswara Temple

ನಮ್ಮದು ಜನಪರ ನಿಲುವಿನ ಸರಕಾರ:  ಸಚಿವೆ ಲಕ್ಷ್ಮೀ ಹೆಬ್ಬಾಳಕರ್  

ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮ 

ಬೆಳಗಾವಿ 06:  ರಡ್ಡಿ ಸಮಾಜ ಸ್ವಾಭಿಮಾನದ ಪ್ರತೀಕ. ಸಮಾಜದಲ್ಲಿನ ಬೆಂಕಿ ಆರಿಸಿ, ಸೌಹಾರ್ದತೆ ಕಾಪಾಡುವ ಸಮಾಜ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟಿದ್ದಾರೆ. 

ಬೆಳಗಾವಿಯ ಕೆ ಕೆ ಕೊಪ್ಪದ ಬಳಿ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ನಿರ್ಮಾಣದ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಇಂತಹ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ. ನಾನೇ ಮುಂದೆ ನಿಂತು, ಹೆಗಲಿಗೆ ಹೆಗಲು ಕೊಟ್ಟು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತೇನೆ. ಇದು ನನ್ನದೇ ಸಮಾಜದ ಕಾರ್ಯ ಎಂದು ತಿಳಿದು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ನಮ್ಮ ಸರಕಾರ ಜನರಿಗೋಸ್ಕರ ಇರುವ ಸರಕಾರ. ಜನಪರ ನಿಲುವಿನ ಸರಕಾರ ಎಂದ ಅವರು, ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಸ್ಥಳವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.ನಾನು ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 140 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಹಿರಿಯ ಸಚಿವರಾದ ಎಚ್‌.ಕೆ.ಪಾಟೀಲ ಅವರು ಸೌದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಕ್ರಮ ತೆಗೆದುಕೊಂಡಿದ್ದಾರೆ. ಪ್ರಾಧಿಕಾರ ರಚಿಸಿ ಕೇಂದ್ರ ಸರಕಾರದಿಂದ 110 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜಹಂಸಗಡ ಅಭಿವೃದ್ಧಿಗೂ ಈಗಾಗಲೆ ಒಂದು ಕೋಟಿ ರೂ. ಮಂಜೂರು ಮಾಡಿದ್ದು, ಇನ್ನೂ ಹೆಚ್ಚಿನ ಸಹಾಯ ನೀಡುವ ವಿಶ್ವಾಸವಿದೆ. ಅವರು ನನಗೆ ಆದರ್ಶ ವ್ಯಕ್ತಿ. ಅವರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.   

ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಶ್ರೀಗಳು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಪ್ರವಾಸೋದ್ಯಮ ಮತ್ತು ಕಾನೂನು ಸಚಿವರಾದ ಎಚ್‌.ಕೆ.ಪಾಟೀಲ, ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕರಾದ ಆಸೀಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್‌.ಪಾಟೀಲ, ಆರಿ​‍್ವ.ಪಾಟೀಲ, ಇಂದಿರಾಬಾಯಿ ಮಳಲಿ, ರೆಡ್ಡಿ ಸಂಘದ ಅಧ್ಯಕ್ಷರೂ, ಬಾಲಾಜಿ ದೇವಸ್ಥಾನ ಟ್ರಸ್ಟ್‌ ಕಮಿಟಿಯ ಅಧ್ಯಕ್ಷರಾದ ರಾಮಣ್ಣ ಮುಳ್ಳೂರು, ಟ್ರಸ್ಟ್‌ ಪದಾದಿಕಾರಿಗಳು, ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.