ಕೊಪ್ಪಳ 22 : ಹುಲಿಗಿಯ ಜಾತ್ರೆಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಜನಗಳಿಂದ ಎಐಡಿಎಸ್ಒ ಸಹಿ ಸಂಗ್ರಹ ಅಭಿಯಾನ ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಒ ಪದಾಧಿಕಾರಿಗಳು ಕೊಪ್ಪಳದ ಹುಲಿಗಿ ಗ್ರಾಮದ ಜಾತ್ರೆಯಲ್ಲಿಯಲ್ಲಿ ಬುಧವಾರ ಸಹಿ ಸಂಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಹಯ್ಯಾಳಪ್ಪ ಮಾತನಾಡಿ ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರ ಎನ್ಇಪಿ 2020 ರ ಹೆಸರಲ್ಲಿ 13,800 ಸರ್ಕಾರಿ ಶಾಲೆಗಳನ್ನು ವೀಲೀನೀಕರಣದ ಹೆಸರಿನಲ್ಲಿ ಮುಚ್ಚಲು ಆದೇಶಿಸಿತು. ಎಐಡಿಎಸ್ಒ ನಾಯಕತ್ವದಡಿ ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸೇರಿ 36 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ, ಬೃಹತ್ ಆಂದೋಲನ ರೂಪಿಸಿತು.
ಕೊನೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಎನ್ಇಪಿ 2020 ರದ್ದುಪಡಿಸಿ, ಯಾವುದೇ ನೀತಿಗಳ ಹೆಸರಿಲ್ಲದೆ ಸರ್ಕಾರಿ ಶಾಲೆಗಳನ್ನು, ಕಾಲೇಜು ಮತ್ತು ವಿವಿಗಳನ್ನು ಮುಚ್ಚಲು ಮುಂದಾಗಿದೆ.ಇದರಿಂದ ಸರ್ಕಾರದ ಮೂಲ ಉದ್ದೇಶ, ಶಿಕ್ಷಣದ ಖಾಸಗೀಕರಣವೆಂಬುದು ಸ್ಪಷ್ಟವಾಗಿದೆ. ಸರ್ಕಾರವು ವಿಭಿನ್ನ ಹೆಸರಿನ ಹಬ್ಅಂಡ್ ಸ್ಪೋಕ್ ಹೆಸರಿನಲ್ಲಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ದೂರಿದರು. ರಾಜ್ಯದಲ್ಲಿ 23,436 ಕಿರಿಯ ಪ್ರಾಥಮಿಕ ಶಾಲೆ, 10 ಕ್ಕಿಂತಕಡಿಮೆ ವಿದ್ಯಾರ್ಥಿಗಳಿರುವ 6 ಸಾವಿರ ಶಾಲೆ, 7,821 ಏಕೋಪಾಧ್ಯಾಯ ಶಾಲೆ, 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆಇಲ್ಲ. ಹಲವು ಶಾಲೆಗಳ ಕಟ್ಟಡಗಳು ದುರಸ್ತಿ ಇಲ್ಲದೆಛಾವಣಿ ಸೋರುತ್ತಿದೆ. ರಾಜ್ಯ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಗಂಭೀರ ಸಮಸ್ಯೆಯನ್ನೂ ಪರಿಹರಸದೇ, ಕಡಿಮೆ ದಾಖಲಾತಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದರು.
ಎಐಡಿಎಸ್ಓ ಸಂಘಟನೆಯು ರಾಜ್ಯಾದಾದ್ಯಂತ ಹಮ್ಮಿಕೊಂಡಿರುವ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಕೊಪ್ಪಳದ ಹುಲಿಗಿಯಲ್ಲಿ ಸಹಿ ಸಂಗ್ರಹಿಸಲಾಯಿತು. ಕಾರ್ಯ ಕರ್ತರಾದ ಸದಾಶಿವ, ದೀಲೀಪ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.