16 ವರ್ಷದ ದಾಖಲೆ ಮುರಿದ ಭಾರಿ ಮಳೆ: ಜನ ಅಸ್ತವ್ಯಸ್ಥ

Heavy rains break 16-year record: People are in chaos

ಕಾರವಾರ 12: ಕಾರವಾರದಲ್ಲಿ ಗುರುವಾರ ಬೆಳಗಿನ ಜಾವದಿಂದ ಮಳೆ ಒಂದೇ ಸಮನೆ ಸುರಿಯುತ್ತಿದೆ. ಪರಿಣಾಮ ಕಾರವಾರದ ಬಹುತೇಕ ಮುಖ್ಯ ರಸ್ತೆಗಳು ಜಲಮಯವಾಗಿದ್ದವು. ಜನ ಜೀವನ ಅಸ್ತವ್ಯಸ್ತವಾಗಿತ್ತು. ಹಗಲು ಆರು ಗಂಟೆಗಳ ಕಾಲ ಜನರು ಹಾಗೂ ವಾಹನ ಸವಾರರು ಜಲದಿಗ್ಬಂಧನಕ್ಕೆ ಒಳಗಾದರು. ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆ ವಾರ್ಡಗಳು, ಬಸ್ ಡಿಪೋ, ಮಹಾತ್ಮಾ ಗಾಂಧಿ ರಸ್ತೆ, ಹಿಂದೂ ಹೈಸ್ಕೂಲ್ ರಸ್ತೆ, ಹೈಚರ್ಚ ರಸ್ತೆ, ಶೆಜವಾಡ ,ನ್ಯೂ ಕೆಎಚ್ ಬಿ ಕಾಲೂನಿಗಳು ಜಲಾವೃತವಾಗಿ,ರಸ್ತೆ ಅಕ್ಕಪಕ್ಕದ ಮನೆಗಳಿಗೆ ಮಳೆ ನೀರು ನುಗ್ಗಿದ್ದು ,ಅಪಾರ ಹಾನಿ ಸಹ ಉಂಟು ಮಾಡಿದೆ.ಹದಿನಾರು ವರ್ಷಗಳ ಹಿಂದೆ (2009) ಅಕ್ಟೋಬರ್ 2 ರಂದು ಬೆಳಗಿನ ಜಾವ ಮೇಘಸ್ಪೋಟವಾಗಿ ಕಾರವಾರ ನಗರ ಜಲಮಯವಾಗಿತ್ತು. ಈಗ ಮತ್ತೆ ಅಂತಹದ್ದೇ ಸನ್ನಿವೇಶ ಮರುಕಳಿಸಿದೆ. 2009 ರಲ್ಲಿ ಕೆಲ ಗಂಟೆಗಳಲ್ಲಿ 198 ಮಿಲಿ ಮೀಟರ್ ಮಳೆ ಸುರಿದಿತ್ತು. 2025 ಜೂನ್ 12 ರಂದುವ ಕೆಲ ಗಂಟೆಗಳಲ್ಲಿ 200 ಮಿಲಿ ಮೀಟರ್ ಮಳೆ ಸುರಿದಿದೆ .ಮಳೆ ಬೀಳುತ್ತಲೇ ಇದ್ದು ಇದು ಹೀಗೆ ಮುಂದುವರಿದರೆ 300 ಮಿಲಿ ಮೀಟರ್ ದಾಟುವ ಲಕ್ಷಣಗಳು ಇವೆ. ಕಾರವಾರದಲ್ಲಿಸತತ ಮಳೆ ಮುಂದುವರಿದಿದೆ.  

