ಮುಂಡರಗಿ 14: ತವರು ಮನೆಬಿಟ್ಟು, ಕೊಟ್ಟ ಮನೆಗೆ ಬಂದು ಆ ಮನೆ ಬೆಳಗುವಂತೆ ಜೀವ ಸವಿಸಿ ಹೆತ್ತ ಮಕ್ಕಳನ್ನು ಅಕ್ಕರೆಯಿಂದ ಸಾಕಿ, ಸಲುಹಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತಾಯಿಯ ಋಣವನ್ನು ಎಷ್ಟು ಜನ್ಮವೆತ್ತರೂ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆ ತಾಯಿ ಕಣ್ಣೀರು ಹಾಕಿದರೆ ಹಾಕಿಸಿದವರಿಗೂ ಭವಿಷ್ಯದಲ್ಲಿ ಕೇಡು ಹಾಗೂ ಕಣ್ಣೀರು ತಪ್ಪಿದ್ದಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ತಮ್ಮ ಭಾವನಾತ್ಮಕ ನುಡಿಗಳನ್ನು ನುಡಿದರು.
ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿ, ಹುಬ್ಬಳ್ಳಿಯ ಅವ್ವ ಸೇವಾಟ್ರಸ್ಟ್ ಸಹಯೋಗದಲ್ಲಿ ನಡೆದ ಅವ್ವನನ್ನು ಕುರಿತು ವಿಶೇಷ ಉಪನ್ಯಾಸ, 1831ನೇ ಮಾಸಿಕ ಶಿವಾನುಭವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆತ್ತವರು ಇತ್ತೀಚೆಗೆ ತಮ್ಮ ಕೊನೆಯ ದಿನಗಳನ್ನು ಅತ್ಯಂತ ಕಷ್ಟದಿಂದ ಕಳೆಯುತ್ತಿರುವ ಸಂಗತಿಗಳನ್ನು ಕೇಳಿದಾಗ ಮನಸ್ಸಿಗೆ ಸಾಕಷ್ಟು ನೋವು ಎನಿಸುತ್ತದೆ. ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ತ್ಯಾಗಮಯಿ ಜೀವನದುದ್ದಕ್ಕೂ ಖುಷಿಖುಷಿಯಾಗಿರಬೇಕು. ಆದರೆ, ಇತ್ತೀಚಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಕುಟುಂಬ ಎಂದರೆ ಗಂಡ-ಹೆಂಡತಿ ಎನ್ನುವಂತಾಗಿದೆ. ಕೂಡು ಕುಟುಂಬಗಳು ದೂರವಾಗಿ ಬಹಳ ದಿನಗಳೇ ಆಗಿವೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವದು ವಿಷಾಧನೀಯ. ಇದಕ್ಕೆಲ್ಲ ಕಾರಣ ಸಂಸ್ಕಾರಯುತ ಶಿಕ್ಷಣದ ಕೊರತೆಯೇ ಮೂಲ. ಇದನ್ನು ಮನಃಗಂಡು ನಮ್ಮ ತಾಯಿಯ ಸ್ಮರಣೆಗಾಗಿ ಅವ್ವ ಸೇವಾಟ್ರಸ್ಟ್ನ್ನು ಸ್ಥಾಪಿಸಿ ಹೆತ್ತವರ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸಗಳನ್ನು ಕಳೆದ 15 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಅದರ ಜೊತೆಗೆ ಹಲವಾರು ಸಮಾಜಮುಖಿ ಕೆಲಸ ಮಾಡುವ ಮೂಲಕ ಪ್ರತಿಭಾವಂತರಿಗೆ, ಅಂಧ-ಅನಾಥರಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವ್ವ ಸೇವಾಟ್ರಸ್ಟ್ ತನ್ನ ಸಮಾಜಮುಖಿ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದೆ. ಶ್ರೀಮಠದಲ್ಲಿ ದತ್ತಿ ನಿಧಿ ಸ್ಥಾಪಿಸಿ, ಆ ಮೂಲಕ ಪ್ರತಿವರ್ಷ ಕಾರ್ಯಕ್ರಮ ಆಯೋಜಿಸಿ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಕೊಡಿಸುವಂತ ಕೆಲಸ ಮಾಡುತ್ತಾ ಬಂದಿದೆ. ಮಠ-ಮಾನ್ಯಗಳು ಇಲ್ಲದೇ ಹೋಗಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಆಗುತ್ತಿತ್ತು. ಮಠ-ಮಾನ್ಯಗಳ ಸೇವೆ ಕೂಡಾ ಅತ್ಯಂತ ದೊಡ್ಡದು. ಮುಂಡರಗಿಯ ಮಠ ಈ ಭಾಗದಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಶತಮಾನದ ಹಿರಿಮೆಯನ್ನು ಹೊಂದಿದ ಈ ವಿದ್ಯಾಸಂಸ್ಥೆ ಇನ್ನೂ ಹೆಚ್ಚೆಚ್ಚು ಅಭಿವೃದ್ಧಿ ಹೊಂದಲಿ. ಅದಕ್ಕೆ ಬೇಕಾದ ಎಲ್ಲ ನೆರವನ್ನು ನಾನು ಕಲ್ಪಿಸುತ್ತೇನೆ. ತಮ್ಮ 84ನೇ ವಯಸ್ಸಿನಲ್ಲಿಯೂ ಶ್ರೀಗಳು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸಮಾಜವನ್ನು ತಿದ್ದಿ ತೀಡುವ ಕೆಲಸದ ಜೊತೆಗೆ ನಮಗೆಲ್ಲ ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಸೇವೆ ಇನ್ನೂ ಹೆಚ್ಚೆಚ್ಚು ಸಮಾಜಕ್ಕೆ ಸಿಗುವಂತಾಗಲಿ ಎಂದರು.
