ಬಳ್ಳಾರಿ 03: ಜಿಲ್ಲೆಯ ಎಲ್ಲಾ ಶಾಲಾ ಆವರಣಗಳಲ್ಲಿ ನೀರು ಸಂಗ್ರಹಿಸುವ ಎಲ್ಲಾ ಪರಿಕರಗಳನ್ನು ಶುಚಿಗೊಳಿಸುವ ಮೂಲಕ ಡೆಂಗ್ಯೂ ಹರಡುವ ಸೊಳ್ಳೆಮರಿ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದರು.
ಶಾಲೆಗಳ ಆರಂಭದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಾದ್ಯಂತ ಶಾಲೆಗಳಿಗೆ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ನಂದಿ ವಸತಿ ಶಾಲೆಗೆ ಸೋಮವಾರ ಭೇಟಿ ನೀಡಿ ಪರೀಶೀಲನೆ ನಡೆಸಿ ಅವರು ಮಾತನಾಡಿದರು.
ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿದ್ದು, ಈ ವರ್ಷ ಮಳೆಗಾಲ ಮೇ ತಿಂಗಳಲ್ಲಿಯೇ ಆರಂಭವಾಗಿರುವುದರಿಂದ ಶಾಲಾ ಆವರಣದಲ್ಲಿ ಕಂಡುಬರಬಹುದಾದ ನೀರು ಸಂಗ್ರಹಕಗಳಾದ ಪ್ಲಾಸ್ಟಿಕ್ ಕಪ್, ತೆಂಗಿನ ಚಿಪ್ಪು, ಮಡಿಕೆಗಳು, ಮುಂತಾದವುಗಳನ್ನು ವಿಲೇವಾರಿ ಮಾಡಬೇಕು ಎಂದರು.
ಬಳಕೆಗಾಗಿ ನೀರು ಸಂಗ್ರಹಿಸುವ ಡ್ರಮ್, ನೀರಿನ ತೊಟ್ಟಿ, ಸಂಪ್ ಮುಂತಾದವುಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿ ಸರಿಯಾದ ರೀತಿಯಲ್ಲಿ ಮುಚ್ಚಳ ಮುಚ್ಚಿ ಡೆಂಗ್ಯೂ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆ ಮೊಟ್ಟೆ ಇಟ್ಟು ಸಂತಾನವೃದ್ಧಿಗೆ ಅವಕಾಶವಿಲ್ಲದಂತೆ ಮಾಡಬೇಕು. ಡೆಂಗ್ಯೂ ರೋಗ ತಡೆಗೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುವ ಜೊತೆಗೆ ಮಕ್ಕಳಿಗೆ ಡೆಂಗ್ಯೂ ಸೇರಿದಂತೆ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಚಿಕುನ್ಗುನ್ಯಾ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರ ಮುಂತಾದವುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಶಾಲೆಗಳಿಗೆ ಆಗಮಿಸುವ ವೈದ್ಯಕೀಯ ತಂಡ ನೀಡುವ ಸಲಹೆಗಳನ್ನು ಅನುಸರಿಸಿ ರೋಗ ತಡೆಗೆ ಸಹಕರಿಸಬೇಕು ಎಂದು ಶಾಲಾ ಮುಖ್ಯ ಗುರುಗಳಿಗೆ ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, ಖಾಸಗಿ ವಸತಿ ಶಾಲೆಗಳಲ್ಲಿ ಬಸ್ಸುಗಳ ಟೈರ್ಗಳನ್ನು ಸೂಕ್ತ ವಿಲೇವಾರಿ ಮಾಡಬೇಕು. ಎಲ್ಲಾ ಶಾಲೆಗಳಲ್ಲಿ ಸಿಂಟೆಕ್ಸ್ಗಳನ್ನು ಶುಚಿಗೊಳಿಸಿ ಸರಿಯಾದ ಮುಚ್ಚಳ ಇರುವಂತೆ ಹಾಗೂ ಜೊತೆಗೆ ಶಾಲಾ ಆವರಣದಲ್ಲಿ ಯಾವುದೇ ನೀರು ನಿಲ್ಲದಂತೆ ಮುತುವರ್ಜಿ ವಹಿಸುವ ಮೂಲಕ ಮಕ್ಕಳಿಗೆ ಸೊಳ್ಳೆ ಕಚ್ಚುವಿಕೆಯಿಂದ ಬರುವ ರೋಗಗಳು ಬರದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ನಿರಂತರವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಸುಟ್ಟ ಆಯಿಲ್ ಹಾಕಬೇಕು ಮತ್ತು ಮಕ್ಕಳು ಉದ್ದ ತೋಳಿನ ಶರ್ಟ್ ಹಾಗೂ ಪಾದದವರೆೆ ರಕ್ಷಿಸುವ ಪ್ಯಾಂಟ್ ಧರಿಸಲು ಸೂಚಿಸಬೇಕು. ಆರೋಗ್ಯ ಇಲಾಖೆಯಿಂದ ಸಿದ್ದಪಡಿಸಿರುವ ವೀಡೀಯೋಗಳನ್ನು ಸ್ಮಾರ್ಟ್ ಕ್ಲಾಸ್ ಮೂಲಕ ಪ್ರದರ್ಶಿಸಿ ಹೆಚ್ಚಿನ ಜಾಗೃತಿ ನೀಡಬೇಕು ಎಂದು ಹೇಳಿದರು.
ಬಳಿಕ ಕುರುಗೋಡು ತಾಲ್ಲೂಕಿನ ಕಲ್ಲುಕಂಭ, ಎಮ್ಮಿಗನೂರು, ಸಿದ್ದಮ್ಮನಹಳ್ಳಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ.ಮಂಜುನಾಥ ಜವಳಿ, ಡಾ.ಅರುಣ್ ಕುಮಾರ್, ಡಾ.ಫಾರೂಖ್ ಮಹಮ್ಮದ್, ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಎನ್ವಿಬಿಡಿಸಿಪಿ ಸಲಹೆಗಾರ ಪ್ರತಾಪ್, ಸಿಆರ್ಪಿ ಸ್ವರ್ಣಪ್ರಭ, ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ, ಬಸವನಗೌಡ, ಬಸವರಾಜ, ಕೃಷ್ಣಮೂರ್ತಿ, ಪ್ರಶಾಂತ್, ಸಿಹೆಚ್ಓ ತಿಮೋತಿ, ಶೇಕ್ಷಾವಲಿ ಸೇರಿದಂತೆ ಶಾಲಾ ಮುಖ್ಯ ಗುರುಗಳು ಹಾಗೂ ಮಕ್ಕಳು ಹಾಜರಿದ್ದರು.