ಜಿಲ್ಲೆಯ ಜಲಪ್ರದೇಶಗಳಲ್ಲಿ ಅನಧಿಕೃತ ಪ್ರವೇಶ ನಿರ್ಭಂಧಿಸಿ, ಜಿಲ್ಲಾಧಿಕಾರಿ ಆದೇಶ

District Collector orders to prohibit unauthorized entry into district water bodies

ಧಾರವಾಡ 14: ಸನ್ 2025-26 ನೇ ಸಾಲಿನ ಮುಂಗಾರು ಅವಧಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಈ ಸಂಬಂಧ ಯಾವುದೇ ಅವಘಡಗಳಿಗೆ ಆಸ್ಪದವಿರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ.  

ಇತ್ತೀಚಿನ ದಿನಗಳಲ್ಲಿ ಹಲವಾರು ಸಾರ್ವಜನಿಕರು, ಪ್ರವಾಸಿಗರು ಜಿಲ್ಲೆಯ ವಿವಿದ ಜಲಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು ಹಳ್ಳ-ಕೊಳ್ಳಗಳು ಜಲಪಾತಗಳು, ಕೆರೆಗಳು, ಕೃಷಿ ಹೊಂಡಗಳು ಅಥವಾ ಅಪಾಯ ಮಟ್ಟಕ್ಕಿಂತ ಹೆಚ್ಚಾಗಿ ನೀರು ಸಂಗ್ರಹವಿರುವ ಸ್ಥಳಗಳ ನೀರಿನಲ್ಲಿ ಇಳಿಯುವುದು, ಈಜುವುದು, ಮೋಜು, ಮಸ್ತಿ, ಸೆಲ್ಪಿ ಅಥವಾ ಫೋಟೋಗಳನ್ನು ತೆಗೆಯುವುದು, ರೀಲ್ಸ್‌ಗನ್ನು ಮಾಡುವುದು ಮತ್ತು ಜಾನುವಾರುಗಳನ್ನು ನೀರಿನ ದಢದಲ್ಲಿ ಬಿಡುವುದು ಹಾಗೂ ನೀರಿನಲ್ಲಿ ಜಾನುವಾರುಗಳ ಮೈ ತೊಳೆಯುವದು, ಬಟ್ಟೆ ತೊಳೆಯುವುದು ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ನೀರಿನಲ್ಲಿ ಮುಳುಗಿ ಜನ ಮತ್ತು ಜಾನುವಾರುಗಳು ದುರ್ಮರಣ ಹೊಂದುವ ಸಾಧ್ಯತೆಗಳಿರುವದರಿಂದ ಜೂನ್ 11, 2025 ರಂದು ನಡೆಸಲಾದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಚಟುವಟಿಕೆಗಳನ್ನು ನಿಬಂರ್ಧಿಸಲಾಗಿದೆ.  

ಸಾರ್ವಜನಿಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಧಾರವಾಡ ಜಿಲ್ಲೆಯಾದ್ಯಂತ ಇರುವ ಒಲಪಾತಗಳು ಕೆರೆಗಳು ಹಳ್ಳ-ಕೊಳ್ಳಗಳು, ಹೊಂಡಗಳು ಅಥವಾ ಅಪಾಯ ಮಟ್ಟಕ್ಕಿಂತ ಹೆಚ್ಚಾಗಿ ನೀರು ಸಂಗ್ರಹವಿರುವ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ಇಳಿಯುವುದು, ಸ್ನಾನ ಮಾಡುವುದು. ಮುಳುಗಿ-ಎಳುವುದು, ಈಜುವುದು, ಯಾವುದೇ ತರಹದ ಸಾಹಸ ಚಟುವಟಿಕೆ ನಡೆಸುವುದು ಇತ್ಯಾದಿ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ನಿಬಂರ್ಧಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿರುತ್ತಾರೆ.  

ಈ ಆದೇಶದ ಉಲ್ಲಂಘನೆಯು ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 51(ಛ) ಮತ್ತು ಸಂಬಂಧಿತ ನಿಯಮ, ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ದಂಡನೀಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.