ಶಿವಗಿರಿ ಸೊಸೈಟಿಯ ಹಾಗೂ ಬಿಲ್ಲವರ ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
ಬೆಳಗಾವಿ 02: ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿ ಪುಸ್ತಕ ಓದುವ ಹವ್ಯಾಸವನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಮಕ್ಕಳು ಬಿಡುವಿನ ಸಮಯದಲ್ಲಿ ಸಹ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಡೆಕ್ಕನ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ರಮೇಶ್ ದೊಡ್ಡಣ್ಣನವರ್ ಹೇಳಿದರು.
ನಗರದ ಶಿವಗಿರಿ ಸೊಸೈಟಿಯ ಕಾರ್ಯಲಯದಲ್ಲಿ ಸೋಮವಾರ ಆಯೋಜಿಸಲಾದ ಶಿವಗಿರಿ ಕೋ ಆಫ್ ಕ್ರೆಡಿಟ್ ಸೊಸೈಟಿಯ ಹಾಗೂ ಬಿಲ್ಲವರ ಅಸೋಸಿಯೇಷನ್ನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಗಿರಿ ಸೊಸೈಟಿಯ ಹಾಗೂ ಬಿಲ್ಲವರ ಅಸೋಸಿಯೇಷನ್ ಗಳು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಸಂಸತವಾಗಿದೆ. ಮಕ್ಕಳು ಇದನ್ನು ಸದುಪಯೋಗ ಮಾಡಿಕೊಂಡು, ಉತ್ತಮ ಅಂಕಗಳಿಸಿ ಪೋಷಕರ ಹೆಸರು ತರಬೇಕು. ಜತೆಗೆ ನಿಮ್ಮ ಜೀವನದ ಗುರಿಯನ್ನು ಮುಟ್ಟಬೇಕು ಎಂದು ಹೇಳಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಣಿಕಂಠ ಪೂಜಾರಿ ಮಾತನಾಡಿ, ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕಾದರೆ ಪೋಷಕರು ಮಕ್ಕಳ ಮೊಬೈಲ್ ಗೀಳನ್ನು ಬೀಡಿಸಬೇಕು. ಮಕ್ಕಳ ಏಳಿಗೆ ಪೋಷಕರ ಕೈಯಲ್ಲಿದೆ. ಹಾಗಂತ ಮಕ್ಕಳು ಶಾಲೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕು ಎಂದು ಒತ್ತಡ ಹಾಕಬಾರದು, ಅವರಿಗೆ ಪ್ರೀತಿಯಿಂದ ಹೇಳಿ, ಪ್ರೋತ್ಸಾಹಿಸಿದರೆ ಸಾಕು ಎಂದು ಸಲಹೆ ನೀಡಿದರು.
ಸೊಸೈಟಿಯ ಅಧ್ಯಕ್ಷ ರಾದ ಸುಜನ್ ಕುಮಾರ್ ಮಾತನಾಡಿ ಸಂಸ್ಥೆಯಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಿ ಹಾಗು ವಿದ್ಯಾರ್ಥಿಗಳಿಗೆ ಸಹಾಯ-ಸಹಕಾರ ನೀಡಲು ಸಂಸ್ಥೆ ಸದಾ ಸಿದ್ಧವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 150 ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ, ಪುಸ್ತಕಗಳನ್ನು ಪಡೆದುಕೊಂಡರು.
ಸಂಘದ ಉಪಾಧ್ಯಕ್ಷ ಸುಂದರ್ ಕೋಟಿಯನ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾದ ಪ್ರಕಾಶ್ ಪೂಜಾರಿ, ಜಿ.ಜಿ. ಚಿತ್ನಿಸ್ ಶಾಲೆಯ ಪ್ರಾರ್ಚಾಯ ನವೀನ ಶೆಟ್ಟಿಗಾರ್, ಬಿಲ್ಲವ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು, ಸೊಸೈಟಿಯ ನಿರ್ದೇಶಕರು ಮತ್ತು ಸಿಬ್ಬಂದಿ ಇತರರು ಇದ್ದರು. ವ್ಯವಸ್ಥಾಪಕ ಚಂದ್ರ. ಎಚ್ .ಪೂಜಾರಿ ನಿರೂಪಿಸಿ, ವಂದಿಸಿದರು.