ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ: ಬೆಲ್ದಾಳೆ

Environmental protection is everyone's responsibility: Beldale

ಕಾರವಾರ 11: ಕೇವಲ ವರ್ಷಕ್ಕೆ ಒಂದು ದಿನದ ಪರಿಸರ ರಕ್ಷಣೆ ಎಂಬುದು ಸೀಮಿತವಾಗಬಾರದು. ಪ್ರತಿ ದಿನವು ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಶವಾಗಿದೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. 

ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೀದರ  ಅರಣ್ಯ ವಿಭಾಗ, ಬೀದರ್ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಪರಿಸರ ಎಂಬ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ರೂಪದಲ್ಲಿ ಅಂದರೆ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವಿಸುತ್ತ ಇರುತ್ತಿದೆವೆ. ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ  ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನು ನಿಕಟಗೋಳಿಸಿ ಜೀವಜಾಲವನ್ನಾಗಿಸಿದೆ. 

ಹಿಂದಿನ ದಿನಗಳಲ್ಲಿದ್ದ ಪರಿಸರ ಕಾಳಜಿ ಇಂದಿನ ಯುವಕರಲ್ಲಿ ಉಳಿದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು ಯುವಕರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದರು.ಇಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟರೆ ಮುಗಿಯುವುದಿಲ್ಲ, ಪ್ರತಿ ದಿನ ಅವುಗಳನ್ನು ಮಕ್ಕಳಂತೆ ನೋಡಿಕೋಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಗಿಡಗಳ ಬಗ್ಗೆ ಜಾಗೃತಿ ವಹಿಸಿ ಪಾಲನೆ ಪೋಷಣೆ  ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಸಾರ್ಥಕ ಎಂದು ಸಲಹೆ ನೀಡಿದರು. 

ಪರಿಸರವು ಎರಡು ಮುಖದ ನಾಣ್ಯದ ಹಾಗೆ. ಪ್ರೀತಿ, ಮಮತೆ, ವಾತ್ಸಲ್ಯವು ಒಂದು ಶಾಂತತೆಯ ಮುಖವಾದರೆ. ಸುನಾಮಿ, ಭೂಕಂಪ, ಚಂಡಮಾರುತ ಹೀಗೆ ಮುಂತಾದ ಪ್ರಕೃತಿವಿಕೋಪಗಳು ಹಾನಿ ಮಾಡಿದ ಮನುಕುಲಕ್ಕೆ ತಕ್ಕ ಪಾಠ ಕಲಿಸುವ ಇನ್ನೊಂದು ರೌದ್ರ ಮುಖವಾಗಿದೆ. ನಾವು ಒಂದು ಕೈಯಲ್ಲಿ ಏನನ್ನು ಕೋಡುತ್ತೇವೋ  ಅದೇ ನಮಗೆ ಮರಳಿ ಬರುವುದು. ಅಂದರೆ, ನಾವು ಪರಿಸರಕ್ಕೆ ಒಳಿತು ಮಾಡಿದರೆ, ಶಾಂತವಾಗಿರುವ ಪಕೃತಿಯು ನಮಗೊಲಿಯುತ್ತದೆ. ಕೇಡು ಬಯಸಿದರೆ, ಅದೇ ಪ್ರಕೃತಿಯ ರೌದ್ರಾವತಾರವನ್ನು ಕಾಣಬಹುದಾಗಿದೆ. ಆಯ್ಕೆ ನಮ್ಮದೇ. 

ಪರಿಸರ, ಅರಣ್ಯ ಪ್ರದೇಶ, ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ಅಭಿಯಾನಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆಯಾದರೂ, ಅದರಲ್ಲಿ ನಮ್ಮ ಪಾಲು ಸಹ ಅತ್ಯಗತ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನಮ್ಮಿಂದ ಅಳಿಲುಸೇವೆಯಾದರೆ ಪರಿಸರವನ್ನು ಉಜ್ವಲ ರೀತಿಯಲ್ಲಿ ಕಾಣಬಹುದು. ಹೀಗೆ ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೂಂದು ದಿನ ನಮ್ಮ ಜೀವಕ್ಕೆ ತೊಂದರೆಯಾಗಿ, ಮನುಕುಲವೇ ನಾಶವಾಗಿ, ಮನುಷ್ಯನಿಲ್ಲದ ಭೂಮಿಯಾಗುತ್ತದೆ. ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ಪರಿಸರ ದಿನಾಚರಣೆಯ ನಿಲುವು ಎಂದರು.  

ಈ ಸಂದರ್ಭದಲ್ಲಿ ಬೀದರ್ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ  ವಿಜಯಕುಮಾರ್ ವಿ ಜಾಧವ್, ಬೀದರ್ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಗೋಪಾಲ್ ಸಿಂಗ್ ರಾಥೋಡ್,  ಉಪ ವಲಯ ಅರಣ್ಯ ಅಧಿಕಾರಿ ರಘುನಾಥ್ ರಾಥೋಡ್,  ಬಗ್ದಲ್ ಉಪ ವಲಯ ಅರಣ್ಯ ಅಧಿಕಾರಿ ರಾಜಶೇಖರ್,   ಗಸ್ತು ಅರಣ್ಯ ಪಾಲಕರು  ಪರಶುರಾಮ್ ಶಾಪುರ,  ಮುಖಂಡರಾದ ಅನೀಲಕುಮಾರ ಪನ್ನಾಳೆ, ಸುರೇಶ ಮಾಶೆಟ್ಟಿ,  ಚಂದು ಮಡಕಿ, ಚಂದ್ರಯ್ಯಾ ಸ್ವಾಮಿ, ಅನೀಲ್ ಗುನ್ನಳ್ಳಿ,  ವಿಜಯಕುಮಾರ ಗಣಪೂರ, ದೀಪಕ ಮನ್ನಳ್ಳಿ, ಶಮದ ಶಾ,  ಮಲ್ಲಿಕಾರ್ಜುನ ಮುಲಗಿ, ನಾಗಶೆಟ್ಟಿ ಚಟ್ಟನಳ್ಳಿ, ಬಕ್ಕಪ್ಪ ಲಾಲಚಡಿ, ರಮೇಶ ಕೋಳಿ, ಜಗನ್ನಾಥ ಮೂಲಗಿ, ಸಂಗಮೇಶ ಗೌಶಪುರ,  ಕಾಲೇಜ್ ಪ್ರಾಂಶುಪಾಲರಾದ ಧನರಾಜ ಬೀರಾದರ, ಪ್ರೋ ಶರಣಪ್ಪ ಪರಿಸರ ಪ್ರೇಮಿ ಶೈಲೇಂದ್ರ ಕವಡಿ ಮತ್ತಿತರರು ಉಪಸ್ಥಿತರಿದ್ದರು.