ರೈತರು ಜೈವಿಕ ಗೊಬ್ಬರ ಪದ್ಧತಿಯನ್ನು ಅಳವಡಿಸಿಕೊಳ್ಳಲಿ: ಮಾವರಕ
ರಾಯಬಾಗ 04: ಪ್ರತಿಯೊಬ್ಬ ರೈತರು ಮಣ್ಣಿನ ಪರೀಕ್ಷೆ ಮಾಡುವುದರಿಂದ ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕ ಹೇಳಿದರು.
ಬುಧವಾರ ಪಟ್ಟಣದ ಕೃಷ್ಣಗೋದಾವರಿ ಸಹಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಿಎಂ ಪ್ರಣಾಮ ರೈತರ ಸಂಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತೀಯಾದ ರಸಗೊಬ್ಬರ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ರೈತರು ಭೂಮಿ ಫಲವತ್ತತೆ ಹೆಚ್ಚಿಸಲು ಸಾವಯುವ ಗೊಬ್ಬರ ಬಳಸಬೇಕೆಂದರು. ಮುಂದಿನ ಪೀಳಿಗೆಗಾಗಿ ಭೂಮಿ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ರೈತರು ಜೈವಿಕ ಗೊಬ್ಬರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದರು.
ಕೃಷ್ಣಗೋದಾವರಿ ಸಹಕಾರಿಯ ಕೈಲಾಸ ಪುರಂವಾರ ಮಾತನಾಡಿ, ರೈತರು ಗೊಬ್ಬರ ಹಾಕುವ ಮುಂಚಿತವಾಗಿ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಭೂಮಿಗೆ ತಕ್ಕಂತೆ ಬೆಳೆಯನ್ನು ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಅನುಷ ಪಾಟೀಲ, ನಂದು ದೇಸಾಯಿ, ಸಾಯಿನಾಥ ಮೊರಲವಾರ, ಮಹೇಶ ಮುಗಳಖೋಡ, ಶ್ರೀರಿಷ ಶಹಾಪೂರೆ, ರಾಮಾ ಬಸ್ತವಾಡೆ, ಶ್ರೀಶೈಲ ಸಾಬಾನೆ, ಭೀಮಾ ಬೆಟಗೇರಿ, ಮಹಾದೇವ ಪಾಟೀಲ ಹಾಗೂ ರೈತರು ಇದ್ದರು.