ಅಥಣಿ, 03 : ರಾಜ್ಯದಲ್ಲಿ ಮುಂದಿನ ಅವಧಿಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಮತ್ತು ನಾನೇ ನೀರಾವರಿ ಸಚಿವನಾಗಿ ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಲ್ಲಿ ಸಂಪೂರ್ಣ ನೀರಾವರಿಗೊಳಪಡಿಸುವೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು ಉದ್ಯಮಿ ರವಿ ಪೂಜಾರಿಯವರ ಆರ್.ಎಸ್.ಪಿ ಸಂಸ್ಥೆಯ ನವೀಕರಣ ಕಛೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹೇಶ ಕುಮಠಳ್ಳಿ ಶಾಸಕರಿದ್ದ ಸಮಯದಲ್ಲಿ ಕಕಮರಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಳಪೆ ಮಟ್ಟದ್ದಾಗಿದ್ದರೂ ಕೂಡ ಈಗ ಆ ವಿಷಯದ ಕುರಿತು ನಾನು ಚರ್ಚಿಸದೇ ಮುಂದಿನ ಬಾರಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಇದನ್ನು ಸರಿ ಪಡಿಸುವುದಾಗಿ ಹೇಳಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲರು ತಮ್ಮ ಅಧಿಕಾರವಧಿಯಲ್ಲಿ ಸರಕಾರದ ಅನುದಾನದ ಜೊತೆಗೆ ತಮ್ಮ ಸ್ವಂತದ ಹಣ ವೆಚ್ಚ ಮಾಡಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಒಂದು ಹಂತಕ್ಕೆ ತಂದರು ಆದರೆ ನೀರಾವರಿ ಯೋಜನೆಗೊಳಪಡುವ ಜನರೇ ಶ್ರೀಮಂತ ಪಾಟೀಲರಿಗೆ ಮತ ಹಾಕಲಿಲ್ಲ ಎಂದ ಅವರು ಯಾವುದೇ ರಾಜಕೀಯ ಮಾಡದೇ ಸ್ಥಳೀಯ ಶಾಸಕರು, ನೀರಾವರಿ ಸಚಿವರು ವಿಶೇಷ ಆಸಕ್ತಿ ತೋರಿ ಈ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಕಾಗವಾಡ ಕ್ಷೇತ್ರದ ರೈತ ಹಿತ ಕಾಪಾಡಲಿ ಎಂದರು.
ಅಥಣಿ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಮಾಜಿ ಶಾಸಕ, ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಚರ್ಚಿಸುವುದಾಗಿ ಹೇಳಿದ ಅವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಗುರಿಯಾಗಿದೆ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಮಂಜೂರಾಗಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ದಾರಿ ತಪ್ಪಿಸಿದ್ದಾರೆ ಎಂದ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸತತ ಪ್ರಯತ್ನದ ಫಲವಾಗಿಯೇ ಅಮ್ಮಾಜೇಶ್ವರಿ ಏತ ನೀರವರಿ ಯೋಜನೆ ಅನುಷ್ಠಾನಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ, ಉದ್ಯಮಿ ರವಿ ಪೂಜಾರಿ, ಧುರೀಣರಾದ ಸಂತೋಷ ಕಕಮರಿ, ಸತ್ಯಪ್ಪಾ ಬಾಗೆನ್ನವರ, ತಮ್ಮಣ್ಣಾ ಪೂಜಾರಿ, ರಾಜೇಂದ್ರ ಐಹೊಳೆ, ಮಲ್ಲಿಕಾರ್ಜುನ ಅಂದಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.