ಧಾರವಾಡ, 14 : ದಿ. ಚನ್ನಬಸಪ್ಪ ಕರಾಳೆ ಗಡಿಭಾಗ ಯಕ್ಸಂಬಾದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಹರಿಕಾರರು. ಅವರ ಜೀವನದ ಯಶೋಗಾಥೆ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೆಂದು ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ ಅಭಿಪ್ರಾಯ ಪಟ್ಟರು.
ಅವರು ಚಿಕ್ಕೋಡಿ ತಾಲೂಕಿನ ಗಡಿಭಾಗ ಯಕ್ಸಂಬಾದ ಶ್ರೀ ಚನ್ನಬಸಪ್ಪ ಕರಾಳೆ ಜನತಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಲಿಂ. ಚನ್ನಬಸಪ್ಪ ಕರಾಳೆ ದತ್ತಿ ಉದ್ಘಾಟಿಸಿ 2025ರ ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ದಿ. ಚನ್ನಬಸಪ್ಪ ಕರಾಳೆ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡವರ ಪಾಲಿನ ಭಾಗ್ಯವಿದಾತರಾಗಿದ್ದರು. ಅವರು ಜನಸೇವೆಯಲ್ಲಿ ತೃಪ್ತಿ ಕಂಡ ಮಹಾನುಭಾವರು. ಅಂತಹ ತ್ಯಾಗ ಸೇವೆಯನ್ನು ಇಂದಿನ ವಿದ್ಯಾರ್ಥಿಗಳು ಸ್ಮರಿಸಬೇಕು. ಆಧುನಿಕತೆಗೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೋಳ್ಳಬೇಕು ಕೃತಕ ಬುದ್ದಿಮತ್ತೆಯ ಈ ಕಾಲಘಟ್ಟದಲ್ಲಿ ಜ್ಞಾನದ ಕ್ಷಿತಿಜವನ್ನು ವಿದ್ಯಾರ್ಥಿಗಳು ವಿಸ್ತರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ ದಿ. ಚನ್ನಬಸಪ್ಪ ಕರಾಳೆ ಅವರು ಯಕ್ಸಂಬಾ ಭಾಗದಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಸಹಸ್ರಾರು ವಿದ್ಯಾರ್ಥಿಗಳಿಗೆ 50ರ ದಶಕದಲ್ಲಿ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಪುಣ್ಯ ಪುರುಷರು. ಅಂತಹ ಯುಗ ಪ್ರವರ್ತಕರ ಇತಿಹಾಸವನ್ನು ವಿದ್ಯಾರ್ಥಿಗಳು ಅರಿಯಲೇಬೇಕು. ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ. ಕರಾಳೆ ಕುಟುಂಬದವರು ದೂರದ ಕ.ವಿ.ವ ಸಂಘದಲ್ಲಿ ತಮ್ಮ ಹಿರಿಯರ ಹೆಸರಿನಲ್ಲಿ ದತ್ತಿ ಇರಿಸಿ ಸ್ಮರಿಸಿಕೋಳ್ಳುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ. ಎಲ್. ಪಾಟೀಲ ಅಭಿನಂದನಾ ಪರ ನುಡಿಗಳನ್ನಾಡಿ ಲಿಂ. ಚನ್ನಬಸಪ್ಪ ಕರಾಳೆ ಉದಾರಿಗಳು, ಸಹೃದಯಿಗಳು ಮಾತ್ರವಲ್ಲ ಮಹಾನ್ ಕರುಣಾನಿಧಿಗಳು ಆಗಿದ್ದರು. ಯಕ್ಸಂಬಾ ಭಾಗದಲ್ಲಿ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಭೀಕರ ಬರಗಾಲ ಆವರಿಸಿದಾಗ ಸುತ್ತಲಿನ ಜನರಿಗೆ ಅನ್ನದಾಸೋಹ ಮಾಡುವುದರ ಮೂಲಕ ಮಹಾದಾಸೋಹಿಗಳು ಎನಿಸಿಕೊಂಡರು. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳಸಿ ‘ಧಾರವಾಡದ ಕರ್ನಾಟಕ ಕಾಲೇಜ ಹಾಗೂ ಕೆ.ಎಲ್.ಇ ಸಂಸ್ಥೆಗೆ’ ಉದಾರ ಆರ್ಥಿಕ ಸಹಾಯ ಮಾಡಿದರು. ಅಪ್ಪಟ ಗಾಂಧಿವಾದಿಗಳಾದ ಅವರು ಉಜ್ವಲ ದೇಶ ಭಕ್ತರು ಆಗಿದ್ದರು. ಡಾ. ಬಿ. ಆರ್. ಅಂಬೇಡ್ಕರ, ಗಾಂಧೀಜಿ, ನೆಹರೂ ಮುಂತಾದವರ ಜೊತೆ ಉತ್ತಮ ರಾಜಕೀಯ ಸಂಬಂಧ ಹೊಂದಿದ್ದರು. ಅವರು ಮಾಡಿದ ಪತ್ರವ್ಯವಹಾರಗಳು ಇಂದಿಗೂ ಸಹ ದಾಖಲೆ ರೂಪದಲ್ಲಿ ಇವೆ ಎಂದು ಹೇಳಿದರು.
ನಿಪ್ಪಾಣಿಯ ವಿದ್ಯಾ ಸಂವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ ಅವರಿಗೆ 2025ರ ಲಿಂ. ಚನ್ನಬಸಪ್ಪ ಕರಾಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟಿವಾಲೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕ.ವಿ.ವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗು. ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿ ದಾನಿಗಳಾದ ರಾಜೇಂದ್ರ ಕರಾಳೆ, ಸಂಜೀವ ಕರಾಳೆ, ಮಲ್ಲಿಕಾರ್ಜುನ ಕರಾಳೆ ಇದ್ದರು.
ಕ.ವಿ.ವ ಸಂಘದ ನೂತನ ಪದಾಧಿಕಾರಿಗಳಿಗೆ ಕರಾಳೆ ಕುಟುಂಬದವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಶ್ರೀಮತಿ. ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ಬಾಳಪ್ಪ ಚಿನಗುಡಿ, ಎನ್. ಎಸ್. ಕಾಶಪ್ಪನವರ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು, ಗಣ್ಯರು, ಕರಾಳೆ ಪರಿವಾರದವರು, ಅಭಿಮಾನಿಗಳು ಇದ್ದರು.