ದೇವರಹಿಪ್ಪರಗಿ 11: ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಹೆಚ್ಚಿಸಬೇಕು. ಸ್ವಚ್ಛತೆಗೆ ಧಕ್ಕೆಯಾದರೆ ಸೊಳ್ಳೆಗಳ ಹಾವಳಿ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಮತ್ತು ಆ ಸೊಳ್ಳೆಗಳಿಂದ ಹರಡುವ ಮಾರಕ ಸಾಂಕ್ರಾಮಿಕ ರೋಗಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿಯ ಉದ್ದೇಶ ಎಂದು ಸಿಂದಗಿ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಧರ ಕುಲಕರ್ಣಿ ತಿಳಿಸಿದರು. ಪಟ್ಟಣದ ಬಿ.ಎಲ್.ಡಿ.ಈ ಸಂಸ್ಥೆಯ ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಆವರಣದಲ್ಲಿ ಡೆಂಗು ಮುಕ್ತ ಶಾಲೆ ಆರೋಗ್ಯ ಅಭಿಯಾನದಡಿ ಶಾಲೆ, ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ, ಸಾರ್ವತ್ರಿಕಾ ಲಸಿಕಾ ಅಭಿಯಾನ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಸಾಂಕ್ರಾಂಮಿಕ ರೋಗಗಳ ಕುರಿತು ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಜನ ಜಾಗೃತಿ ಕುರಿತು ಮಾತನಾಡಿ, ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಳಿಂದ ಮುಕ್ತವಾಗುವ ಮೂಲಕ ಆರೋಗ್ಯ ಭಾರತ ನಿರ್ಮಾಣದ ಉದ್ದೇಶ ಸಫಲಗೊಳ್ಳಲು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ, ಸಾಂಕ್ರಾಂಮಿಕ ರೋಗ ತಡೆ ಹಾಗೂ ಲಸಿಕಾ ಕಾರ್ಯಕ್ರಮದ ಕುರಿತು ಜನತೆಗೆ ಅರಿವು ಮೂಡಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ಶಾಲೆಯ ವಿಜ್ಞಾನ ಶಿಕ್ಷಕರನ್ನು ಈ ಅಭಿಯಾನದಲ್ಲಿ ಭಾಗವಹಿಸಿ ಪ್ರತಿ ಶನಿವಾರ ವಿದ್ಯಾರ್ಥಿಗಳ ಮೂಲಕ ಪಾಲಕರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.
ಆ ಮೂಲಕ ಮಧ್ಯಾಹ್ನ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವ ಕಾರಣ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಹಾಗೂ ಸಮಾಜಕ್ಕೆ ಮಾಹಿತಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಮಲೇರಿಯಾ ಅಧಿಕಾರಿಗಳಾದ ಪ್ರಭು ಜಂಗಿನಮಠ ಅವರು ಮಾತನಾಡಿ,ಸಾರ್ವಜನಿಕರು ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಲು ಪೂರಕವಾದ ವಾತಾವರಣ,ಸೃಷ್ಟಿ ನಮ್ಮಿಂದಲೇ ಸಾಧ್ಯ, ಸ್ವಚ್ಚತೆಗೆ ಒತ್ತು ನೀಡಿ ರೋಗ ತಾನಾಗಿಯೇ ದೂರಾಗುತ್ತದೆ ಎಂದರು.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ವ್ಹಿ.ಎಂ.ಪಾಟೀಲ ಅವರು ಮಾತನಾಡಿ, ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ನಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು.
ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು. ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು ಎಂದರು.ಪಟ್ಟಣದ ಚೈತನ್ಯ ಹಿರಿಯ ಪ್ರಾಥಮಿಕ ಶಾಲೆ, ವಾಲ್ಮೀಕಿ ಪ್ರಾಥಮಿಕ ಶಾಲೆ, ಉರ್ದು ಪ್ರೌಢಶಾಲೆ ಹುಣಶ್ಯಾಳ ಹಾಗೂ ತಾಲೂಕಿನ ಇತರ ಗ್ರಾಮಗಳ ಶಾಲೆ, ಪ್ರೌಢಶಾಲೆಯ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.ಇದೇ ಸಂಧರ್ಭದಲ್ಲಿ ಎಚ್.ಐ.ಓ ರಾಮನಗೌಡ ಪಾಟೀಲ, ಸಿ.ಎಚ್.ಒ ಕಿರಣ್,ವಾಲ್ಮೀಕಿ ಪ್ರೌಢಶಾಲೆ ಶಿಕ್ಷಕರಾದ ಅರುಣ ಕುಮಾರ ಸೇರಿದಂತೆ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.