ನಮ್ಮನ್ನು ತಾಯಿ ಎತ್ತರಕ್ಕೆ ಆ ದೇವರೂ ಎತ್ತಲು ಸಾಧ್ಯವಿಲ್ಲ - ಕಾಡಸಿದ್ಧೇಶ್ವರ ಸ್ವಾಮೀಜಿ
ವಿಜಯಪುರ 02: ತಾಯಿ ಎಲ್ಲರಿಗಂತಲೂ ಶ್ರೇಷ್ಠ. ನಮಗೆ ಎಷ್ಟು ದೊಡ್ಡ ಪ್ರಶಸ್ತಿಗಳು ಬಂದರು, ಎಷ್ಟು ಎತ್ತರಕ್ಕೆ ಬೆಳೆದರೂ ತಾಯಿ ನಮ್ಮನ್ನು ಎತ್ತಿಕೊಂಡಷ್ಟು ಎತ್ತರಕ್ಕೇ ಆ ದೇವರು ಕೂಡ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಕಣ್ಣೇರಿ ಮಠದ ಪೂಜ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುನಮನ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನಾವು ನಮ್ಮ ಊರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೆಣ್ಣು ಮಕ್ಕಳಿಗಾಗಿ, ತಾಯಂದಿರಿಗಾಗಿ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಬೇಕು. ಊರಿಗೊಂದು ಸಿದ್ಧೇಶ್ವರ ಅಪ್ಪಗಳ ಹೆಸರಿನ ವನಗಳನ್ನು ನಿರ್ಮಾಣ ಮಾಡೋಣ ಎಂದರು.ಪೂಜ್ಯರು ಕೇವಲ ಮೈ ಮುಚ್ಚಿಕೊಳ್ಳುವ ಉದ್ದೇಶಕ್ಕೆ ಬಟ್ಟೆ ತೊಟ್ಟಿದ್ದರು. ಹೊರತು ಸೌಂಧರ್ಯದಿಂದ ಕಾಣಲು ಅಲ್ಲ. ಅಪ್ಪಗಳು ಬೇಗ ಮಲಗಿ, ಬೇಗ ಏಳುತ್ತಿದ್ದರು. ಕೆಲವು ಸಲ ತಡವಾಗಿ ಮಲಗಿದರೂ ಸಹಿತ ಬೇಗ ಏಳುತ್ತಿದ್ದರು. ನಾವು ಅದನ್ನು ರೂಡಿಸಿಕೊಳ್ಳಬೇಕು.
ಭಗವದ್ಗೀತೆಯ 700 ಶ್ಲೋಕಗಳನ್ನು ತೆಗೆದುಕೊಂಡರೆ, ವಚನಗಳನ್ನು ತೆಗೆದುಕೊಂಡರೆ ಅದರಲ್ಲಿ ಹೊಂದಾಣಿಕೆಯಾಗುವುದು ಕೇವಲ ಸಿದ್ಧೇಶ್ವರರು.ಯಾವುದು ಆಚರಣೆಗೆ ಸಾಧ್ಯವಿಲ್ಲವೋ ಅದನ್ನು ಅಪ್ಪಗಳು ಎಂದಿಗೂ ಹೇಳಿಲ್ಲ. ಅವರು ಹೇಳಿದ ಎಲ್ಲವೂ ಆಚರಣೆಗೆ ಸಾಧ್ಯವಿದೆ. ಪತಂಜಲಿಯ ಯೋಗ ಶಾಸ್ತೊ ತೆಗೆದುಕೊಂಡರೂ ಅಲ್ಲಿಯೂ ಹೊಂದಾಣಿಕೆಯಾಗುವುದು ಅಪ್ಪಗಳು ಮಾತ್ರ ಎಂದು ಹೇಳಿದರು.ಅಪ್ಪಗಳು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು, ಗೀಡಮರಗಳನ್ನು ಬೆಳೆಸಬೇಕು, ಮಕ್ಕಳಿಗೆ ನಮ್ಮ ಸಂಪ್ರದಾಯಿಕ ಕ್ರೀಡೆಗಳನ್ನು ಆಡಿಸಬೇಕು.
ಹಳ್ಳಿಗಳ ಪ್ರತಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಅವುಗಳನ್ನು ಬಳಸಬೇಕು ಎಂದು ನಿರಂತರವಾಗಿ ನಮಗೆ ಹೇಳಿಕೊಂಡು ಬಂದಿದ್ದಾರೆ. ನಮ್ಮ ಆಯುಷ್ಯಕ್ಕೆ ಸಾಕಾಗುವಷ್ಟು ಒಳ್ಳೆಯದನ್ನು ಶ್ರೀ ಸಿದ್ಧೇಶ್ವರ ಅಪ್ಪಗಳು ನೀಡಿ ಹೋಗಿದ್ದಾರೆ. ನಾವು ಅವರ ಮಾತನ್ನು ಪಾಲಿಸಬೇಕು ಅಷ್ಟೇ ಎಂದರು.ಭಾಲ್ಕಿ ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡಿ, ಸಿದ್ಧೇಶ್ವರ ಅಪ್ಪಗಳ ವಿನಯ, ನಮೃತೆ ನನ್ನ ಮೇಲೆ ಪ್ರಭಾವ ಬೀರಿತು. ಶ್ರೀಗಳು ಪ್ರತಿಯೋಬ್ಬರನ್ನು ಆತ್ಮೀಯವಾಗಿ ಕಾಣುವ ಹೃದಯವಂತರಾಗಿದ್ದರು ಎಂದರು.
12 ನೇ ಶತಮಾನದ ಅಲ್ಲಮಪ್ರಭು, ಚನ್ನಬಸವಣ್ಣನವರ ಪ್ರತಿರೂಪವಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು 21ನೇ ಶತಮಾನದಲ್ಲಿ ಜ್ಞಾನ ಹಂಚಿದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಶ್ರೀಗಳು ಅತ್ಯಂತ ದಯಾಳು, ಅಂತಃಕರಣ ಮೂರ್ತಿಯಾಗಿದ್ದರು ಎಂದು ಹೇಳಿದರು.ಈ ಸಂದರ್ಭದಲ್ಲಿ ನಾಡಿನ ಸ್ವಾಮೀಜಿಗಳು, ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಸರ್ವ ಭಕ್ತರು ಭಾಗವಹಿಸಿದ್ದರು.