ಸಾನಿಧ್ಯ ವಹಿಸಿದ ಜ. ನಾಡೋಜ ಅನ್ನಾದಾನೀಶ್ವರ ಮಹಾಸ್ವಾಮಿಗಳು ಮಾತನಾಡಿ, ಇತ್ತೀಚಿನ ಶಿಕ್ಷಣದಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಯುತ ಶಿಕ್ಷಣದ ಕೊರತೆಯಿದೆ. ಹೀಗಾಗಿ ಮಕ್ಕಳ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೆತ್ತವರು, ಕುಟುಂಬ, ಸಮಾಜ, ಉಪಕಾರ ಮಾಡಿದವರ ಸ್ಮರಣೆ, ಉತ್ತಮ ನಡತೆಗಳು ಈಗಿನ ವಿದ್ಯಾರ್ಥಿಗಳಿಂದ ದೂರವಾಗುತ್ತಿರುವದು ವಿಷಾಧನೀಯ. ಗುಣಮಟ್ಟದ ಶಿಕ್ಷಣ ಸಿಗದೇ ಇರುವದು ಕೂಡಾ ಇದಕ್ಕೆ ಕಾರಣ. ಈ ನಿಟ್ಟಿನತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಬಸವರಾಜ ಹೊರಟ್ಟಿಯವರು ತಮ್ಮ 45 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅದರ ಜೊತೆಗೆ ತಮ್ಮ ತಾಯಿಯ ಸಂಸ್ಮರಣೆ ಜೊತೆಗೆ ನಾಡಿನ ತಾಯಂದಿರನ್ನು ನೆನೆಯುವ ಕೆಲಸ ಮಾಡುತ್ತಿರುವದು ಅತ್ಯಂತ ಪುಣ್ಯದ ಕೆಲಸ. ಇವರ ಹಾದಿಯಲ್ಲಿ ಸಾಗಿದರೆ ಒಂದು ಸುಂದರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಥ ಒಂದು ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ಪ್ರಶಸ್ತಿಗಳು, ಗೌರವ ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಅರಿತು ಕೆಲಸ ಮಾಡಿದರೆ ಒಂದು ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಬಸವರಾಜ ಹೊರಟ್ಟಿಯಂತಹ ಹಿರಿಯರ ಮಾರ್ಗದರ್ಶನ ನಮಗೆ ಹಾಗೂ ಸಮಾಜಕ್ಕೆ ಬೇಕಾಗಿದೆ. ಇದೇ ವೇಳೆ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಭಾವಚಿತ್ರಕ್ಕೆ ಶ್ರೀಗಳು ಸೇರಿದಂತೆ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿದರು.
ಗದಗ ಜಿಲ್ಲಾ ಅವ್ವ ಸೇವಾ ಟ್ರಸ್ಟ್ ಸಂಚಾಲಕರಾದ ಡಾ. ಬಸವರಾಜ ಧಾರವಾಡ, ಡಿ.ಡಿ.ಪಿ.ಐ. ಆರ್.ಎಸ್. ಬುರಡಿ ಮುಂತಾದವರು ಮಾತನಾಡಿದರು. ಬಿ.ಎಸ್. ನೇಮಗೌಡ್ರ, ಕಮಲಮ್ಮ ಹನಮಂತಗೌಡ ಪಾಟೀಲ, ಎಸ್.ಆರ್. ಚಿಗರಿ, ಮಂಜುನಾಥ ಕುಸುಗಲ್ಲ, ಜಾಫರ ಬಚೇರಿ, ಡಿ.ಟಿ. ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 90 ಕ್ಕಿಂತಲೂ ಹೆಚ್ಚು ಅಂಕ ಪಡೆದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿಯ 38ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಿಂಗರಾಜ ಪಾಟೀಲ, ಬಿ.ಇ.ಓ. ಹೆಚ್.ಎಂ. ಪಡ್ನೇಶಿ, ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಆರ್.ಎಲ್. ಪೊಲೀಸ್ಪಾಟೀಲ, ವೀರನಗೌಡ ಗುಡದಪ್ಪನವರ, ದೇವಪ್ಪ ರಾಮೇನಹಳ್ಳಿ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ ಮುಂತಾದವರು ಉಪಸ್ಥಿತರಿದ್ದರು.
ಡಾ. ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಸ್.ಎಸ್. ಮಠದ, ಆರ್.ಆರ್. ಇನಾಮದಾರ ಕಾರ್ಯಕ್ರಮ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.