ಕಾರವಾರ ಗ್ರಾಮೀಣ ಭಾಗ ವೈಲವಾಡದಲ್ಲಿ 266.5 ಗುರುವಾರ ಬೆಳಗಿನ ಹೊತ್ತಿಗೆ ಬಿದ್ದಿತ್ತು. ಕಾರವಾರದ ಶಿರವಾಡದಲ್ಲಿ 261 ಮಿಲಿ ಮೀಟರ್ ,ಕಡವಾಡ 249, ಅಮದಳ್ಳಿ 233.5, ಅಂಕೋಲಾದ ಬೊಬ್ರವಾಡದಲ್ಲಿ 214.5 ಮಿಲಿ ಮೀಟರ್ ಮಳೆ ಸುರಿದಿದೆ. ಬೆಳಗಿನಿಂದ ಮಧ್ಯಾಹ್ನ 2 ಗಂಟೆತನಕ ಮಳೆ ಮುಂದುವರಿದಿದೆ. ಇನ್ನೂ ಎರಡು ದಿನ ರೆಡ್ ಅಲರ್ಟ ಇದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ಪ್ರಕೃತಿ ವಿಕೋಪ ನಿರ್ವಹಣಾ ತಂಡ ಅಪತ್ತು ಎದುರಿಸಲು ಸಜ್ಜಾಗಿದೆ.ವಾಹನ ಸಾವರರ ಪರದಾಟ :ನಗರದ ಮುಖ್ಯ ರಸ್ತೆಯಲ್ಲಿ ಅಪಾರವಾಗಿ ಮಳೆ ನೀರು ನಿಂತ ಕಾರಣ ಹಿಂದೂ ಹೈಸ್ಕೂಲ್ ಬಳಿ, ಕೈಗಾ ರಸ್ತೆ ಬಸ್ ಡಿಪೋ ಬಳಿ, ಶೆಜವಾಡ ಬಳಿ ದ್ವಿಚಕ್ರ ವಾಹನ ಸವಾರರು ದಾಟಲಾಗದೆ ನಿಂತಲ್ಲೇ ನಿಂತಿದ್ದರು. ಕಾರ್ ಹಾಗೂ ಮಿನಿ ಬೊಲೇರಾ, ಟಾಟಾ ಏಸ್ ವಾಹನಗಳು ನೀರು ತುಂಬಿದ ರಸ್ತೆಯಲ್ಲಿ ಸಂಚಾರಕ್ಕೆ ಹೆಣಗಿದವು. ಮುಲ್ಲಾ ಸ್ಟಾಪ್ ನಿಂದ ಸೋನಾರವಾಡ, ಸಂಕ್ರಿವಾಡ ಒಳ ರಸ್ತೆ ಸಂಚಾರಕ್ಕೆ ಬಂದ್ ಆಗಿತ್ತು. ಚರ್ಚ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಕೋಣೆನಾಲಾ ತುಂಬಿ ಹರಿದಿದ್ದು, ಅದರ ನೀರು ರಸ್ತೆಗೆ ಹರಿದಿತ್ತು.ಹೂಳೆತ್ತದೆ ಬಿಟ್ಟದ್ದು ಸಮಸ್ಯೆಗೆ ಕಾರಣ :ನಗರದ ಮುಖ್ಯ ನಾಲಾ ,ರಾಜಾ ಕಾಲುವೆ ಕೋಣೇನಾಲಾದ ಹೂಳೆತ್ತದೆ ಬಿಟ್ಟದ್ದು ಮಳೆ ನೀರು ರಸ್ತೆಯಲ್ಲಿ ತುಂಬಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದರು. ನಗರಸಭೆ ನಿರ್ಲಕ್ಷ್ಯ ಬಹುತೇಕ ವಾರ್ಡಗಳಲ್ಲಿ ಮಳೆ ನೀರು ನಿಲ್ಲಲು ಕಾರಣ ಎಂದು ಜನರು ದೂರಿದರು. 

ಕರಾವಳಿಯಲ್ಲಿ ಮಳೆಯ ಅಬ್ಬರ :ಕರಾವಳಿಯ ಐದು ತಾಲೂಕಿನಲ್ಲಿ ಮಳೆ ಜೋರಾಗಿತ್ತು. ಕಾರವಾರದಲ್ಲಿ ಮಳೆ ಹೆಚ್ಚು ಇದ್ದು, ಉಳಿದ ತಾಲೂಕಿನಲ್ಲಿ ಅಷ್ಟಾಗಿ ಅಬ್ಬರ ಇರಲಿಲ್ಲ. ಘಟ್ಟದ ಮೇಲಿನ ಕೆಲ ತಾಲೂಕಿನಲ್ಲಿ ತುಂತುರು ಮಳೆಯಾಗಿದೆ.ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಕಡೆ ನಿಷೇಧ:ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ 766 ರ 15 ಸ್ಥಳಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಭಂರ್ಧಿಸಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಆದೇಶ ಹೊರಡಿಸಿದರು.ಈ ನಿಷೇಧ ಜೂ. 12 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.