ಹೊಸಪೇಟೆ: ಸುಗ್ಗಿಯಲ್ಲೇ ಹಿಗ್ಗಿ ಬಂದದ್ದು ಜನಪದ ಸಾಹಿತ್ಯ: ಎತ್ನಳ್ಳಿ ಮಲ್ಲಯ್ಯ

ಲೋಕದರ್ಶನ ವರದಿ

ಹೊಸಪೇಟೆ 19: ಕನ್ನಡ ನಾಡಿಯಲ್ಲಿ ಸುಗ್ಗಿಯ ಕಾಲವಾದ ಸಂಕ್ರಾಂತಿಯ ಸಂದರ್ಭದಲ್ಲಿ ಜನಪದ ಸಾಹಿತ್ಯ ಹೆಚ್ಚು ಬೆಳೆದು ಬಂದಿರುವುದು ಕಂಡುಬರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಾಧ್ಯಕ್ಷ ಎತ್ನಳ್ಳಿ ಮಲ್ಲಯ್ಯ ತಿಳಿಸಿದರು.

ಕಮಲಾಪುರ ಹೋಬಳಿ ಘಟಕವು ನಗರದ ಗೃಹ ರಕ್ಷಕ ದಳ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎನ್ನುವ ಶ್ರೀವಿಜಯನ ನುಡಿಯಂತೆ, ಅಂದಿನಿಂದ ಇಂದಿನವರೆಗೂ ಪೂರಕ ವಾತಾವರಣ ಒದಗಿದಂತಹ ಸಂದರ್ಭದಲ್ಲಿ ಸಾಹಿತ್ಯ ಹೆಚ್ಚು ರಚನೆಯಾಗಿರುವುದು ಕಂಡುಬರುತ್ತದೆ. ಅದೇ ರೀತಿ ಈ ಕಾರ್ಯಕ್ರಮದಲ್ಲಿ ವಾಚಿಸಿದ ಒಂಭತ್ತು ಜನ ಕವಿಗಳ ಕವನಗಳು ಸಹ ಸಂದರ್ಬ್ಹೊಚಿತವಾಗಿದ್ದವು ಎಂದರು.

ಪ್ರಿಯದಶರ್ಿನಿ ಮಹಿಳಾ ಸಂಘದ ಅಧ್ಯಕ್ಷೆ ಎಸ್.ಡಿ. ಸುಲೋಚನ ಮಾತನಾಡಿ, ಸಾಮಾನ್ಯವಾಗಿ ಕವಿಗಳು ಅಂತಃಕರಣ ಉಳ್ಳವರಾಗಿರುತ್ತಾರೆ.  ಜೀವನಾನುಭವದಲ್ಲಿ ಕಂಡುಕೊಂಡ ದೃಶ್ಯಗಳೇ ಅವರ ಕವನಗಳಲ್ಲಿ ಅಡಕವಾಗಿರುತ್ತವೆ. ಅವರು ಕಟ್ಟುವ ಪದ ಪುಂಜಗಳು ಎಲ್ಲರನ್ನು ತಲುಪುವಂತಿರಬೇಕಷ್ಟೇ ಎಂದರು.

ಸೋ.ದ. ವಿರುಪಾಕ್ಷಗೌಡ, ಅಂಜಲಿ ಬೆಳಗಲ್, ಉಮಾಮಹೇಶ್ವರ, ನಾಗಪುಷ್ಪಲತಾ, ಶೀಲಾ ಬಡಿಗೇರ, ವೈ.ಯಮುನಪ್ಪ, ಶಿವದೇವಯ್ಯ, ವಿ.ಪರಶುರಾಮ್ ಮತ್ತು ಜಿ.ಯರ್ರಿಸ್ವಾಮಿ ಕವನ ವಾಚಿಸಿದರು.

ಕಸಾಪ ಹೋಬಳಿ ಘಟಕಾಧ್ಯಕ್ಷ ದಯಾನಂದ ಕಿನ್ನಾಳ್, ಗೃಹ ರಕ್ಷಕದಳದ ಮುಖ್ಯಸ್ಥ ಎಸ್.ಎಂ.ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.